
ಸದ್ಯ ದಕ್ಷಿಣ ಆಫ್ರಿಕಾ ನೆಲದಲ್ಲಿ ಕೊರೋನಾ ಸೋಂಕಿತರು ಮತ್ತು ಒಮೈಕ್ರಾನ್ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿದ್ದು ದೇಶದಲ್ಲಿ ಬಿಗುವಿನ ವಾತಾವರಣವಿದೆ. ಹೀಗಿದ್ದರೂ ಸಹ ಈ ಹಿಂದೆ ನಿಗದಿಯಾಗಿದ್ದ ಟೆಸ್ಟ್ ಸರಣಿ ರದ್ದಾಗಬಾರದು ಎಂಬ ಉದ್ದೇಶದಿಂದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಆಟಗಾರರು ಬಯೋ ಬಬಲ್ ವ್ಯವಸ್ಥೆಯೊಂದಿಗೆ ಹರಿಣಗಳ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಗಳಲ್ಲಿ ಸೆಣಸಾಟ ನಡೆಸುತ್ತಿದ್ದಾರೆ.
ಹೀಗೆ ಸಾಕಷ್ಟು ಸವಾಲುಗಳೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಈಗಾಗಲೇ ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಚೊಚ್ಚಲ ಪಂದ್ಯದಲ್ಲಿ ಕಣಕ್ಕಿಳಿದಿದೆ. ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯ ಸೆಂಚೂರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಡಿಸೆಂಬರ್ 26ರಿಂದ ಆರಂಭವಾಗಿದ್ದು ಮೊದಲನೇ ದಿನ ಯಾವುದೇ ಅಡತಡೆ ಇಲ್ಲದೇ ಪಂದ್ಯ ಸಂಪೂರ್ಣವಾಗಿ ನಡೆಯಿತು. ಆದರೆ ದ್ವಿತೀಯ ದಿನದಾಟ ಆರಂಭಕ್ಕೂ ಮುನ್ನ ವರುಣನ ಆಗಮನವಾದ್ದರಿಂದ ಎರಡನೇ ದಿನದಾಟ ಆರಂಭವಾಗದೇ ರದ್ದಾಯಿತು.
ಆದರೆ ಮೂರನೇ ದಿನ ಯಾವುದೇ ಮಳೆಯ ಅಡ್ಡಿ ಇಲ್ಲದೇ ಪಂದ್ಯ ಆರಂಭವಾಗಿದ್ದು ಭಾರತ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಪಂದ್ಯದ ನಡುವೆಯೇ ಹೊರ ನಡೆದಿದ್ದಾರೆ. ಹೌದು, 11ನೇ ಓವರ್ ಬೌಲಿಂಗ್ ಮಾಡುತ್ತಿದ್ದ ಜಸ್ಪ್ರೀತ್ ಬುಮ್ರಾ ಚೆಂಡನ್ನು ಎಸೆಯುವ ವೇಳೆ ಕಾಲಿನ ಗಾಯಕ್ಕೆ ಒಳಗಾಗಿದ್ದಾರೆ. ಹೀಗೆ ಗಾಯಕ್ಕೊಳಗಾದ ಜಸ್ಪ್ರೀತ್ ಬುಮ್ರಾ ಅವರಿಗೆ ಟೀಮ್ ಇಂಡಿಯಾದ ಫಿಸಿಯೋ ತಕ್ಷಣವೇ ಚಿಕಿತ್ಸೆ ನೀಡಿದ್ದು ಜಸ್ಪ್ರೀತ್ ಬುಮ್ರಾ ಯಾರ ಸಹಾಯವೂ ಇಲ್ಲದೇ ಡಗ್ ಔಟ್ ಕಡೆ ಸ್ವತಃ ನಡೆದುಕೊಂಡು ಹೋದದ್ದು ನೆಮ್ಮದಿಯ ವಿಚಾರ ಎನ್ನಬಹುದು. ಹಾಗೂ ಹೊರನೆಡೆದ ಜಸ್ ಪ್ರೀತ್ ಬೂಮ್ರಾ ಡಗ್ ಔಟ್ನಲ್ಲಿ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಕುಳಿತಿದ್ದು ಯಾವುದೇ ರೀತಿಯ ದೊಡ್ಡ ಸಮಸ್ಯೆಯಾಗಿಲ್ಲ ಎಂಬುದನ್ನು ಹೇಳುತ್ತಿದೆ.
ಇದನ್ನು ಕಂಡ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಜಸ್ಪ್ರೀತ್ ಬುಮ್ರಾ ಅವರಿಗೇನಾದರೂ ದೊಡ್ಡ ಮಟ್ಟದಲ್ಲಿ ಗಾಯ ಆಗಿದ್ದಿದ್ದರೆ ಚಿಕಿತ್ಸೆಗೆಂದು ಕರೆದೊಯ್ಯುತ್ತಿದ್ದರು, ಈ ರೀತಿ ಡಗ್ ಔಟ್ನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದಾರೆ ಎಂದರೆ ಆದಷ್ಟು ಬೇಗ ಮೈದಾನಕ್ಕಿಳಿಯುವುದು ಖಚಿತ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಮೊದಲನೇ ಇನ್ನಿಂಗ್ಸ್ನಲ್ಲಿ ತನ್ನ ಪಾಲಿನ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಇದೇ ಜಸ್ಪ್ರೀತ್ ಬುಮ್ರಾ ಆರಂಭದಲ್ಲಿಯೇ ಹಿನ್ನಡೆಯಾಗುವಂತೆ ಮಾಡಿದರು. ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಆಟಗಾರ ಹಾಗೂ ನಾಯಕ ಡೀನ್ ಎಲ್ಗರ್ ಅವರ ವಿಕೆಟ್ನ್ನು ಜಸ್ಪ್ರೀತ್ ಬುಮ್ರಾ ಪಂದ್ಯದ ಮೊದಲನೇ ಓವರ್ನಲ್ಲಿಯೇ ಪಡೆದುಕೊಂಡರು. ಈ ಮೂಲಕ ಜಸ್ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾದ ಬಲಿಷ್ಠ ಆಟಗಾರರನ್ನು ಬೇಗ ಔಟ್ ಮಾಡಿ ಒತ್ತಡವನ್ನು ಹೇರಿದರು.
ಇನ್ನು ಮೊದಲನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿ ಉತ್ತಮ ಹಂತದಲ್ಲಿದ್ದ ಟೀಮ್ ಇಂಡಿಯಾ ಮೂರನೇ ದಿನದಾಟ ಆರಂಭವಾದ ಬೆನ್ನಲ್ಲೇ ತನ್ನ ಉಳಿದ ವಿಕೆಟ್ಗಳನ್ನು ಸಾಲಾಗಿ ಕಳೆದುಕೊಂಡು 327 ರನ್ಗಳಿಗೆ ಆಲ್ ಔಟ್ ಆಗಿದೆ. ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಬೌಲರ್ ಲುಂಗಿ ಎನ್ ಗಿಡಿ 6 ವಿಕೆಟ್ ಪಡೆಯುವುದರ ಮೂಲಕ ಮಿಂಚಿದರು.