ಇಂದೋರ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ ಪಡೆ ನಿರಾಸೆ ಅನುಭವಿಸಿದೆ. ನಿರ್ಣಾಯಕ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟವನ್ನು ಆಡುವಲ್ಲಿ ವಿಫಲವಾಗಿ ಸರಣಿಯನ್ನು ಕೈ ಚೆಲ್ಲಿದೆ. ಶುಭಮನ್ ಗಿಲ್ ತವರಿನಲ್ಲಿ ಆಡಿದ ಮೊದಲ ಏಕದಿನ ಸರಣಿಯಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿದ್ದಾರೆ. ಭಾನುವಾರ ಟೀಮ್ ಇಂಡಿಯಾ ಸೋಲಿಗೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತ ತಂಡ ತವರಿನಲ್ಲಿ ಮತ್ತೊಂದು ಸರಣಿ ಗೆಲುವಿನ ನಗೆ ಬೀರುವ ಆಸೆಯನ್ನು ಹೊಂದಿತ್ತು. ಆದರೆ ಈ ಆಸೆ ಮಣ್ಣು ಪಾಲಾಗಿದೆ. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 50 ಓವರ್ಗಳಲ್ಲಿ 8 ವಿಕೆಟ್ಗೆ 337 ರನ್ ಕಲೆ ಹಾಕಿತು. ಮಹತ್ವದ ಪಂದ್ಯದಲ್ಲಿ ಕಿವೀಸ್ ತಂಡದ ಭರವಸೆಯ ಆಟಗಾರರಾದ ಡ್ಯಾರಿಲ್ ಮಿಚೆಲ್ ಹಾಗೂ ಗ್ಲೇನ್ ಫಿಲಿಪ್ಸ್ ಶತಕ ಬಾರಿಸಿ ಮಿಂಚಿದರು. ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಪರ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಲು 5 ಕಾರಣಗಳು ಇಲ್ಲಿವೆ.

ನ್ಯೂಜಿಲೆಂಡ್ ತಂಡದ 34 ವರ್ಷದ ಬ್ಯಾಟರ್ ಡ್ಯಾರಿಲ್ ಮಿಚೆಲ್ ಸರಣಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಮೊದಲ ಪಂದ್ಯದಲ್ಲಿ 84 ರನ್ ಸಿಡಿಸಿದರೆ, ರಾಜ್ಕೋಟ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅಜೇಯ 131 ರನ್ ಬಾರಿಸಿದರು. ಇದೇ ಅಮೋಘ ಫಾರ್ಮ್ ಮೂರನೇ ಪಂದ್ಯದಲ್ಲೂ ಮುಂದುವರಿಸಿದ ಡ್ಯಾರಿಲ್ ಒತ್ತಡವನ್ನು ಮೆಟ್ಟಿನಿಂತು ಶತಕ ಬಾರಿಸಿದರು. ಇವರಿಗೆ ಬ್ರೇಕ್ ಹಾಕುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ವಿಫಲರಾದರು. ಪರಿಣಾಮ ಭಾರತ ಸರಣಿ ಕೈ ಚೆಲ್ಲುವಂತೆ ಆಯಿತು.
ನ್ಯೂಜಿಲೆಂಡ್ ತಂಡ ಒಂದು ಹಂತದಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡುತ್ತಿತ್ತು. ಈ ಅವಧಿಯಲ್ಲಿ ವಿಕೆಟ್ ಬೇಟೆ ನಡೆಸದ ಟೀಮ್ ಇಂಡಿಯಾ ರನ್ಗಳನ್ನು ಬಿಟ್ಟುಕೊಟ್ಟಿತು. ಇನ್ನು ಕೊನೆಯ 10 ಓವರ್ಗಳಲ್ಲಿ ಗಿಲ್ ಪಡೆ 99 ರನ್ ಕೈ ಚೆಲ್ಲಿತು.
ಈಗಾಗಲೇ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿರುವ ರವೀಂದ್ರ ಜಡೇಜಾ ಏಕದಿನ ಫಾರ್ಮೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಮೂರು ಪಂದ್ಯಗಳಲ್ಲಿ ಬ್ಯಾಟ್ ಮಾಡಿ 65 ಎಸೆತ ಎದುರಿಸಿ ಕೇವಲ 43 ರನ್ ಸಿಡಿಸಿದರು. ಅಲ್ಲದೆ ಬೌಲಿಂಗ್ನಲ್ಲಿ 23 ಓವರ್ ಬೌಲಿಂಗ್ ಮಾಡಿ 141 ರನ್ ನೀಡಿದರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಇವರ ಸ್ಥಿರ ಪ್ರದರ್ಶನ ನೀಡದೇ ಇರುವುದು ತಂಡಕ್ಕೆ ಪೆಟ್ಟು ಬಿದ್ದಿದೆ.

ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಹಾಗೂ ಉಳಿದ ಬೌಲರ್ಗಳು ಮಿಡ್ಲ್ ಓವರ್ಗಳಲ್ಲಿ ರನ್ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಕುಲ್ದೀಪ್ 3ನೇ ಪಂದ್ಯದಲ್ಲಿ 6 ಓವರ್ ಬೌಲ್ ಮಾಡಿ 48 ರನ್ ನೀಡಿ 1 ವಿಕೆಟ್ ಕಬಳಿಸಿದರು. ಸರಣಿಯಲ್ಲೂ ಕುಲ್ದೀಪ್ 25 ಓವರ್ ಬೌಲಿಂಗ್ ನಡೆಸಿ 182 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ.
ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದಾಗ ಟೀಮ್ ಇಂಡಿಯಾದ ಆರಂಭಿಕ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಬ್ಯಾಟಿಂಗ್ ಪಿಚ್ನಲ್ಲೂ ರನ್ ಕಲೆ ಹಾಕುವಲ್ಲಿ ಎಡವಿದ ರೋಹಿತ್ ಶರ್ಮಾ, ನಾಯಕ ಶುಭಮನ್ ಗಿಲ್, ಉಪನಾಯಕ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ನಿರಾಸೆ ಅನುಭವಿಸಿದರು. ಪರಿಣಾಮ ಕೆಳ ಕ್ರಮಾಂಕದ ಬ್ಯಾಟರ್ಗಳ ಮೇಲೆ ಒತ್ತಡ ಬೀಳುವಂತೆ ಆಗಿ ಪಂದ್ಯ ಕೈ ಜಾರಿತು.