ಕೊಹ್ಲಿ, ರಾಹುಲ್ ನಡುವೆ ಬಿರುಕಿದೆ; ಇದಕ್ಕೆ ಪಂದ್ಯದ ವೇಳೆ ನಡೆದ ಈ ಘಟನೆಯೇ ಸಾಕ್ಷಿ ಎಂದ ಮಾಜಿ ಕ್ರಿಕೆಟಿಗ

ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ, ಆಟಗಾರರ ನಡುವೆ ವೈಮನಸ್ಸಿದೆ ಹಾಗೂ ಆಟಗಾರರು ಮತ್ತು ಬಿಸಿಸಿಐ ನಡುವೆ ಬಿರುಕಿದೆ ಎಂಬ ಅಭಿಪ್ರಾಯಗಳನ್ನು ಈಗಾಗಲೇ ಸಾಕಷ್ಟು ಬಾರಿ ಹಲವಾರು ಮಾಜಿ ಕ್ರಿಕೆಟಿಗರು ಹೊರಹಾಕಿದ್ದರು. ಇನ್ನು ಇಂತಹ ಅಭಿಪ್ರಾಯಗಳಿಗೆ ಪುಷ್ಟಿ ನೀಡುವಂತಹ ಹಲವಾರು ಘಟನೆಗಳು ಇತ್ತೀಚೆಗೆ ಭಾರತ ಕ್ರಿಕೆಟ್ನಲ್ಲಿ ನಡೆಯುತ್ತಿದ್ದು ಸದ್ಯ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವೆ ನಡೆಯುತ್ತಿರುವ ಶೀತಲ ಸಮರವೇ ಇದಕ್ಕೆ ತಾಜಾ ಉದಾಹರಣೆ ಎನ್ನಬಹುದು.
ಹೌದು, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸುವಾಗ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿದ್ದನ್ನು ಯಾರೂ ಸಹ ಮರೆತಿಲ್ಲ. ಹಾಗೂ ಆ ಘಟನೆ ನಡೆದ ಸ್ವಲ್ಪ ದಿನದ ನಂತರವೇ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಬಿಸಿಸಿಐಗೆ ಟಾಂಗ್ ನೀಡುವಂತಹ ಉತ್ತರಗಳನ್ನು ನೀಡಿದ್ದೂ ಸಹ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳ ತಲೆಯಲ್ಲಿ ಇಂದಿಗೂ ಇದೆ. ಹೀಗೆ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿ ಬಿಸಿಸಿಐ ವಿರುದ್ಧ ಪರೋಕ್ಷವಾಗಿ ನೀಡಿದ್ದ ಹೇಳಿಕೆಗಳ ಕುರಿತಾಗಿ ಗಂಗೂಲಿ ಶೋಕಾಸ್ ನೋಟಿಸ್ ನೀಡಲು ಮುಂದಾಗಿದ್ದರಂತೆ. ಸದ್ಯ ಈ ವಿಷಯ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಡುತ್ತಿದ್ದು, ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ಟಾರ್ಗೆಟ್ ಮಾಡುತ್ತಿದೆ ಎಂಬ ಅಭಿಪ್ರಾಯಗಳನ್ನು ಕೊಹ್ಲಿ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
ಇದರ ಬೆನ್ನಲ್ಲೇ ಇದೀಗ ವಿರಾಟ್ ಕೊಹ್ಲಿ ಮತ್ತು ಟೀಮ್ ಇಂಡಿಯಾದ ತಾತ್ಕಾಲಿಕ ನಾಯಕ ಕೆಎಲ್ ರಾಹುಲ್ ನಡುವೆ ವೈಮನಸ್ಸಿದೆ ಹಾಗೂ ಟೀಮ್ ಇಂಡಿಯಾ ಇಬ್ಭಾಗವಾಗಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದನೀಶ್ ಕನೇರಿಯಾ ಹೇಳಿಕೆಯನ್ನು ನೀಡಿದ್ದು ಅನುಮಾನ ಉಂಟಾಗುವಂತೆ ಮಾಡಿದ್ದಾರೆ. ತಾನು ಈ ರೀತಿಯ ಹೇಳಿಕೆಯನ್ನು ನೀಡಲು ಕಾರಣವನ್ನು ಕೂಡಾ ತಿಳಿಸಿರುವ ದನೀಶ್ ಕನೇರಿಯಾ ಈ ಕೆಳಕಂಡಂತೆ ಮಾತನಾಡಿದ್ದಾರೆ..

