

ನವದೆಹಲಿ, ಜನವರಿ 30: ಭಾರತ-ನ್ಯೂಜಿಲ್ಯಾಂಡ್ 5 ಪಂದ್ಯಗಳ ಏಕದಿನ ಸರಣಿಯಲ್ಲಿ 3 ಪಂದ್ಯಗಳನ್ನು ಭಾರತ ಜಯಿಸಿದ್ದಾಗಿದೆ. ಸರಣಿಯೂ ಭಾರತದ ವಶವಾಗಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಯುವ ಆಟಗಾರ ಶುಭ್ಮಾನ್ ಗಿಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆಯೇ? ಹೌದೆನ್ನುತ್ತಿದೆ ಮೂಲವೊಂದು.
ಆಯ್ಕೆ ಸಮಿತಿಯು ಇನ್ನುಳಿದ ಎರಡು ಪಂದ್ಯಗಳಿಗೆ ಯುವ ಬ್ಯಾಟ್ಸ್ಮನ್ ಗಿಲ್ಗೆ ಅವಕಾಶ ನೀಡಬೇಕು ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಬಯಸಿದ್ದಾರೆ. ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರುವುದರಿಂದ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಗಿಲ್ ಮೈದಾನಕ್ಕಿಳಿಯಬೇಕು ಎಂದು ಗವಾಸ್ಕರ್ ಅಭಿಪ್ರಾಯಿಸಿದ್ದಾರೆ.
'ಟೀಮ್ ಇಂಡಿಯಾದ 3ನೇ ಕ್ರಮಾಂಕ ಖಾಲಿಯಿರುವುದರಿಂದ ಶುಭ್ಮಾನ್ ಗಿಲ್ಗೆ ಅವಕಾಶ ನೀಡುವುದನ್ನು ನಾನು ಬಯಸುತ್ತೇನೆ. ಒಂದೆರಡು ಪಂದ್ಯಗಳಲ್ಲಿ ಯುವ ಆಟಗಾರನಿಗೆ ಅವಕಾಶ ಕೊಟ್ಟು, ರಾಷ್ಟ್ರೀಯ ತಂಡದಲ್ಲಿ ಆತ ಹೇಗೆ ಅಡುತ್ತಾನೆ ಎಂದು ನೋಡೋಣ' ಎಂದು ಇಂಡಿಯಾ ಟುಡೇ ಜೊತೆ ಸುನಿಲ್ ಹೇಳಿಕೊಂಡಿದ್ದಾರೆ.
ಪೃಥ್ವಿ ಶಾ ನಾಯಕನಾಗಿದ್ದ, ಪ್ರಶಸ್ತಿ ವಿಜೇತ ಭಾರತ ಅಂಡರ್ 19 ತಂಡದಲ್ಲಿ ಗಿಲ್ ಕೂಡ ಇದ್ದರು. ಅಷ್ಟೇ ಅಲ್ಲ, ಉತ್ತಮ ಆಟಕ್ಕಾಗಿ ಗಿಲ್ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ ಮೇಲೆ ಪ್ರಭಾವ ಬೀರಿದ್ದರು. ಹೀಗಾಗಿ ನ್ಯೂಜಿಲ್ಯಾಂಡ್-ಭಾರತ ಇನ್ನೆರಡು ಔಪಚಾರಿಕ ಏಕದಿನ ಪಂದ್ಯಗಳಲ್ಲಿ ಗಿಲ್ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. 4ನೇ ಏಕದಿನ ಪಂದ್ಯ ಜನವರಿ 31ರಂದು ನಡೆಯಲಿದೆ.