
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಹೆಗಲಿಗೆ ಉಪನಾಯಕನ ಜವಾಬ್ದಾರಿ
ಸದ್ಯ ಗಾಯದ ಸಮಸ್ಯೆಗೆ ಒಳಗಾಗಿರುವ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದು, ಕನ್ನಡಿಗ ಕೆಎಲ್ ರಾಹುಲ್ ಉಪನಾಯಕನಾಗುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಅಜಿಂಕ್ಯ ರಹಾನೆಯಿಂದ ಇತ್ತೀಚೆಗಷ್ಟೇ ಬಿಸಿಸಿಐ ಟೆಸ್ಟ್ ಉಪನಾಯಕನ ಸ್ಥಾನವನ್ನು ಕಸಿದುಕೊಂಡಿರುವುದರಿಂದ ಈ ಒಂದು ಸರಣಿಗೆ ಮಾತ್ರ ಮತ್ತೆ ಅಜಿಂಕ್ಯ ರಹಾನೆಯನ್ನು ಉಪನಾಯಕನನ್ನಾಗಿ ನೇಮಿಸುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಕೆಎಲ್ ರಾಹುಲ್ ಉಪ ನಾಯಕನ ಜವಾಬ್ದಾರಿಯನ್ನು ಹೊರುವುದು ಬಹುತೇಕ ಖಚಿತ ಎನ್ನಬಹುದು.

ಏಕದಿನ ಸರಣಿಗೂ ರೋಹಿತ್ ಅಲಭ್ಯರಾದರೆ ನಾಯಕ ಯಾರಾಗಲಿದ್ದಾರೆ?
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ರೋಹಿತ್ ಶರ್ಮಾ ಏಕದಿನ ಸರಣಿ ಸಮಯಕ್ಕೆ ಚೇತರಿಸಿಕೊಂಡು ತಂಡ ಸೇರಿದರೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವೇನಿಲ್ಲ. ಆದರೆ ಒಂದುವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಸಮಯಕ್ಕೂ ರೋಹಿತ್ ಶರ್ಮಾ ಚೇತರಿಸಿಕೊಳ್ಳದೇ ಇದ್ದರೆ ಭಾರತ ಏಕದಿನ ತಂಡಕ್ಕೆ ತಾತ್ಕಾಲಿಕ ನಾಯಕನನ್ನು ನೇಮಿಸಬೇಕಾದ ತಲೆನೋವು ಬಿಸಿಸಿಐ ಆಯ್ಕೆಗಾರರಿಗೆ ಬಂದೊದಗಲಿದೆ. ಸದ್ಯ ಇತ್ತೀಚೆಗಷ್ಟೇ ಏಕದಿನ ನಾಯಕತ್ವವನ್ನು ಕಳೆದುಕೊಂಡಿರುವ ವಿರಾಟ್ ಕೊಹ್ಲಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಾತ್ಕಾಲಿಕ ನಾಯಕನನ್ನಾಗಿ ರೋಹಿತ್ ಇಲ್ಲದೇ ಇರುವ ಕಾರಣಕ್ಕಾಗಿ ನೇಮಿಸುವುದು ದೂರದ ಮಾತು. ಹೀಗಾಗಿ ರೋಹಿತ್ ಅಲಭ್ಯರಾದರೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಯಾರಿಗಿದೆ ಎಂಬುದು ಇದೀಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ನಾನು ಸಿದ್ಧ ಎಂದ ಕೊಹ್ಲಿ
ರೋಹಿತ್ ಶರ್ಮಾ ಗಾಯದ ಸಮಸ್ಯೆಯನ್ನು ಹೇಳಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ವೈಯಕ್ತಿಕ ಕಾರಣಗಳನ್ನು ನೀಡಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ವಿಶೇಷವಾಗಿ ಸುದ್ದಿಗೋಷ್ಠಿಯನ್ನು ನಡೆಸಿರುವ ವಿರಾಟ್ ಕೊಹ್ಲಿ ಈ ಎಲ್ಲಾ ಸುದ್ದಿಗಳಿಗೂ ತೆರೆ ಎಳೆದಿದ್ದು ತಾನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲು ಸಿದ್ಧನಿದ್ದೇನೆ ಮತ್ತು ಇದನ್ನು ಬಿಸಿಸಿಐಗೂ ಕೂಡ ತಿಳಿಸಿದ್ದೇನೆ ಎಂದು ಹೇಳಿಕೆಯನ್ನು ನೀಡಿದ್ದಾರೆ.


Click it and Unblock the Notifications
