ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲು ಇನ್ನು ಒಂದು ವಾರ ಮಾತ್ರವೇ ಬಾಕಿಯಿದೆ. ಈ ಮುಖಾಮುಖಿಯ ಮೇಲೆ ಎರಡು ತಂಡಗಳು ಕೂಡ ತಮ್ಮ ಚಿತ್ತ ನೆಟ್ಟಿದ್ದು ಈ ಕದನದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮುಖಾಮುಖಿಯಲ್ಲಿ ಯಾರಿಗೆ ಗೆಲುವು ಎಂಬ ಪ್ರಶ್ನೆಗೆ ಸೌರವ್ ಗಂಗೂಲಿ ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಏಷ್ಯಾ ಕಪ್ನಲ್ಲಿ ಕಣಕ್ಕಿಳಿಯಲಿರುವ ಪಾಕಿಸ್ತಾನ ತಂಡ ಅತ್ಯಂತ ಬಲಿಷ್ಠವಾದ ತಂಡವಾಗಿದೆ ಎಂದಿರುವ ಸೌರವ್ ಗಂಗೂಲಿ ಭಾರತ ಕೂಡ ಎಂದುನಂತೆಯೇ ಬಲಿಷ್ಠವಾಗಿ ಕಣಕ್ಕಿಳಿಯುತ್ತಿದೆ ಎಂದಿದ್ದಾರೆ. ಹೀಗಾಗಿ ಈ ಮುಖಾಮುಖಿಯಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎನ್ನುವುದು ಹೇಳುವುದು ಕಷ್ಟ ಎಂದಿದ್ದಾರೆ ಸೌರವ್ ಗಂಗೂಲಿ.

"ಏಷ್ಯಾಕಪ್ನಲ್ಲಿ ಯಾವ ತಂಡ ಗೆಲ್ಲಲಿದೆ ಎನ್ನುವುದು ಬಹಳ ಕಷ್ಟ. ಯಾರು ಬೇಕಾದರೂ ಗೆಲ್ಲಬಹುದು. ಎರಡು ತಂಡಗಳು ಕೂಡ ಉತ್ತಮವಾಗಿದೆ. ಪಾಕಿಸ್ತಾನ ತಂಡ ಕೂಡ ಉತ್ತಮವಾದ ತಂಡವಾಗಿದೆ. ಭಾರತ ಖಂಡಿತವಾಗಿಯೂ ಬಲಿಷ್ಠವಾದ ತಂಡ" ಎಂದಿದ್ದಾರೆ ಸೌರವ್ ಗಂಗೂಲಿ.
ಇನ್ನು ಇದೇ ಸಮದರ್ಭದಲ್ಲಿ ಸೌರವ್ ಗಂಗೂಲಿ ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರಾ ಕಮ್ಬ್ಯಾಕ್ ಬಗ್ಗೆ ಮಾತನಾಡಿದ್ದಾರೆ. ಗಾಯದಿಂದ ಸುದೀರ್ಘ ಕಾಲ ಮೈದಾನದಿಂದ ದೂರವಿದ್ದ ಬೂಮ್ರಾ ಐರ್ಲೆಂಡ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. "ಬೂಮ್ರಾ ಐರ್ಲೆಂಡ್ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ. ಅವರು ಅಲ್ಲಿ ಆಡಿದ್ದು ಟಿ20. ಈಗ ನಾವು ಆಡಬೇಕಿರುವುದು ಏಕದಿನ ಮಾದರಿ. ಏಕದಿನ ಮಾದರಿಗೆ ಅವರು ಹೊಂದಾಣಿಕೆ ಮಾಡಿಕೊಳ್ಳುವುದು ಅವರ ಮುಂದಿರು ಸವಾಲು" ಎಂದಿದ್ದಾರೆ ಸೌರವ್ ಗಂಗೂಲಿ.
ಇನ್ನು ಏಷ್ಯಾಕಪ್ ಟೂರ್ನಿಗೆ ಭಾರತದ 17 ಆಟಗಾರರ ಪಡೆಯನ್ನು ಈಗಾಗಲೇ ಬಿಸಿಸಿಐ ಪ್ರಕಟಿಸಿದೆ. ಈ ತಂಡದಲ್ಲಿ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವಕಾಶ ಪಡೆದುಕೊಳ್ಳದಿರುವುದು ಪ್ರಮುಖ ಅಂಶವಾಗಿದ್ದು ಲೆಗ್ ಸ್ಪಿನ್ನರ್ಆಗಿ ಆಲ್ರೌಂಡರ್ ಆಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ. ಬ್ಯಾಟಿಂಗ್ನಲ್ಲಿಯೂ ಅಕ್ಷರ್ ಕೊಡುಗೆ ನೀಡಲು ಸಾಧ್ಯವಿರುವ ಕಾರಣ ಚಾಹಲ್ಗೆ ಅವಕಾಶ ಕೈತಪ್ಪಿದೆ. ಆಯ್ಕೆ ಮಂಡಳಿಯ ಈ ನಿರ್ಧಾರಕ್ಕೂ ಸೌರವ್ ಗಂಗೂಲಿ ಬೆಂಬಲ ವ್ಯಕ್ತಪಡಿಸಿದ್ದು ಅಕ್ಷರ್ ಪಟೇಲ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಕೊಡುಗೆ ನೀಡಬಲ್ಲವರು ಎನ್ನುವುದನ್ನು ಉಲ್ಲೇಖಿಸಿದ್ದಾರೆ.
ಪ್ರಸ್ತುತ ಟೀಮ್ ಇಂಡಿಯಾ ಆಟಗಾರರು ಬೆಂಗಳೂರಿನ ಎನ್ಸಿಎನಲ್ಲಿ ಆರು ದಿನಗಳ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಗುರುವಾರ ಈ ಶಿಬಿರ ಆರಂಭವಾಗಿದ್ದು ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾ ಆಟಗಾರರು ಯೋ ಯೋ ಪರೀಕ್ಷೆಗೂ ಒಳಪಟ್ಟಿದ್ದಾರೆ.
ಏಷ್ಯಾಕಪ್ಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾ ತಂಡ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.