
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಅಂತ್ಯವಾಗಿದೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ತಂಡಕ್ಕೆ 31 ರನ್ಗಳ ಅಂತರದಿಂದ ಶರಣಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಕೆಎಲ್ ರಾಹುಲ್ ಮುನ್ನಡೆಸಿದ್ದು ವಿರಾಟ್ ಕೊಹ್ಲಿ ಕೇವಲ ಆಟಗಾರನಾಗಿ ಕಣಕ್ಕಿಳಿದಿದ್ದರು. ಆದರೆ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿಯೂ ಅನೇಕ ಕಾರಣಗಳಿಂದ ನೆಟ್ಟಿಗರ ಕೇಂದ್ರಬಿಂದುವಾಗಿದ್ದರು ಎಂಬುದು ಗಮನಾರ್ಹ.
ವಿರಾಟ್ ಕೊಹ್ಲಿ ಕ್ರಿಕೆಟ್ನ ಅತ್ಯಂತ ಮನರಂಜನೀಯ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ. ಬ್ಯಾಟರ್ ಆಗಿ ತನ್ನ ಸೊಗಸಾದ ಬ್ಯಾಟಿಂಗ್ನಿಂದ ಅಭಿಮಾನಿಗಳನ್ನು ಮನರಂಜಿಸಿದರೆ ನಾಯಕನಾಗಿಯೂ ತನ್ನ ಆಕ್ರಮಣಕಾರಿ ವರ್ತನೆಯಿಂದ ಗಮನಸೆಳೆಯುತ್ತಾರೆ. ಇನ್ನು ಫೀಲ್ಡಿಂಗ್ ಸಂದರ್ಭದಲ್ಲಿ ವಿಕೆಟ್ ಬಿದ್ದಾಗಲಂತೂ ವಿರಾಟ್ ವಿಕೆಟ್ ಪಡೆದ ಬೌಲರ್ಗಳಿಗಿಂತಲೂ ಹೆಚ್ಚಿನ ಸಂರ್ಭಮವನ್ನು ಪಡುತ್ತಾರೆ. ಕೊಹ್ಲಿಯ ಈ ಸಂಭ್ರಮ ನಾಯಕತ್ವದಿಂದ ಕೆಳಕ್ಕಿಳಿದ ಮೇಲೂ ಕಡಿಮೆಯಾಗಿಲ್ಲ.
ದಕ್ಷಿಣ ಆಪ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಸಂಭ್ರಮಿಸಿದ ರೀತಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಕೆಟ್ ಬಿದ್ದ ಬಳಿಕ ವಿರಾಟ್ ಕೊಹ್ಲಿ ಕೊಹ್ಲಿ ಎಂದಿನಂತೆಯೇ ಸಂಭ್ರಮಿಸುತ್ತಾ ಆರ್ ಅಶ್ವಿನ್ ಅವರನ್ನು ಬಿಗಿಯಾಗಿ ಅಪ್ಪಿಕೊಂಡಿದ್ದಾರೆ. ಈ ಅಪ್ಪುಗೆಗೆ ನೆಟ್ಟಿಗರು ನಾನಾ ರೀತಿಯಲ್ಲಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಅನುಭವ ಆಟಗಾರ ಆರ್ ಅಶ್ವಿನ್ ಸುಮಾರು ನಾಲ್ಕು ವರ್ಷಗಳ ಅವಧಿಯ ಬಳಿಕ ಭಾರತದ ಏಕದಿನ ತಂಡದಲ್ಲಿ ಆಡುವ ಅವಕಾಶ ಪಡೆದರು. 2017ರಲ್ಲಿ ವೆಸ್ಟ್ ಇಂಡಿಸ್ ವಿರುದ್ಧ ನಡೆದ ಪಂದ್ಯದ ಬಳಿಕ ಆರ್ ಅಶ್ವಿನ್ ಏಕದಿನ ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ. ಕಳೆದ ವಿಶ್ವಕಪ್ನಲ್ಲಿ ಅಶ್ವಿನ್ ಟಿ20 ಮಾದರಿಗೂ ಕಮ್ಬ್ಯಾಕ್ ಮಾಡಿದ್ದರು.