ಕೊಹ್ಲಿ ಮತ್ತು ರಾಹುಲ್ ನಡುವೆ ವೈಮನಸ್ಸು ಮೂಡಿದಂತಿದೆ ಎಂದ ಕನೇರಿಯಾ
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಹಲವು ವರ್ಷಗಳ ನಂತರ ವಿರಾಟ್ ಕೊಹ್ಲಿ ತಂಡದ ಓರ್ವ ಆಟಗಾರನಾಗಿ ಕಣಕ್ಕಿಳಿದರು. ಅತ್ತ ಕೆ ಎಲ್ ರಾಹುಲ್ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದರು. ಈ ಪಂದ್ಯದ ವೇಳೆ ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ನಲ್ಲಿ ತಂಡ ಇಬ್ಭಾಗವಾಗಿತ್ತು ಎಂದು ಕನೇರಿಯಾ ಹೇಳಿದ್ದಾರೆ. ವಿರಾಟ್ ಕೊಹ್ಲಿ ಬಳಗ ಒಂದೆಡೆ ಕುಳಿತಿದ್ದರೆ ರಾಹುಲ್ ಬಳಗ ಮತ್ತೊಂದೆಡೆ ಕುಳಿತಿತ್ತು, ಒಟ್ಟಿನಲ್ಲಿ ಟೀಮ್ ಇಂಡಿಯಾ ಇಬ್ಭಾಗವಾಗಿದೆ ಹಾಗೂ ಕೊಹ್ಲಿ ಈ ವೇಳೆ ನಾಯಕ ರಾಹುಲ್ ಪಕ್ಕವೂ ಕೂಡ ಸುಳಿಯಲಿಲ್ಲ ಎಂದು ದನೀಶ್ ಕನೇರಿಯಾ ಅನುಮಾನ ಪಟ್ಟಿದ್ದಾರೆ.

ಕೊಹ್ಲಿ ನಾಯಕನಾಗಿದ್ದಾಗ ತೋರಿಸುತ್ತಿದ್ದ ಆಸಕ್ತಿಯನ್ನು ತೋರಲಿಲ್ಲ
ಇನ್ನೂ ಮುಂದುವರಿದು ಮಾತನಾಡಿರುವ ದನೀಶ್ ಕನೇರಿಯಾ ವಿರಾಟ್ ಕೊಹ್ಲಿ ನಾಯಕನಾಗಿದ್ದಾಗ ತೋರಿಸುತ್ತಿದ್ದ ಆಸಕ್ತಿ ಆಟಗಾರನಾಗಿ ಕಣಕ್ಕಿಳಿದ ನಂತರ ಕಾಣ ಸಿಗಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಕೊಹ್ಲಿ ನಾಯಕನಾಗಿದ್ದಾಗ ಮೈದಾನದಲ್ಲಿ ಮಾತ್ರವಲ್ಲದೇ ಪೆವಿಲಿಯನ್ ಒಳಗೂ ಕೂಡ ಉತ್ಸುಕರಾಗಿ ಇತರೆ ಆಟಗಾರರನ್ನು ಹುರಿದುಂಬಿಸುತ್ತಿದ್ದರು ಆದರೆ ಈ ಪಂದ್ಯದಲ್ಲಿ ಅದು ಕಾಣ ಸಿಗಲಿಲ್ಲ ಎಂದು ದನೀಶ್ ಕನೇರಿಯಾ ಹೇಳಿದ್ದಾರೆ.

ರಾಹುಲ್ ನಾಯಕತ್ವದಲ್ಲಿ ಎನರ್ಜಿ ಇಲ್ಲ
ಇನ್ನು ಕೆಎಲ್ ರಾಹುಲ್ ನಾಯಕತ್ವದ ಕುರಿತು ಮಾತನಾಡಿರುವ ದನೀಶ್ ಕನೇರಿಯಾ ರಾಹುಲ್ ನಾಯಕತ್ವದಲ್ಲಿ ಸ್ಪಾರ್ಕ್ ಇಲ್ಲ ಎಂದಿದ್ದಾರೆ. ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲನ್ನು ಕಂಡಿರುವ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಗೆದ್ದು ಕಮ್ ಬ್ಯಾಕ್ ಮಾಡಬೇಕಿದೆ. ಅದರೆ ಕೆಎಲ್ ರಾಹುಲ್ ಇದಕ್ಕೆ ಬೇಕಾದಂತಹ ನಾಯಕತ್ವವನ್ನು ನಿರ್ವಹಿಸುತ್ತಿಲ್ಲ ಎಂದು ದನಿಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications