
ಮೊದಲ ಪಂದ್ಯಕ್ಕೆ ಟಿಮ್ ಸೌಥಿ, ದ್ವಿತೀಯ ಪಂದ್ಯಕ್ಕೆ ಟ್ರೆಂಟ್ ಬೌಲ್ಟ್ ನಾಯಕ
ಕೇನ್ ವಿಲಿಯಮ್ಸನ್ ಭಾರತ ವಿರುದ್ಧದ ಟಿ ಟ್ವೆಂಟಿ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದಿರುವ ಕಾರಣ ತಂಡದ ಇತರ ಆಟಗಾರರು ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ಭಾರತ ವಿರುದ್ಧದ 3 ಪಂದ್ಯಗಳಿಗೂ 3 ಪ್ರತ್ಯೇಕ ನಾಯಕರನ್ನು ಕಣಕ್ಕಿಳಿಸಲಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದ್ದು, ಜೈಪುರದಲ್ಲಿ ನಡೆಯಲಿರುವ ಮೊದಲನೇ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ನಾಯಕನಾಗಿ ಟಿಮ್ ಸೌಥಿ ಕಣಕ್ಕಿಳಿಯಲಿದ್ದರೆ, ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ಅಥವಾ ಟ್ರೆಂಟ್ ಬೌಲ್ಟ್ ನ್ಯೂಜಿಲೆಂಡ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ. ಹಾಗೂ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ನಾಯಕತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬುದು ಶೀಘ್ರದಲ್ಲಿಯೇ ಹೊರಬೀಳಲಿದೆ.

ನ್ಯೂಜಿಲೆಂಡ್ ತಂಡದ ಈ ನಿರ್ಧಾರದ ಹಿಂದಿದೆ ಕಾರಣ
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ 21ರಂದು ನಡೆಯಲಿರುವ ತೃತೀಯ ಟಿ ಟ್ವೆಂಟಿ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ. ಇದಾದ ಬೆನ್ನಲ್ಲೇ 25ರಿಂದ ಕಾನ್ಪುರದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಟೆಸ್ಟ್ ಪಂದ್ಯಕ್ಕೆ ಆಟಗಾರರು ತಯಾರಿರಬೇಕೆಂಬ ಕಾರಣದಿಂದ ನ್ಯೂಜಿಲೆಂಡ್ ಈ ರೀತಿ ಪದೇ ಪದೇ ನಾಯಕನ ಬದಲಾವಣೆ ಮಾಡುವ ನಿರ್ಧಾರವನ್ನು ಕೈಗೆತ್ತಿಕೊಂಡಿದೆ. ಹೀಗೆ ಮೂರೂ ಪಂದ್ಯಕ್ಕೂ ಪ್ರತ್ಯೇಕ ಆಟಗಾರರನ್ನು ನಾಯಕನಾಗಿ ನೇಮಿಸುವುದರಿಂದ ಆಟಗಾರರಿಗೆ ವಿಶ್ರಾಂತಿ ನೀಡಲು ಅನುಕೂಲವಾಗಲಿದೆ ಎಂಬ ಕಾರಣದಿಂದ ನ್ಯೂಜಿಲೆಂಡ್ ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದೆ.

ಟಿ ಟ್ವೆಂಟಿ ವಿಶ್ವಕಪ್ ಬೆನ್ನಲ್ಲೇ ಸರಣಿ ಆರಂಭವಾದದ್ದು ಈ ಬೆಳವಣಿಗೆಗೆ ಕಾರಣ
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದ ಬೆನ್ನಲ್ಲೇ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಶುರುವಾಯಿತು ಮತ್ತು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆ ಇದೀಗ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಸರಣಿಗಳು ಆರಂಭವಾಗುತ್ತಿವೆ. ಹೀಗಾಗಿ ಈ ತಂಡಗಳ ಆಟಗಾರರು ಹಲವಾರು ತಿಂಗಳುಗಳಿಂದ ಸತತವಾಗಿ ಕ್ರಿಕೆಟ್ ಆಡುತ್ತಿದ್ದು ವಿಶ್ರಾಂತಿಯ ಅಗತ್ಯತೆ ಹೆಚ್ಚಾಗಿದೆ. ಹೀಗಾಗಿ ಸರಣಿಗಳ ಬಳಿಕ ಸರಣಿಗಳನ್ನು ಆಯೋಜಿಸುತ್ತಿರುವುದು ಈ ರೀತಿಯ ಬೆಳವಣಿಗೆಗೆ ಕಾರಣ ಎನ್ನಬಹುದು.


Click it and Unblock the Notifications
