
ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯ ಶುಕ್ರವಾರದಿಂದ ಆರಂಭವಾಗಲಿದೆ. ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯಲು ಎರಡು ತಂಡಗಳು ಕೂಡ ಎದುರು ನೋಡುತ್ತಿವೆ. ಆದರಲ್ಲೂ ಟೀಮ್ ಇಂಡಿಯಾ ವಾಂಖೆಡೆ ಕ್ರೀಡಾಂಗಣದಲ್ಲ ತವರಿನ ಲಾಭವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಭಾರತೀಯ ಬೌಲರ್ಗಳ ಅತ್ಯುತ್ತಮ ಲಯ, ವಿರಾಟ್ ಕೊಹ್ಲಿ ಪಂದ್ಯಕ್ಕೆ ಮರಳಿರುವುದು ಹಾಗೂ ಶ್ರೇಯಸ್ ಐಯ್ಯರ್ ಫಾರ್ಮ್ ತಂಡಕ್ಕೆ ಹೆಚ್ಚು ಬಲ ನೀಡಲಿದೆ. ಆದರೆ ಭಾರತ ತಂಡದ ಯೋಜನೆಗಳಿಗೆ ಪ್ರತಿತಂತ್ರವನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂಬ ಎಚ್ಚರಿಕೆಯನ್ನು ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಎಚ್ಚರಿಕೆ ನೀಡಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡದ ಉಪ ನಾಯಕ ಟಿಮ್ ಸೌಥಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾ ಪರವಾಗಿ ಶ್ರೇಯಸ್ ಐಯ್ಯರ್ ಅವರ ಭೀತಿಯನ್ನು ಎದುರಿಸಲು ಪೂರ್ವ ತಯಾರಿಯನ್ನು ಮಾಡಿಕೊಂಡಿರುವ ಸುಳಿವನ್ನು ನೀಡಿದ್ದಾರೆ. ಕಾನ್ಪುರ ಪಂದ್ಯ ಮೂಲಕ ಚೊಚ್ಚಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಲು ಇಳಿದ ಟೀಮ್ ಇಂಡಿಯಾದ ಆಟಗಾರ ಶ್ರೇಯಸ್ ಐಯ್ಯರ್ ಬಗ್ಗೆ ಈಗ ನಾವು ಹೆಚ್ಚಿನ ಮಾಹಿತಿಯನ್ನು ಹೊಂದಿದ್ದೇವೆ ಎಂದಿದ್ದಾರೆ ಟಿಮ್ ಸೌಥಿ.
ಶ್ರೇಯಸ್ ಐಯ್ಯರ್ ಟೀಮ್ ಇಂಡಿಯಾ ಪರವಾಗಿ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ಅಮೋಘ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧ ಶತಕ ದಾಖಲಿಸುವ ಮೂಲಕ ಭಾರತದ ಪರ ಈ ಸಾಧನೆ ಮಾಡಿದ ಪ್ರಪ್ರಥಮ ಆಟಗಾರ ಎನಿಸಿದ್ದಾರೆ ಶ್ರೇಯಸ್ ಐಯ್ಯರ್. ಶ್ರೇಯಸ್ ಐಯ್ಯರ್ ಈ ಪಂದ್ಯದಲ್ಲಿ 105 ರನ್ ಹಾಗೂ 65 ರನ್ಗಳಿಸಿದ್ದಾರೆ. ಈ ಮೂಲಕ ಪ್ರವಾಸಿ ತಂಡಕ್ಕೆ ಸವಾಲಾಗಿ ಪರಿಣಮಿಸಿದರು.
"ಆತ ನಿಜಕ್ಕೂ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಚೊಚ್ಚಲ ಪಂದ್ಯದಲ್ಲಿಯೇ ಆತ ಆಡಿದ ರೀತಿ ಹಾಗೂ ಆತನ ಆತ್ಮ ವಿಶ್ವಾಸ ಉತ್ತಮವಾಗಿತ್ತು. ಈಗ ನಾವು ಆತನ ಬಗ್ಗೆ ಮತ್ತಷ್ಟು ಹೆಚ್ಚಿನ ಮಾಹಿತಿಯನ್ನು ಹೊಂದಿದ್ದೇವೆ. ನಿಧಾನಗತಿಯ ಪಿಚ್ನಲ್ಲಿ ಶಾರ್ಟ್ ಬಾಲ್ ಮೂಲಕ ಗುರಿಯನ್ನು ಸಾಧಿಸುವುದು ಅಷ್ಟು ಸುಲಭವಿಲ್ಲ. ಈಗ ನಾವು ನಮ್ಮ ಯೋಜನೆಗಳ ಮೇಲೆ ಗಮನಹರಿಸುತ್ತೇವೆ. ಭಾರತ ಉತ್ತಮವಾದ ಬ್ಯಾಟಿಂಗ್ ಲೈನ್ಅಪ್ ಹೊಂದಿದೆ" ಎಂದಿದ್ದಾರೆ ನ್ಯೂಜಿಲೆಂಡ್ ತಂಡದ ಉಪನಾಯಕ ಟಿಮ್ ಸೌಥಿ.
ಇನ್ನು ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಶ್ರಾಂತಿಯನ್ನು ಪಡೆದುಕೊಮಡಿದ್ದ ಕಾರಣದಿಂದಾಗಿ ಶ್ರೇಯಸ್ ಐಯ್ಯರ್ಗೆ ಆಡುವ ಬಳಗದಲ್ಲಿ ಸ್ಥಾನ ದೊರೆತಿತ್ತು. ಆದರೆ ಎರಡನೇ ಪಂದ್ಯಕ್ಕೆ ಕೊಹ್ಲಿ ಮರಳಿರುವ ಕಾರಣದಿಂದಾಗಿ ಶ್ರೇಯಸ್ ಐಯ್ಯರ್ಗೆ ಆಡುವ ಬಳಗದಲ್ಲಿ ಸ್ಥಾನ ನೀಡಲು ಯಾವ ಆಟಗಾರ ಹೊರಗುಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಯಪ ನಾಯಕ ಅಜಿಂಕ್ಯಾ ರಹಾನೆ ನಿರಂತರವಾಗಿ ಕಳಪೆ ಪ್ರದರ್ಶನ ನಿಡುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಅವಕಾಶಗಳು ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಬಲವಾಗಿ ಕೇಳಿ ಬರುತ್ತಿದೆ. ಹೀಗಾಗಿ ತಂಡದ ನಿರ್ಧಾರ ಯಾವ ರೀತಿ ಇರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಟೀಮ್ ಇಂಡಿಯಾ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಉಮೇಶ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಶ್ರೀಕರ್ ಯಾದವ್, ಜಯಂತ್ ಸಿರಾಜ್ , ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್
ನ್ಯೂಜಿಲೆಂಡ್ ಸ್ಕ್ವಾಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಟಾಮ್ ಲ್ಯಾಥಮ್, ವಿಲ್ ಯಂಗ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೋಮರ್ವಿಲ್ಲೆ, ಅಜಾಜ್ ಪಟೇಲ್, ಮಿಚೆಲ್ ಸ್ಯಾಂಟ್ನರ್, ನೀಲ್ ವ್ಯಾಗ್ನರ್, ಗ್ಲೆನ್ ಮಿಚೆಲ್, ಗ್ಲೆನ್ ಮಿಚೆಲ್