
5 ಬೌಲರ್ಗಳೊಂದಿಗೆ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ
ಇತ್ತೀಚೆಗಿನ ಟೀಮ್ ಇಂಡಿಯಾ 5 ಬೌಲರ್ಗಳ ತಂಡಗಳೊಂದಿಗೆ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಅಭ್ಯಾಸವನ್ನು ಮಾಡಿಕೊಂಡಿದೆ. ಈ ಕುರಿತಾಗಿ ಮಾತನಾಡಿರುವ ಕೆಎಲ್ ರಾಹುಲ್ 5 ಬೌಲರ್ಗಳ ತಂಡದೊಂದಿಗೆ ಸೆಂಚುರಿಯನ್ ಟೆಸ್ಟ್ ಪಂದ್ಯದಲ್ಲಿಯೂ ಸಹ ಟೀಮ್ ಇಂಡಿಯಾ ಕಣಕ್ಕಿಳಿಯಲಿದ್ದು ಎದುರಾಳಿ ತಂಡದ 20 ವಿಕೆಟ್ ಪಡೆಯಬೇಕೆಂದರೆ ಈ ಸೂತ್ರವನ್ನು ಅನುಸರಿಸಲೇಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಐದನೇ ಕ್ರಮಾಂಕಕ್ಕಾಗಿ ಅಜಿಂಕ್ಯ ರಹಾನೆ ಮತ್ತು ಶ್ರೇಯಸ್ ಅಯ್ಯರ್ ನಡುವೆ ಪೈಪೋಟಿ
ಹೀಗೆ ಒಟ್ಟು 5 ಬೌಲರ್ಗಳನ್ನು ಕಣಕ್ಕಿಳಿಸಿದರೆ ತಂಡದಲ್ಲಿ ಉಳಿದ 6 ಸ್ಥಾನಗಳಿಗೆ ಮಯಾಂಕ್ ಅಗರ್ವಾಲ್, ಕೆ ಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ಮತ್ತೋರ್ವ ಆಟಗಾರ ಸ್ಥಾನ ಪಡೆದುಕೊಳ್ಳಬಹುದು. ಇಷ್ಟು ಆಟಗಾರರು ಖಚಿತವಾಗಿ ಸ್ಥಾನ ಪಡೆದುಕೊಳ್ಳಲಿದ್ದು ಐದನೇ ಕ್ರಮಾಂಕಕ್ಕಾಗಿ ಶ್ರೇಯಸ್ ಅಯ್ಯರ್ ಮತ್ತು ಅಜಿಂಕ್ಯ ರಹಾನೆ ನಡುವೆ ಪೈಪೋಟಿ ಏರ್ಪಡಲಿದೆ.

ಐದನೇ ಕ್ರಮಾಂಕದ ಆಟಗಾರನ ಆಯ್ಕೆ ಕುರಿತು ಕೆಎಲ್ ರಾಹುಲ್ ಹೇಳಿದ್ದಿಷ್ಟು
ಅಜಿಂಕ್ಯ ರಹಾನೆ ಅಥವಾ ಶ್ರೇಯಸ್ ಅಯ್ಯರ್ ಇಬ್ಬರಲ್ಲಿ ಯಾವ ಆಟಗಾರನನ್ನು ಆಯ್ಕೆ ಮಾಡಲಾಗುತ್ತದೆ ಎಂಬುದರ ಕುರಿತು ಪ್ರತಿಕ್ರಿಯಿಸಿರುವ ಕೆಎಲ್ ರಾಹುಲ್ ಇಬ್ಬರ ಪರವಾಗಿಯೂ ಮಾತನಾಡಿದ್ದಾರೆ. ಆದರೆ ಅಜಿಂಕ್ಯಾ ರಹಾನೆ ತಂಡದ ಪ್ರಮುಖ ಆಟಗಾರ ಎಂದು ಉಲ್ಲೇಖಿಸಿರುವ ಕೆಎಲ್ ರಾಹುಲ್ ಅಜಿಂಕ್ಯ ರಹಾನೆ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದಂತಿದೆ.
ಅಜಿಂಕ್ಯ ರಹಾನೆ ಕಳೆದ ಆಸ್ಟ್ರೇಲಿಯಾ ಪ್ರವಾಸದ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು ಹಾಗೂ ಹಲವಾರು ವರ್ಷಗಳಿಂದ ಟೀಮ್ ಇಂಡಿಯಾ ಪರ ರಹಾನೆ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬಂದಿರುವ ಪ್ರಮುಖ ಆಟಗಾರ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
ಇನ್ನು ಶ್ರೇಯಸ್ ಅಯ್ಯರ್ ಕುರಿತಾಗಿ ಕೂಡಾ ಮಾತನಾಡಿರುವ ಕೆ ಎಲ್ ರಾಹುಲ್ ಇತ್ತೀಚೆಗಷ್ಟೇ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ ಶತಕ ಬಾರಿಸಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ಹನುಮ ವಿಹಾರಿ ಕೂಡ ಇದೇ ದಕ್ಷಿಣ ಆಫ್ರಿಕಾ ನೆಲದಲ್ಲಿ ಇತ್ತೀಚೆಗಷ್ಟೇ ನಡೆದ ಭಾರತ ಎ ಮತ್ತು ದಕ್ಷಿಣ ಆಫ್ರಿಕಾ ಎ ನಡುವಿನ ಸರಣಿಯಲ್ಲಿ ಸತತ 3 ಅರ್ಧಶತಕಗಳನ್ನು ಬಾರಿಸುವ ಮೂಲಕ ಫಾರ್ಮ್ ಕಂಡುಕೊಂಡಿದ್ದಾರೆ. ಹೀಗಾಗಿ ಈ ಮೂವರ ನಡುವೆ ಯಾವ ಆಟಗಾರನನ್ನು ಐದನೇ ಕ್ರಮಾಂಕಕ್ಕೆ ಆಯ್ಕೆ ಮಾಡಬೇಕು ಎಂಬುದನ್ನು ಶೀಘ್ರದಲ್ಲಿಯೇ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ ಇಂದು ಕೆಎಲ್ ರಾಹುಲ್ ಹೇಳಿದ್ದಾರೆ.


Click it and Unblock the Notifications












