
ಭಾರತದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾ ಪಾಳಯದಲ್ಲಿ ಸಾಕಷ್ಟು ಗೊಂದಲಕಾರಿ ಬೆಳವಣಿಗೆಗಳು ನಡೆಯುತ್ತಿದೆ. ಟೀಮ್ ಇಂಡಿಯಾದ ಏಕದಿನ ತಂಡದ ನಾಯಕತ್ವ ವಿರಾಟ್ ಕೊಹ್ಲಿಯಿಂದ ರೋಹಿತ್ ಶರ್ಮಾಗೆ ನೀಡಿದ ಬಳಿಕ ತಂಡದ ಒಗ್ಗಟ್ಟಿನ ಕುರಿತಾಗಿ ಪ್ರಶ್ನೆಗಳು ಏಳುವಂತಾಗಿದೆ. ಈ ಮಧ್ಯೆ ರೋಹಿತ್ ಶರ್ಮಾ ಟೆಸ್ಟ್ ಸರಣಿಗೂ ಮುನ್ನ ಗಾಯಗೊಂಡು ಹೊರಗುಳಿದಿದ್ದರೆ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾಹಿತಿಗಳು ಬರುತ್ತಿದೆ. ಈ ಬೆಳವಣಿಗೆಗಳು ಕೂಡ ಭಾರತೀಯ ಕ್ರಿಕೆಟ್ ತಂಡದಲ್ಲಿ ಎಲ್ಲವೂ ಸರಿಯಿಲ್ವಾ ಎಂಬ ಪ್ರಶ್ನೆಗಳ ಉದ್ಭವಕ್ಕೆ ಕಾರಣವಾಗಿದೆ.
ಈ ಎಲ್ಲಾ ಗೊಂದಲಗಳ ಮಧ್ಯೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಒಂದು ನಿರಾಳದ ಸುದ್ದುಯನ್ನು ನೀಡಿದೆ. ಟೆಸ್ಟ್ ಹಾಗೂ ಏಕದಿನ ಸರಣಿಯಗಾಗಿ ದಕ್ಷಿಣ ಆಫ್ರಿಕಾಗೆ ತೆರಳುವ ಭಾರತೀಯ ಕ್ರಿಕೆಟ್ ತಮಡದ ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ಕೇವಲ ಒಂದು ದಿನ ಮಾತ್ರ ಕ್ವಾರಂಟೈನ್ನಲ್ಲಿ ಉಳಿದುಕೊಂಡರೆ ಸಾಕು ಎಂಬ ಮಾಹಿತಿಯನ್ನು ನೀಡಿದೆ.
ಟೀಮ್ ಇಂಡಿಯಾದ ಆಟಗಾರರ ಮೊದಲಿಗೆ ಭಾರತದಲ್ಲಿ ಮೂರು ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಲಿದ್ದು ಅದಾದ ಬಳಿಕ ಚಾರ್ಟೆಡ್ ಫ್ಲೈಟ್ ಮೂಲಕ ದಕ್ಷಿಣ ಆಫ್ರಿಕಾದ ಜೋಹನ್ಸ್ಬರ್ಗ್ಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಮೂರು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಹೀಗಾಗಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ದಕ್ಷಿಣ ಆಫ್ರಿಕಾಗೆ ಬಂದಿಳಿದ ಬಳಿಕ ಒಂದು ದಿನ ಹೋಟೆಲ್ ಕ್ವಾರಂಟೈನ್ನಲ್ಲಿದ್ದು ಬಳಿಕ ಅಭ್ಯಾಸವನ್ನು ನಡೆಸಬಹುದು ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಮಾಹಿತಿ ನೀಡಿದೆ.
"ಟೀಮ್ ಇಂಡಿಯಾ ಆಟಗಾರರು ದಕ್ಷಿಣ ಆಫ್ರಿಕಾಗೆ ಬಂದಿಳಿದ ಬಳಿಕ ಹೋಟೆಲ್ ಕ್ವಾರಂಟೈನ್ಗೆ ಮುನ್ನ ಕೊವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಆ ಪರೀಕ್ಷೆಯ ಫಲಿತಾಂಶ ಒಂದು ದಿನಕ್ಕೆ ಮುನ್ನವೇ ಬರಲಿದ್ದು ಅದರ ಆಧಾರದಲ್ಲಿ ಎಲ್ಲಾ ಆಟಗಾರರು ಕೂಡ ಕ್ವಾರಂಟೈನ್ನಿಂದ ಹೊರಬರಲಿದ್ದಾರೆ" ಎಂದು ಕ್ರಿಕೆಟ್ ಸೌತ್ ಆಫ್ರಿಕಾದ ವಕ್ತಾರರು ಮಾಹಿತಿ ನೀಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಮುಖ್ಯಸ್ಥ ಲಾವ್ಸನ್ ನಾಯ್ಡೋ ಪ್ರತಿಕ್ರಿಯಿಸಿದ್ದರು. ಈ ಸಂದರ್ಭದಲ್ಲಿ ಅವರು ದಕ್ಷಿಣ ಆಫ್ರಿಕಾದಲ್ಲಿ ಕೊರೊನಾವೈರಸ್ ಭೀತಿಯ ಮಧ್ಯೆಯೂ ಭಾರತ ಈ ಸರಣಿಯ ನಡಸಲು ಪೂರಕವಾಗಿ ನಡೆದುಕೊಂಡ ರೀತಿಗೆ ಸಂತಸ ವ್ಯಕ್ತಪಡಿಸಿದ್ದಾರೆ. ನಾವು ಈ ಸರಣಿಯನ್ನು ಸುರಕ್ಷಿತವಾಗಿ ನಡೆಸಲು ಪೂರಕವಾಗಿರುವಂತೆ ಎಲ್ಲಾ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದ್ದೇವೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ಆಟಗಾರರ ಆರೋಗ್ಯದ ಮೇಲೆ ನಾವು ಮೊದಲ ಆದ್ಯತೆಯನ್ನು ನೀಡುತ್ತಿದ್ದೇವೆ. ಈ ಸರಣಿಯನ್ನು ಬಯೋಬಬಲ್ ವಾತಾವರಣದಲ್ಲಿ ನಡೆಸಲಾಗುತ್ತಿದ್ದು ಭಾರತ ತಂಡ ಚಾರ್ಟರ್ಫ್ಲೈಟ್ ಮೂಲಕ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಲಿದೆ" ಎಂದು ಅವರು ಮಾಹಿತಿ ನೀಡಿದರು.
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಜಯಂತ್ ಯಾದವ್, ಇಶಾಂತ್ ಶರ್ಮಾ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಿಯಾಂಕ್ ಪಾಂಚಾಲ್
ಮೀಸಲು ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ದೀಪಕ್ ಚಾಹರ್, ಅರ್ಜನ್ ನಾಗ್ವಾಸ್ವಾಲ್ಲಾ