ಈ ಪಂದ್ಯದಲ್ಲಿ ಆರ್ ಅಶ್ವಿನ್ ದಕ್ಷಿಣ ಆಪ್ರಿಕಾ ತಂಡದ ಆರಂಭಿಕ ಆಟಗಾರ ಕ್ವಿಂಟರ್ ಡಿಕಾಕ್ ವಿಕೆಟ್ ಕಬಳಿಸಿದರು. 27 ರನ್ಗಳಿಸಿದ್ದ ಸಂದರ್ಭದಲ್ಲಿ ಆರ್ ಅಶ್ವಿನ್ ಎಸೆತಕ್ಕೆ ಡಿಕಾಕ್ ಬೌಲ್ಡ್ ಆಗಿದ್ದರು. ಈ ಮೂಲಕ ಟೆಂಬಾ ಬವುಮಾ ಹಾಗೂ ಡಿಕಾಕ್ ಅವರ 39 ರನ್ಗಳ ಜೊತೆಯಾಟವನ್ನು ಮುರಿದರು. ಈ ಮೂಲಕ ಟೀಮ್ ಇಂಡಿಯಾಗೆ ಪ್ರಮುಖ ಮೇಲುಗೈ ಒದಗಿಸಿದ್ದರು. 16ನೇ ಓವರ್ನ್ಲಲಿ ಆರ್ ಅಶ್ವಿನ್ ಡಿಕಾಕ್ ವಿಕೆಟ್ ಪಡೆದ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅಶ್ವಿನ್ ಬಳಿಗೆ ಓಡಿ ಬಂದು ಬಿಗಿಯಾಗಿ ಅಪ್ಪಿಕೊಳ್ಳುವ ಮೂಲಕ ಆ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಪ್ರಿಕಾ ತಂಡ ಉತ್ತಮ ಆರಂಭವನ್ನು ಪಡೆಯಲಿಲ್ಲ. 19 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಹರಿಣಗಳ ಪಡೆ 68 ರನ್ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ಟೆಂಬಾ ಬವುಮಾ ಹಾಗೂ ರಾಸಿನ್ ವೆಂಡರ್ ಡಸ್ಸೆನ್ ಜೋಡಿ ಅಮೋಘ ಪ್ರದರ್ಶನ ನೀಡಿದ್ದು ದ್ವಿಶತಕದ ಜೊತೆಯಾಟ ನೀಡಿದರು. ನಾಯಕ ಟೆಂಬಾ ಬವುಮಾ 110 ರನ್ಗಳ ಕೊಡುಗೆ ನೀಡಿದರೆ ಡಸ್ಸೆನ್ ಅಜೇಯ 129 ರನ್ಗಳನ್ನು ಸಿಡಿಸಿದರು. ಈ ಮೂಲಕ 4 ವಿಕೆಟ್ಗಳನ್ನು ಕಳೆದುಕೊಂಡು 296 ರನ್ಗಳಿಸಿತು.
ಈ ಗುರಿ ಬೆನ್ನಟ್ಟಿದ ಭಾರತ ತಂಡ 46 ರನ್ಗಳಿಸುವಷ್ಟರಲ್ಲಿ ನಾಯಕ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್ಗೆ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಅದ್ಭುತವಾದ ಜೊತೆಯಾಟವನ್ನು ನೀಡಿದರು. ಶಿಖರ್ ಧವನ್ 79 ರನ್ಗಳಿಸಿ ಔಟಾಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ನಂತರ ವಿರಾಟ್ ಕೊಹ್ಲಿ ಕೂಡ ಅರ್ಧ ಶತಕ ಸಿಡಿಸಿದ ನಂತರ ವಿಕೆಟ್ ಕಳೆದುಕೊಂಡರು. ಬಳಿಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರರು ನೀರಸ ಪ್ರದರ್ಶನ ನೀಡಿ ಫೆವಿಲಿಯನ್ಗೆ ಸಾಗಿದರು. ಈ ಮಧ್ಯೆ ಶಾರ್ದೂಲ್ ಠಾಕೂರ್ ಕೆಳ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ನೀಡಿ ಅರ್ಧ ಶತಕವನ್ನು ಗಳಸಿಇದರು. ಆದರೆ ಈ ಪ್ರದರ್ಶನ ತಂಡಕ್ಕೆ ಹೆಚ್ಚಿನ ಲಾಭವನ್ನುಂಟು ಮಾಡಲಿಲ್ಲ.