ಟೀಮ್ ಇಂಡಿಯಾ 2023ರ ಏಕದಿನ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್ ತಲುಪಿದೆ. ಬುಧವಾರ, ನವೆಂಬರ್ 15ರಂದು ಮುಂಬೈನ ವಾಂಖೆಡೆ ಅಂಗಳದಲ್ಲಿ ಐತಿಹಾಸಿಕ ಎದುರಾಳಿ ನ್ಯೂಜಿಲೆಂಡ್ ತಂಡದ ವಿರುದ್ಧ ಭಾರತ ನಿರ್ಣಾಯಕ ಸೆಮಿಸ್ನಲ್ಲಿ ಹೋರಾಟ ನಡೆಸುತ್ತಿದೆ.
ಈ ಪಂದ್ಯದಲ್ಲಿ ಗೆದ್ದು ಪ್ರಶಸ್ತಿ ಸುತ್ತು ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯಲು ಟೀಮ್ ಇಂಡಿಯಾ ಸಖತ್ ಪ್ಲ್ಯಾನ್ ರೂಪಿಸಿಕೊಂಡಿದೆ. ಅಸಲಿಗೆ ಭಾರತ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಹೆಚ್ಚಿನ ಸಾಹಸ ಮಾಡುವ ಅವಶ್ಯಕತೆ ಇಲ್ಲವೇ ಇಲ್ಲ.
ಹೌದು. ಟೀಮ್ ಇಂಡಿಯಾ ಈ ಸರಣಿಯ ಲೀಗ್ ಹಂತದಲ್ಲಿ ಆಡಿದ ರೀತಿ ಆಡಿದಲ್ಲಿ ಸುಲಭ ಗೆಲುವು ಸಾಧಿಸಬಹುದು. ಕಡಲ ಕಿನಾರೆಯ ನಗರಿ ಮುಂಬೈನಲ್ಲಿ ರೋಹಿತ್ ಶರ್ಮಾ ಬಳಗ ನ್ಯೂಜಿಲೆಂಡ್ ವಿರುದ್ಧ ಮತ್ತೊಮ್ಮೆ ಶಿಸ್ತು ಬದ್ಧ ಬೌಲಿಂಗ್ ದಾಳಿಯನ್ನು ಸಂಘಟಿಸಬೇಕಿದೆ.

ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಮಾಡಿದಂತೆ ಬೆಂಕಿ, ಬಿರುಗಾಳಿ ಮತ್ತು ಸುನಾಮಿ ದಾಳಿಯನ್ನು ಮಾಡಬೇಕಿದೆ. ಅಲ್ಲದೆ ಪವರ್ ಪ್ಲೇನಲ್ಲಿ ಪವರ್ ಪ್ಯಾಕ್ ಪರ್ಫಾಮೆನ್ಸ್ ನೀಡಬೇಕಿದೆ. ಇದೇ ವೇಳೆ ರನ್ಗಳಿಗೆ ಕಡಿವಾಣ ಹಾಕಿ, ವಿಕೆಟ್ ಬೇಟೆ ನಡೆಸಬೇಕಿದೆ.
ಈವರೆಗೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ರನ್ ನಿಯಂತ್ರಣದ ಜೊತೆಗೆ ಆರಂಭಿಕ ವಿಕೆಟ್ಗಳನ್ನು ಬೇಗನೆ ಕೀಳುವಲ್ಲಿ ಯಶಸ್ವಿಯಾಗಿದ್ದು, ಅದೇ ಪ್ರದರ್ಶನವು ಇಂದು ಬರಬೇಕಿದೆ.
ಮಧ್ಯಮ ಓವರ್ಗಳಲ್ಲಿ ಟೀಮ್ ಇಂಡಿಯಾದ ಸ್ಪಿನ್ ಬೌಲರ್ಗಳಾದ ರವೀಂದ್ರ ಜಡೇಜಾ ಹಾಗೂ ಕುಲದೀಪ್ ಯಾದವ್ ಕಿವೀಸ್ ವಿರುದ್ಧ ಅತ್ಯದ್ಭುತ ದಾಳಿ ನಡೆಸಬೇಕಿದೆ. ಇನ್ನು ಈ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಮಧ್ಯಮ ಓವರ್ಗಳಲ್ಲಿ ಬಿಗುವಿನ ದಾಳಿಯನ್ನು ನಿರ್ವಹಿಸಿದ್ದು, ನಿಯಮಿತವಾಗಿ ವಿಕೆಟ್ ಬೇಟೆಯನ್ನು ಸಹ ನಡೆಸಿದೆ.

ಡೆತ್ ಓವರ್ಗಳಲ್ಲಿ ಟೀಮ್ ಇಂಡಿಯಾ ಬೌಲಿಂಗ್ ವಿರುದ್ಧ ರನ್ ಗಳಿಸಲು ಎದುರಾಳಿ ತಂಡದ ಬ್ಯಾಟರ್ಗಳು ಪರದಾಡುತ್ತಿದ್ದಾರೆ. ಇದೀಗ ಸೆಮಿಫೈನಲ್ನಲ್ಲಿ ಕಿವೀಸ್ ಪಡೆಯ ರಣತಂತ್ರವನ್ನು ಮೆಟ್ಟಿನಿಂತು ಬೌಲಿಂಗ್ ದಾಳಿ ನಡೆಸಬೇಕಿದೆ.
ಅಂದಹಾಗೆ, ಭಾರತ ತಂಡದ ಬೌಲರ್ಗಳು ಈ ಪಂದ್ಯಾವಳಿಯಲ್ಲಿ ಹಲವು ಬಾರಿ ಎದುರಾಳಿ ತಂಡಗಳನ್ನು ಆಲೌಟ್ ಮಾಡಿ ಅಬ್ಬರಿಸಿದ್ದಾರೆ. ಬುಧವಾರ ನಡೆಯುವ ಪಂದ್ಯದಲ್ಲೂ ಟೀಮ್ ಇಂಡಿಯಾ ಮತ್ತೊಮ್ಮೆ ನ್ಯೂಜಿಲೆಂಡ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಬೇಕಿದೆ.
ಟೀಮ್ ಇಂಡಿಯಾದ ಬೌಲರ್ಗಳು ಮತ್ತೊಮ್ಮೆ ಕೇವಲ 10 ಬೆಸ್ಟ್ ಬೌಲ್ ಮಾಡಿದ್ದೇ ಆದಲ್ಲಿ, ಫೈನಲ್ ಪಂದ್ಯಕ್ಕಾಗಿ ಅಹಮದಾಬಾದ್ ಫ್ಲೈಟ್ ಟಿಕೆಟ್ ಪಡೆಯಬಹುದು.
ಇನ್ನು ಈ ಪಂದ್ಯದಲ್ಲಿ ಭಾರತ ತಂಡದ ಎಲ್ಲಾ ಆಟಗಾರರು ಸಂಘಟಿತ ಆಟವನ್ನು ಪ್ರದರ್ಶಿಸುವ ಅವಶ್ಯಕತೆ ಇದೆ. ಬ್ಯಾಟರ್ಗಳು ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕು. ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಗಳು ತಮ್ಮ ಘನತೆಗೆ ತಕ್ಕ ಆಟವನ್ನು ಆಡಿ, ಬಿಗ್ ಇನಿಂಗ್ಸ್ ಕಟ್ಟಬೇಕಿದೆ. ಅಂದಾಗ ಮಾತ್ರ ಗೆಲುವಿನ ಆಸೆ ಫಲಿಸುತ್ತದೆ.