ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟಿ20 ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದರಿಂದ ಪಂದ್ಯ ರೋಚಕ ಹುಟ್ಟಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಸಾಧ್ಯತೆ ಕಾಣುತ್ತಿದೆ. ಆದರೆ ಯಾರನ್ನು ಬದಲಾವಣೆ ಮಾಡಬಹುದು ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರಿಗೆ ಮತ್ತೆ ಅವಕಾಶ ನೀಡುತ್ತಾರಾ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಟೀಮ್ ಇಂಡಿಯಾದ ಟಿ20 ತಂಡಕ್ಕೆ ಶುಭಮನ್ ಗಿಲ್ ಎಂಟ್ರಿ ನೀಡಿದಾಗಿನಿಂದ ಹೇಳಿಕೊಳ್ಳುವ ಪ್ರದರ್ಶನವನ್ನು ಏನು ನೀಡಿಲ್ಲ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಕುತ್ತಿಗೆ ಗಾಯ ಕಾಣಿಸಿಕೊಂಡಿದ್ದರಿಂದ ಇವರು ಟೆಸ್ಟ್ ಹಾಗೂ ಏಕದಿನ ಸರಣಿಯಿಂದ ಹೊರ ನಡೆದಿದ್ದರು. ಈಗ ಇವರು ಟಿ20 ಸರಣಿಯ ವೇಳೆ ತಂಡ ಸೇರಿಕೊಂಡಿದ್ದಾರೆ. ಆದರೆ ಟಿ20 ಪಂದ್ಯಗಳಲ್ಲಿ ಇವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಟೀಮ್ ಇಂಡಿಯಾ ಟಿ20 ಕ್ರಿಕೆಟ್ನ ಖಾಯಂ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಅವರು, ಶುಭಮನ್ ಗಿಲ್ ತಂಡಕ್ಕೆ ಎಂಟ್ರಿ ನೀಡುತ್ತಲೇ ಬೆಂಚ್ ಕಾಯುವಂತೆ ಆಗಿದೆ. ಸಂಜು ಈ ಹಿಂದೆ ಟಿ20 ಸರಣಿಯಲ್ಲಿ ಅಬ್ಬರಿಸಿದ್ದರು. ಅಲ್ಲದೆ ಈ ಸ್ಥಾನವನ್ನು ಭಧ್ರಪಡಿಸಿಕೊಂಡಿದ್ದರು. ಆದರೆ ಏಷ್ಯಾಕಪ್ ಟಿ20ಯ ವೇಳೆ ಶುಭಮನ್ ಗಿಲ್ ಮತ್ತೆ ತಂಡಕ್ಕೆ ಎಂಟ್ರಿ ನೀಡಿದರು. ಅಲ್ಲದೆ ಇವರಿಗೆ ಉಪನಾಯಕತ್ವ ಪಟ್ಟವನ್ನು ಕಟ್ಟಲಾಯಿತು. ಹೀಗಾಗಿ ಇವರು ತಂಡಕ್ಕೆ ಆಗಮಿಸುತ್ತಿದ್ದಂತೆ ಆರಂಭಿಕರಾಗಿ ಕಾಣಿಸಿಕೊಂಡರು. ಸಂಜು ಸ್ಯಾಮ್ಸನ್ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸೂಚಿಸಲಾಯಿತು. ಆದರೆ ಈ ವೇಳೆ ಸಂಜು ಕೊಂಚ ಹಿನ್ನಡೆ ಅನುಭವಿಸಿದರು.
ಸಂಜು ಸ್ಯಾಮ್ಸನ್ ಅವರ ಮಧ್ಯಮ ಕ್ರಮಾಂಕದಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರಿಂದ ಇವರ ಸ್ಥಾನದಲ್ಲಿ ಜಿತೇಶ್ ಶರ್ಮಾ ಅವರಿಗೆ ಅವಕಾಶ ನೀಡಲಾಯಿತು. ಜಿತೇಶ್ ಶರ್ಮಾ ಈ ಅವಕಾಶವನ್ನು ಜಿತೇಶ್ ಶರ್ಮಾ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಈಗ ಸಂಜು ಸ್ಯಾಮ್ಸನ್ ಬೆಂಚ್ ಕಾಯುತ್ತಿದ್ದಾರೆ. ಆದರೆ ಶುಭಮನ್ ಗಿಲ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ಹೀಗಾಗಿ ಮೂರನೇ ಟಿ20 ಪಂದ್ಯದಲ್ಲಿ ಶುಭಮನ್ ಗಿಲ್ ಅವರಿಗೆ ಅವಕಾಶ ನೀಡಬೇಕಾ ಎಂಬ ಪ್ರಶ್ನೆಗಳು ಎದ್ದಿವೆ.
ಮೂರನೇ ಟಿ20 ಪಂದ್ಯದಲ್ಲಿ ಬದಲಾವಣೆಗಳು ಸಂಭವಿಸದಲ್ಲಿ ಶುಭಮನ್ ಗಿಲ್ ಅವರ ಬದಲಿಗೆ ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಿದರೆ ಬೆಸ್ಟ್ ಎಂದು ಮಾಜಿ ಆಟಗಾರರು ಹೇಳುತ್ತಿದ್ದಾರೆ. ಟಿ20 ವಿಶ್ವಕಪ್ಗಾಗಿ ತಂಡವನ್ನು ಕಟ್ಟುವ ತಯಾರಿಯಲ್ಲಿ ಭಾರತ ಇದ್ದಾಗಲೇ ಕೆಲವು ಪ್ರಶ್ನೆಗಳು ತಂಡದ ಮುಂದೆ ಉದ್ಭವಿಸಿವೆ. ಈ ಎಲ್ಲ ಗೊಂದಲಕ್ಕೂ ಮ್ಯಾನೇಜ್ಮೆಂಟ್ ಉತ್ತರ ಕಂಡುಕೊಳ್ಳುವ ಅವಶ್ಯಕತೆ ಇದೆ.