ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಕಾಟ ನೀಡಿದ್ದು, ಮೊದಲ ಪಂದ್ಯ ಟಾಸ್ ನಡೆಯದೇ ರದ್ದಾಗಿದೆ.
ಬುಧವಾರದಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಮೊದಲ ದಿನಕ್ಕೆ ಮಳೆ ಸಂಪೂರ್ಣ ಕಾಟ ನೀಡಿದೆ. ಹೀಗಾಗಿ ಮೊದಲ ದಿನದ ಪಂದ್ಯದಲ್ಲಿ ಆಟಗಾರರು ಮೈದಾನಕ್ಕೆ ಇಳಿಯದೇ ಹೊಟೇಲ್ ರೂಮ್ನತ್ತ ಮುಖ ಮಾಡಿದ್ದಾರೆ.

ಈ ಪಂದ್ಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಡಿಯಲ್ಲಿ ನಡೆಯುತ್ತಿದ್ದು, ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಬೇಕೆಂಬ ಕನಸನ್ನು ಟೀಮ್ ಇಂಡಿಯಾ ಹೊಂದಿತ್ತು. ಆದರೆ ಮೊದಲ ದಿನದ ಪಂದ್ಯ ನಡೆಯದೇ ಇದ್ದಿದ್ದರಿಂದ ಟೀಮ್ ಇಂಡಿಯಾಕ್ಕೆ ಪೆಟ್ಟು ಬಿದ್ದಿದೆ. ಒಂದು ವೇಳೆ ಮೊದಲ ಟೆಸ್ಟ್ ಸಂಪೂರ್ಣವಾಗಿ ಮಳೆಗೆ ಆಹೂತಿ ಆದಲ್ಲಿ ಭಾರತದ ಅಂಕಗಳಿಗೆ ಕತ್ತರಿ ಬೀಳಲಿದೆ.
ಟೀಮ್ ಇಂಡಿಯಾದ ಮೊದಲ ಟೆಸ್ಟ್ ಪಂದ್ಯಕ್ಕೆ ಇನ್ನು ತಂಡವನ್ನು ಪ್ರಕಟಿಸಿಲ್ಲ. ಬೆಂಗಳೂರು ಟೆಸ್ಟ್ ಪಂದ್ಯಕ್ಕೆ ಸರ್ಫರಾಜ್ ಖಾನ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇವರು ಶುಭಮನ್ ಗಿಲ್ ಸ್ಥಾನದಲ್ಲಿ ತಂಡವನ್ನು ಸೇರಿಕೊಳ್ಳಬಹುದಾಗಿದೆ.

ಬುಧವಾರ ಮೊದಲ ದಿನದಾಟ ಮಳೆಗೆ ಆಹುತಿಯಾಗಿದೆ. ಇನ್ನು ಉಳಿದ ನಾಲ್ಕು ದಿನಗಳ ಆಟಕ್ಕೂ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಪಂದ್ಯದ ಮೂರನೇ ದಿನವಾದ ಶುಕ್ರವಾರ ಮಾತ್ರ ಕೊಂಚ ರಿಲೀಫ್ ನೀಡುವ ಸಾಧ್ಯತೆ ಇದೆ. ಮೊದಲ ದಿನದಾಟದಲ್ಲಿ ಮಳೆ ಆಗಾಗ ನಿಂತರೂ ಸಹ, ಮೈದಾನವನ್ನು ಒಣಗಿಸಿ ಪಂದ್ಯವನ್ನು ಆರಂಭಿಸುವ ಹೊತ್ತಿಗೆ ಮತ್ತೆ ಮಳೆ ಕಾಟ ನೀಡಿತು.
ವಿರಾಟ್ ಕೊಹ್ಲಿ ಮತ್ತು ಯಶಸ್ವಿ ಜೈಸ್ವಾಲ್ ಸೇರಿದಂತೆ ಹಲವು ಆಟಗಾರರು ಒಳಾಂಗಣ ಅಭ್ಯಾಸ ನಡೆಸಿದರು. ಮಳೆಯಿಂದಾಗಿ ಗ್ರೌಂಡ್ ಫುಲ್ ಒದ್ದೆ ಆಗಿದ್ದರಿಂದ ಆಟಗಾರರು ಒಳಗಾಂಣ ಅಭ್ಯಾಸಕ್ಕೆ ಒತ್ತು ನೀಡಿದರು. ಕೊಹ್ಲಿ ಮತ್ತು ಯಶಸ್ವಿ ಕೂಡ ಮೈದಾನದಿಂದ ಕಿಟ್ ಬ್ಯಾಗ್ಗಳನ್ನು ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದರಿಂದ ಈ ಇಬ್ಬರೂ ಮೊದಲ ಟೆಸ್ಟ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವುದು ಪಕ್ಕಾ ಆಗಿದೆ.
ಎರಡನೇ ದಿನದ ಪಂದ್ಯ 15 ನಿಮಿಷಗಳ ಮೊದಲು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದಾದ ಬಳಿಕ ಪ್ರತಿ ಸೆಷನ್ಗೂ ಹದಿನೈದು ನಿಮಿಷ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಅಂದಹಾಗೆ ಟೆಸ್ಟ್ ಕ್ರಿಕೆಟ್ನ ಒಂದು ಪಂದ್ಯದಲ್ಲಿ ಒಂದು ದಿನ 90 ಓವರ್ಗಳ ಆಟ ಮಾತ್ರ ನಡೆಯುತ್ತದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯದಲ್ಲಿ ಪ್ರತಿ ಸೆಷನ್ಗೂ ಹೆಚ್ಚುವರಿ ಸಮಯವನ್ನು ಸೇರಿಸುವ ಮೂಲಕ ಓವರ್ಗಳ ಸಂಖ್ಯೆಯನ್ನು 98ಕ್ಕೆ ಏರಿಸುವ ಪ್ರಯತ್ನ ನಡೆಸಾಲಗುತ್ತಿದೆ.