ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಪಂದ್ಯ ರದ್ದಾಗಿದೆ. ಐದು ಪಂದ್ಯಗಳ ಸರಣಿಯ ನಾಲ್ಕನೇ ಪಂದ್ಯ ರದ್ದಾಗಿದ್ದು, ಐದನೇ ಟಿ20 ಪಂದ್ಯ ಕುತೂಹಲ ಮೂಡಿಸಿದೆ. ಲಕ್ನೋದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಶೀತ ವಾತಾವರಣವಿದೆ. ಇದರಿಂದ ಉತ್ತರ ಭಾರತದಲ್ಲಿ ಮಂಜು ಸಹ ಬೀಳುತ್ತಿದೆ. ಇಬ್ಬನಿಯಿಂದಾಗಿ ನಾಲ್ಕನೇ ಟಿ20 ಪಂದ್ಯವನ್ನು ರದ್ದು ಮಾಡಲಾಗಿದೆ.
ಲಕ್ನೋದಲ್ಲಿ ವಾಯು ಗುಣಮಟ್ಟ ಗುಣಮಟ್ಟ ತುಂಬಾ ಕಳಪೆಯಾಗಿದೆ. ಮಂಜಿನಿಂದಾಗಿ ನಾಲ್ಕನೇ ಟಿ20 ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರವನ್ನು ಅಂಪೈರ್ಗಳು ಹಾಗೂ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ನಾಲ್ಕನೇ ಟಿ20 ಪಂದ್ಯ ರೋಚಕತೆ ಹುಟ್ಟಿಸಿತ್ತು. ಆದರೆ ಈ ಪಂದ್ಯ ರದ್ದಾಗಿದ್ದರಿಂದ ಈಗ ಎಲ್ಲರ ಚಿತ್ತ ಅಹಮದಾಬಾದ್ನಲ್ಲಿ ನಡೆಯಲಿರುವ ಐದನೇ ಪಂದ್ಯದ ಮೇಲೆ ನೆಟ್ಟಿದೆ. ಸರಣಿ ಕೊನೆಯ ಹಾಗೂ ಐದನೇ ಟಿ20 ಪಂದ್ಯ ಡಿಸೆಂಬರ್ 19 ರಂದು ಅಹಮದಾಬಾದ್ ಮೈದಾನದಲ್ಲಿ ನಡೆಯಲಿದೆ.

ಲಕ್ನೋದ ವಾಯು ಗುಣಮಟ್ಟ ಸೂಚ್ಯಂಕವು (AQI) 400ರ ಆಸುಪಾಸಿನಲ್ಲಿದ್ದು, ಇದು ಅತ್ಯಂತ ಅಪಾಯಕಾರಿ. ಮೈದಾನದಲ್ಲಿ ಹೆಚ್ಚಿನ ಮಂಜು ಆವರಿಸಿದ್ದರಿಂದ, ನೋಡುವುದು ಕಷ್ಟವಾಗಿತ್ತು. ತಪಾಸಣೆಯ ವೇಳೆ ಅಂಪೈರ್ಗಳು ಪಿಚ್ನ ಹತ್ತಿರ ನಿಂತುಕೊಂಡು ಪರಿಶೀಲಿಸಿದರು. ಅಲ್ಲದೆ ಮತ್ತೊಮ್ಮೆ ಪರೀಕ್ಷಿಸಲು ಸ್ಕ್ವೇರ್ ಬೌಂಡರಿಯವರೆಗೆ ಹೋದರು. ಒಟ್ಟು ಆರು ಬಾರಿ ತಪಾಸಣೆಯನ್ನು ಮಾಡಿದ ಬಳಿಕ ರಾತ್ರಿ 9.26ಕ್ಕೆ ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು.
ದಕ್ಷಿಣ ಆಫ್ರಿಕಾ ಈ ಪ್ರವಾಸವನ್ನು ಶುಕ್ರವಾರ ಕೊನೆಗೊಳಿಸಲಿದೆ. ಡಿಸೆಂಬರ್ 19 ರಂದು ಐದನೇ ಟಿ20 ಪಂದ್ಯ ನಡೆಯಲಿದೆ. ಈ ಪ್ರವಾಸ ನಿಜಕ್ಕೂ ದಕ್ಷಿಣ ಆಫ್ರಿಕಾ ತಂಡಕ್ಕೆ ಸ್ಮರಣೀಯವಾಗಿದೆ. ಆರಂಭದಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-0ಯಿಂದ ಗೆದ್ದು ಇತಿಹಾಸ ಬರೆದಿತ್ತು. ಅಲ್ಲದೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಸ್ಥಿರ ಪ್ರದರ್ಶನ ನೀಡಿತ್ತು. ಅಲ್ಲದೆ 1-2 ರಿಂದ ಸರಣಿಯನ್ನು ಕೈ ಚೆಲ್ಲಿತ್ತು. ಈಗ ನಡೆಯುತ್ತಿರುವ ಟಿ20 ಪಂದ್ಯದಲ್ಲೂ ಪ್ರವಾಸಿ ತಂಡ ಉತ್ತಮ ಪ್ರದರ್ಶನ ನೀಡಿದ್ದು, ಸದ್ಯ 1-2 ರಿಂದ ಹಿನ್ನಡೆ ಅನುಭವಿಸುತ್ತಿದೆ.
ಟಿ20 ಸರಣಿಯ ನಾಲ್ಕನೇ ಪಂದ್ಯ ರದ್ದಾಗಿದ್ದರಿಂದ ಈಗ ಎಲ್ಲರ ಚಿತ್ತ ಐದನೇ ಪಂದ್ಯದ ಮೇಲೆ ನೆಟ್ಟಿದೆ. ಅಹಮದಾಬಾದ್ನಲ್ಲಿ ನಡೆಯಲಿರುವ ಐದನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಜಯದ ಅನಿವರ್ಯತೆ ಇದೆ. ಈ ಪಂದ್ಯದಲ್ಲಿ ಜಯ ಸಾಧಿಸಿ 5 ಪಂದ್ಯಗಳ ಟಿ20 ಸರಣಿ 2-2ರ ಸಮಬಲ ಸಾಧಿಸುವ ಆಸೆಯನ್ನು ಹೊಂದಿದೆ. ಇನ್ನು ಕೊನೆಯ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಮತ್ತೊಂದು ಸರಣಿ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ.