ಅಹಮದಾಬಾದ್: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಶುಕ್ರವಾರ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಟಿ20 ಸರಣಿಯ ಜಯದ ಓಟವನ್ನು ಮುಂದುವರಿಸಲು ಸೂರ್ಯಕುಮಾರ್ ಪಡೆ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಕೊನೆಯ ಪಂದ್ಯವನ್ನು ಗೆದ್ದು ಟಿ20 ಸರಣಿಯಲ್ಲಿ ಸಮಬಲ ಸಾಧಿಸುವ ಯೋಜನೆ ದಕ್ಷಿಣ ಆಫ್ರಿಕಾ ತಂಡದ್ದಾಗಿದೆ. ಭಾರತ ಸದ್ಯ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.
ಲಕ್ನೋದಲ್ಲಿ ನಡೆಯಬೇಕಿದ್ದ ಪಂದ್ಯ ದಟ್ಟ ಮಂಜಿನಿಂದ ರದ್ದಾಗಿದ್ದರಿಂದ, 5ನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಹಮದಾಬಾದ್ನಲ್ಲಿ ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದಾಗಿದೆ. ಈ ಪಿಚ್ ಕೆಂಪು ಮಣ್ಣಿನ ಪಿಚ್ ಮೇಲೆ ಪಂದ್ಯ ನಡೆಯುವ ಸಾಧ್ಯತೆ ಇದೆ. ಈ ಪಿಚ್ ಮೇಲೆ ಬ್ಯಾಟರ್ಗಳು ಆರ್ಭಟಿಸಬಹುದಾಗಿದೆ. ಆರಂಭದಲ್ಲಿ ವೇಗದ ಬೌಲರ್ಗಳ ಬೌನ್ಸ್ನ ಲಾಭ ಪಡೆಯಬಹುದು. ಪಂದ್ಯ ಸಾಗಿದಂತೆ ಸ್ಪಿನ್ ಬೌಲರ್ಗಳು ತಮ್ಮ ಕರಾಮತ್ತು ಪ್ರದರ್ಶಿಸಬಹುದಾಗಿದೆ.

ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟರ್ ಅಭಿಷೇಕ್ ಶರ್ಮಾ ಈ ಮೈದಾನದಲ್ಲಿ ಬಿಗ್ ಇನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಈ ಸರಣಿಯಲ್ಲಿ ಅಭಿಷೇಕ್ ಅವರ ಬ್ಯಾಟ್ನಿಂದ ಒಂದೇ ಒಂದು ಬಿಗ್ ಇನಿಂಗ್ಸ್ ಬಂದಿಲ್ಲ. ಇನ್ನು ಇವರಿಗೆ ಆರಂಭಿಕರಾಗಿ ಯಾರು ಕಣಕ್ಕೆ ಇಳಿಯುತ್ತಾರೆ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ. ಶುಭಮನ್ ಗಿಲ್ ಗಾಯದಿಂದ ಚೇತರಿಸಿಕೊಂಡಲ್ಲಿ ಇವರು ತಂಡ ಸೇರಬಹುದಾಗಿದೆ. ಇಲ್ಲದೇ ಇದ್ದಲ್ಲಿ ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆದು ತಮ್ಮ ಕ್ಷಮತೆ ಪ್ರದರ್ಶಿಸಲು ಯೋಜನೆ ಸಿದ್ಧ ಪಡಿಸಿಕೊಂಡಿದ್ದಾರೆ.
ನಾಯಕ ಸೂರ್ಯಕುಮಾರ್ ಯಾದವ್ ಅವರ ಮೇಲೆ ಒತ್ತಡವಿದೆ. ಇವರು ಈ ಪಂದ್ಯದಲ್ಲಿ ಪಿಚ್ ಮೇಲೆ ಕೊಂಚ ಸಮಯ ಕಳೆದು ಆ ಬಳಿಕ ಬಿಗ್ ಹಿಟ್ ಬಾರಿಸಬೇಕಿದೆ. ಅಂದಾಗ ಮಾತ್ರ ಇವರು ಬಿಗ್ ಇನಿಂಗ್ಸ್ ಕಟ್ಟಬಲ್ಲರು. ಇನ್ನು ತಿಲಕ್ ವರ್ಮಾ, ಜಿತೇಶ್ ಶರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಪರಿಸ್ಥಿತಿಗೆ ಅನುಗುಣವಾಗಿ ಆಟವನ್ನು ಆಡಬೇಕಿದೆ.

ಟೀಮ್ ಇಂಡಿಯಾದ ಪರ ವೇಗದ ಬೌಲಿಂಗ್ ನೊಗವನ್ನು ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಹೊರಲಿದ್ದಾರೆ. ಇವರು ಆರಂಭದಲ್ಲಿ ವಿಕೆಟ್ ಬೇಟೆ ನಡೆಸಿ ರನ್ಗಳಿಗೆ ಕಡಿವಾಣ ಹಾಕಬಹುದಾಗಿದೆ. ಇನ್ನು ಸ್ಪಿನ್ ಬೌಲರ್ ರೂಪದಲ್ಲಿ ಕಾಣಿಸಿಕೊಳ್ಳುವ ವರುಣ್ ಚಕ್ರವರ್ತಿ ಎದುರಾಳಿ ಬ್ಯಾಟರ್ಗಳನ್ನು ಕಾಡಬಲ್ಲರು.
ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್ ಡಿಕಾಕ್ ಅವರಿಗೆ ಈ ಪಂದ್ಯ ಸ್ಮರಣೀಯವಾಗಿದೆ. ಇದು ಅವರ ಟಿ20 ಕ್ರಿಕೆಟ್ ವೃತ್ತಿ ಜೀವನದ 100ನೇ ಪಂದ್ಯವಾಗಿರಲಿದೆ. ಈ ಪಂದ್ಯದಲ್ಲಿ ಡಿಕಾಕ್ ಬಿಗ್ ಇನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾಗುವ ಅನಿವಾರ್ಯತೆ ಇದೆ. ರೆಜಾ ಹೆಂಡ್ರಿಕ್ಸ್, ಐಡನ್ ಮಾರ್ಕ್ರಾಮ್, ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಬೇಕಿದೆ. ಲುಂಗಿ ಎನ್ಗಿಡಿ ಸೇರಿದಂತೆ ವೇಗಿಗಳು ಬಿಗುವಿನ ದಾಳಿ ನಡೆಸಬೇಕಿದೆ. ಅಂದಾಗ ಮಾತ್ರ ಸರಣಿಯಲ್ಲಿ ಸಮಬಲ ಸಾಧಿಸುವ ಕನಸು ನನಸಾಗುತ್ತದೆ.