ಬುಧವಾರ, ನವೆಂಬರ್ 15ರಂದು ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ನ ಮೊದಲ ಸೆಮಿಫೈನಲ್ನಲ್ಲಿ ಆತಿಥೇಯ ಟೀಮ್ ಇಂಡಿಯಾ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದೆ.
ಮುಂಬೈನಲ್ಲಿ ನಡೆಯುವ ನಿರ್ಣಾಯಕ ಪಂದ್ಯಕ್ಕೂ ಮುನ್ನ ಹವಾಮಾನದ ಮೇಲೆ ಕ್ರಿಕೆಟ್ ಅಭಿಮಾನಿಗಳ ಕಣ್ಣುಗಳು ನೆಟ್ಟಿವೆ. ಏಕೆಂದರೆ, ಗೆದ್ದ ತಂಡಗಳ ನೇರವಾಗಿ ಫೈನಲ್ಗೆ ಟಿಕೆಟ್ ಪಡೆಯಲಿವೆ. 12 ವರ್ಷಗಳ ಬಳಿಕ ಭಾರತ ತಂಡ ಟ್ರೋಫಿ ಕಣ್ಣಿಟ್ಟಿದ್ದರೆ, ಇಲ್ಲಿಯವರೆಗೂ ಪ್ರಶಸ್ತಿ ವಂಚಿತ ನ್ಯೂಜಿಲೆಂಡ್ ಚೊಚ್ಚಲ ಬಾರಿಗೆ ಟ್ರೋಫಿ ಎತ್ತಿಹಿಡಿಯಲು ಎದುರು ನೋಡುತ್ತಿದೆ.
ಇನ್ನು 2023ರ ವಿಶ್ವಕಪ್ನ ನಾಕೌಟ್ ಪಂದ್ಯಗಳಾದ ಎರಡು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ 'ಮೀಸಲು ದಿನ'ವನ್ನು ಒದಗಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಈಗಾಗಲೇ ದೃಢಪಡಿಸಿದೆ.

ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಗುರುವಾರ, ನವೆಂಬರ್ 16ರಂದು ಪಂದ್ಯವು ಈಗಾಗಲೇ ನಿಗದಿಯಾದ ಸ್ಥಳದಲ್ಲೇ ಮುಂದುವರಿಯುತ್ತದೆ.
ಇದೇ ನ್ಯೂಜಿಲೆಂಡ್ ಎದುರಾಳಿಯ ವಿರುದ್ಧ ಭಾರತದ 2019ರ ಏಕದಿನ ವಿಶ್ವಕಪ್ನ ಸೆಮಿಫೈನಲ್ ಪಂದ್ಯಕ್ಕೆ ಮಳೆಯಿಂದ ಅಡ್ಡಿಪಡಿಸಲಾಯಿತು ಮತ್ತು ಮೀಸಲು ದಿನದಂದು ಆಡಿಸಬೇಕಾಯಿತು.
ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಟ್ರೆಂಟ್ ಬ್ರಿಡ್ಜ್ನಲ್ಲಿ ನಡೆದ ಆ ಸೆಮಿಫೈನಲ್ನಲ್ಲಿ 18 ರನ್ಗಳಿಂದ ಸೋಲು ಅನುಭವಿಸಿತು. ಇದು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೂ ಆಗಿತ್ತು.
ಆದಾಗ್ಯೂ, ಮುಂಬೈ ನಗರದಲ್ಲಿ ಕೆಲವು ದಿನಗಳ ಹಿಂದೆ ಸುರಿದ ಮಳೆಯ ನಂತರ, ಬುಧವಾರದ ಹವಾಮಾನ ಮುನ್ಸೂಚನೆಯು ಆಶಾದಾಯಕವಾಗಿದೆ.

ಬುಧವಾರ ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಟಾಸ್ ನಡೆಯುವಾಗ ತಾಪಮಾನವು ಸುಮಾರು 36 ಡಿಗ್ರಿಗಳಾಗಿದ್ದರೂ, ಆರ್ದ್ರತೆಯು ಕೇವಲ 30 ಪ್ರತಿಶತದಷ್ಟು ಮಾತ್ರ ಇರುತ್ತದೆ. 2023ರ ವಿಶ್ವಕಪ್ನ ಕೆಲವು ಸ್ಥಳಗಳಲ್ಲಿ ಕಂಡುಬಂದ ಪರಿಸ್ಥಿತಿಗಳಿಗಿಂತ ಇದು ಉತ್ತಮವಾಗಿದೆ.
ಸಂಜೆಯ ಹೊತ್ತಿಗೆ ತಾಪಮಾನವು ಸುಮಾರು 29 ಡಿಗ್ರಿಗಳಿಗೆ ಇಳಿಯುತ್ತದೆ. ಆದರೆ ತೇವಾಂಶವು ಸುಮಾರು 46 ಪ್ರತಿಶತಕ್ಕೆ ಏರುತ್ತದೆ. ಮುಂಬೈನಲ್ಲಿ ಸುಮಾರು 18 ಡಿಗ್ರಿಗಳಷ್ಟು ಇಬ್ಬನಿ ಬಿಂದುವಿನೊಂದಿಗೆ ಎರಡನೇ ಬೌಲಿಂಗ್ ಮಾಡುವ ತಂಡಕ್ಕೆ ಹಿಮದ ಬೆದರಿಕೆ ಇಲ್ಲ.
ಎರಡೂ ಸೆಮಿಫೈನಲ್ ಪಂದ್ಯಗಳ ಎರಡೂ ಮೀಸಲು ದಿನಗಳು ಮಳೆಯಿಂದಾಗಿ ರದ್ದಾದರೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್ 2023ರ ಫೈನಲ್ಗೆ ಮುನ್ನಡೆ ಪಡೆಯುತ್ತವೆ.
2023ರ ಏಕದಿನ ವಿಶ್ವಕಪ್ನಲ್ಲಿ ಇದುವರೆಗೆ ಭಾರತದ ಯಾವುದೇ ಪಂದ್ಯಗಳು ಮಳೆಯಿಂದ ಹಾನಿಗೊಳಗಾಗಿಲ್ಲ. ಈ ವರ್ಷದ ಆರಂಭದಲ್ಲಿ ಪಲ್ಲೆಕೆಲ್ಲೆಯಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡವು 'ರಿಸರ್ವ್ ಡೇ' ನಲ್ಲಿ ಆಡಬೇಕಾಗಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಶತಕಗಳಿಗೆ ಕ್ರಿಕೆಟ್ ಜಗತ್ತು ಸಾಕ್ಷಿಯಾಯಿತು.

ಧರ್ಮಶಾಲಾದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯವು ವಿಶಿಷ್ಟವಾದ ಹವಾಮಾನದ ವಿದ್ಯಮಾನದಿಂದ ಪ್ರಭಾವಿತವಾಯಿತು. ಭಾರತದ ಚೇಸಿಂಗ್ ಸಮಯದಲ್ಲಿ ದಟ್ಟವಾದ ಇಬ್ಬನಿ ಸ್ವಲ್ಪ ಸಮಯದವರೆಗೆ ಆಟವನ್ನು ಸ್ಥಗಿತಗೊಳಿಸಿತ್ತು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ.
ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್ (ನಾಯಕ), ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಕೈಲ್ ಜೇಮಿಸನ್, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.