ಟಿ20 ವಿಶ್ವಕಪ್ನಲ್ಲಿ ಅಜೇಯ ಓಟವನ್ನು ನಡೆಸಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೂಪರ್ 8 ಹಂತದಲ್ಲಿ ಭಾನುವಾರ ಕಾದಾಟ ನಡೆಸಲಿವೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದು ಪಂದ್ಯ ರೋಚಕತೆ ಹೆಚ್ಚಿಸಿದೆ. ಈ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲುವ ನೆಚ್ಚಿನ ತಂಡವಾಗಿದೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಸ್ಥಿರ ಪ್ರದರ್ಶನ ನೀಡಿ ಸೂಪರ್ 8 ಹಂತದಲ್ಲಿ ಮೊದಲ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ.
ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಎರಡೂ ತಂಡಗಳು ಸಹ ಬಲಿಷ್ಠವಾಗಿವೆ. ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ನೀಡಿರುವ ಪ್ರದರ್ಶನ ಆತ್ಮ ವಿಶ್ವಾಸ ಹೆಚ್ಚಿಸಿದೆ. ಆಡಿರುವ ನಾಲ್ಕೂ ಪಂದ್ಯಗಳನ್ನು ಗೆದ್ದಿರುವ ಭಾರತ ಅಜೇಯವಾಗಿ ಎ ಗುಂಪಿನಿಂದ ಸೂಪರ್ 8 ಹಂತವನ್ನು ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ಸಹ ಲೀಗ್ ಹಂತದಲ್ಲಿ ಆಡಿರುವ ಎಲ್ಲ ಪಂದ್ಯಗಳನ್ನು ಗೆದ್ದು ನಾಕೌಟ್ ಹಂತಕ್ಕೆ ಪ್ರವೇಶಿಸಿದೆ.

ಟೀಮ್ ಇಂಡಿಯಾ ಆಟಗಾರರು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಆದರೆ ಟಿ20 ಕ್ರಿಕೆಟ್ನ ಸೂಪರ್ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಸತತ ವೈಫಲ್ಯವನ್ನು ಅನುಭವಿಸುತ್ತಿರುವುದು ತಂಡದ ಚಿಂತೆ ಹೆಚ್ಚಿಸಿದೆ. ಇವರು ಟಿ20 ವಿಶ್ವಕಪ್ನಲ್ಲಿ ಇನ್ನು ಖಾತೆಯನ್ನೇ ಓಪನ್ ಮಾಡಿಲ್ಲ. ಹೀಗಾಗಿ ಇವರ ಮೇಲೆ ಒತ್ತಡವಿದೆ. ಇವರನ್ನು ಬೆಂಚ್ ಮೇಲೆ ಕೂಡಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಅಬ್ಬರದ ಪ್ರದರ್ಶನ ನೀಡುವ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಗುತ್ತದಾ ಎಂಬ ಪ್ರಶ್ನೆ ಉದ್ಭವಿಸಿದೆ.
ಟಿ20 ವಿಶ್ವಕಪ್ನಲ್ಲಿ ಭಾರತದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್. ಇವರು ಈಗಾಗಲೇ ಟೂರ್ನಿಯಲ್ಲಿ ಆರ್ಭಟಿಸಿದ್ದಾರೆ. ಹೀಗಾಗಿ ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ತಮ್ಮ ನೈಜ ಆಟವನ್ನು ಆಡಬೇಕಿದೆ. ಇನ್ನು ಆಲ್ರೌಂಡರ್ ರೂಪದಲ್ಲಿ ಕಾಣಿಸಿಕೊಳ್ಳುವ ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚಬೇಕಿದೆ. ನೆದರ್ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ದುಬೆ ಅಬ್ಬರಿಸಿದ್ದರಿಂದ ಇವರ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿರಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡದಲ್ಲಿ ಸಾಲು ಸಾಲು ಎಗಡೈ ಬ್ಯಾಟರ್ಗಳು ಇದ್ದು, ಇವರಿಗೆ ಕಾಡಲು ಆಫ್ ಸ್ಪಿನ್ ಬೌಲರ್ ಒಬ್ಬರು ತಂಡದಲ್ಲಿ ಸ್ಥಾನ ಪಡೆದರೆ ಬೆಸ್ಟ್ ಎಂಬ ಕಲ್ಪನೆಯಿಂದ ವಾಷಿಂಗ್ಟನ್ ಸುಂದರ್ಗೆ ಅವಕಾಶ ಸಿಗುತ್ತದಾ ಎಂಬ ಪ್ರಶ್ನೆ ಉದ್ಭವಿಸಿದೆ. ಇವರಿಗೆ ಸ್ಥಾನ ನೀಡಿದರೆ, ಯಾವ ಆಟಗಾರನ ಬದಲಿಗೆ ಇವರು ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ಇನ್ನು ಟೀಮ್ ಇಂಡಿಯಾ ಮಹತ್ವದ ಪಂದ್ಯದಲ್ಲಿ ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಕಡಿಮೆ ಇದೆ. ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಅರ್ಶದೀಪ್ ಸಿಂಗ್ ವೇಗದ ನೊಗವನ್ನು ಹೊರಲಿದ್ದಾರೆ. ಸ್ಪಿನ್ ಬೌಲರ್ ಆಗಿ ವರುಣ್ ಚಕ್ರವರ್ತಿ ಎದುರಾಳಿ ಬ್ಯಾಟರ್ಗಳನ್ನು ಕಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಾದರೂ ವರುಣ್ ತಮ್ಮ ಬೌಲಿಂಗ್ ಕೋಟಾವನ್ನು ಪೂರ್ಣಗೊಳಿಸುತ್ತಾರಾ ಎಂಬ ಪ್ರಶ್ನೆ ಸಹ ಅಭಿಮಾನಿಗಳ ಮನದಲ್ಲಿ ಮೂಡಿದೆ.
ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರರು ಭರ್ಜರಿ ಲಯದಲ್ಲಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅನುಭವಿ ಆಟಗಾರರನ್ನು ಹೊಂದಿರುವ ಐಡನ್ ಮಾರ್ಕ್ರಾಮ್ ಪಡೆ ಭಾರತವನ್ನು ಸೋಲಿಸಲು ಬೇಕಾದ ತಯಾರಿಗಳನ್ನು ಹೆಣೆದುಕೊಳ್ಳುತ್ತಿದ್ದಾರೆ. ಅಂದಹಾಗೆ ದಕ್ಷಿಣ ಆಫ್ರಿಕಾದ ನಾಯಕ ಮಾರ್ಕ್ರಾಮ್ ತಮ್ಮ ಬ್ಯಾಟಿಂಗ್ಗಿಂತಲೂ ಬೌಲಿಂಗ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ.