ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಲು ಮುಂದಾಗಿದೆ. ಭಾರತ ಪ್ಲೇಯಿಂಗ್ ಇಲೆವೆನ್ನಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಭಾರತ ತಂಡ ಮೂವರು ವಿಕೆಟ್ ಕೀಪರ್ಗಳೊಂದಿಗೆ ಕಣಕ್ಕೆ ಇಳಿದಿದೆ. ಆದರೆ ಕೆಲ ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ತಮಿಳುನಾಡು ಮೂಲದ ಸಾಯಿ ಸುದರ್ಶನ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಸಾಯಿ ಸುದರ್ಶನ್ ಅವರು ಇತ್ತೀಚಿಗೆ ದಕ್ಷಿಣ ಆಫ್ರಿಕಾ "ಎ" ವಿರುದ್ಧ ನಡೆದ ಎರಡು ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಇವರು ಮೊದಲ ಅನಧಿಕೃತ ಟೆಸ್ಟ್ನಲ್ಲಿ 32, 12 ರನ್ ಬಾರಿಸಿದ್ದರೆ, ಎರಡನೇ ಅನಧಿಕೃತ ಟೆಸ್ಟ್ನಲ್ಲಿ 17, 23 ರನ್ ಸಿಡಿಸಿದ್ದರು. ಆದರೆ ಇವರು ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಸಾಯಿ ಸುದರ್ಶನ್ ಆಡಿದ 5 ಪಂದ್ಯಗಳಲ್ಲಿ 30ರ ಸರಾಸರಿಯಲ್ಲಿ 273 ರನ್ ಸಿಡಿಸಿದ್ದಾರೆ. ಈ ವೇಳೆ 2 ಅರ್ಧಶತಕ ಸಿಡಿಸಿದ್ದಾರೆ. ಇವರು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ 87 ರನ್ ಸಿಡಿಸಿದ್ದರು.

ಸಾಯಿ ಸುದರ್ಶನ್ ಅವರು ಸ್ಥಿರ ಪ್ರದರ್ಶನ ನೀಡಿದೆ ಇರುವುದರಿಂದ ಇವರನ್ನು ತಂಡದಿಂದ ಕೈ ಬಿಡಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಇವರು ಕಳೆದ ಕೆಲವು ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಆದರೆ ಇವರನ್ನು ತಂಡದಿಂದ ಹೊರಗುಳಿದಿದ್ದು, ಈ ಸ್ಥಾನದಲ್ಲಿ ಈಗ ಮತ್ತೆ ಬೇರೆ ಪ್ಲೇಯರ್ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.
ಸಾಯಿ ಸುದರ್ಶನ್ ಅವರಿಂದ ತೆರವಾದ ಮೂರನೇ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆ ಇದೆ. ಈಗ ಬರುತ್ತಿರುವ ಮಾಹಿತಿಯಂತೆ ಒಬ್ಬ ತಮಿಳುನಾಡು ಆಟಗಾರನನ್ನು ಇನ್ನೊಬ್ಬ ತಮಿಳುನಾಡು ಪ್ಲೇಯರ್ ತುಂಬಲಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ರಣಜಿ ಟೂರ್ನಿಯಲ್ಲಿ ಟಾಪ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡಿರುವ ವಾಷಿಂಗ್ಟನ್ ಸುಂದರ್ ಈ ಕ್ರಮಾಂಕದಲ್ಲಿ ಬ್ಯಾಟ್ ಮಾಡಬುದು.

ದಕ್ಷಿಣ ಆಫ್ರಿಕಾ "ಎ" ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಧ್ರುವ್ ಜುರೇಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಜುರೇಲ್ ಹಾಗೂ ರಿಷಭ್ ಪಂತ್ ಇಬ್ಬರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಇವರು ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ ಎನ್ನುವ ಬಗ್ಗೆ ಇನ್ನು ಖಚಿತತೇ ಇಲ್ಲ. ಆದರೆ ಇವರಿಗೂ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಅವಕಾಶ ನೀಡಿದರೂ ಯಾವುದೇ ಅಚ್ಚರಿಯಿಲ್ಲ. ಧ್ರುವ್ ಜುರೇಲ್ ದಕ್ಷಿಣ ಆಫ್ರಿಕಾ "ಎ" ವಿರುದ್ಧ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು. ಆಗಲೇ ಇವರಿಗೆ ತಂಡದಲ್ಲಿ ಸ್ಥಾನ ನೀಡುವಂತೆ ಒತ್ತಾಯಗಳು ಕೇಳಿ ಬಂದಿದ್ದವು.