ಧರ್ಮಶಾಲ, ಡಿಸೆಂಬರ್ 10: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದರೂ ಕಳಪೆ ಬ್ಯಾಟಿಂಗ್ ಪ್ರದರ್ಶನ ಮಾಡಿ, 112 ಸ್ಕೋರಿಗೆ ಆಲೌಟ್ ಆಯಿತು, ಅಲ್ಪಮೊತ್ತವನ್ನು ಬೆನ್ನು ಹತ್ತಿದ ಶ್ರೀಲಂಕಾ ತಂಡ 3 ವಿಕೆಟ್ ಕಳೆದುಕೊಂಡು 20.4 ಓವರ್ ಗಳಲ್ಲಿ ಗುರಿ ಮುಟ್ಟಿತು. ಈ ಗೆಲುವಿನ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ 1-0 ಮುನ್ನಡೆ ಪಡೆದುಕೊಂಡಿದೆ.
ಶ್ರೀಲಂಕಾ ಪರ ಉಪುಲ್ ತರಂಗಾ 49ರನ್, ಏಂಜೆಲೋ ಮ್ಯಾಥ್ಯೂಸ್ ಅಜೇಯ 25, ನಿರೋಷನ್ ಡಿಕ್ವೆಲ್ಲಾ ಅಜೇಯ 26ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು.
10 ರನ್ ಸ್ಕೋರ್ ಮಾಡುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡ ಭಾರತ ಮತ್ತೆ ಚೇತರಿಕೆ ಕಾಣಲಿಲ್ಲ. ಎಂಎಸ್ ಧೋನಿ ಅವರು 87 ಎಸೆತಗಳಲ್ಲಿ 65 ರನ್ (10 ಬೌಂಡರಿ, 2 ಸಿಕ್ಸರ್), ಕುಲದೀಪ್ ಯಾದವ್ 19ರನ್ (4 ಬೌಂಡರಿ) ಹಾಗೂ ಹಾರ್ದಿಕ್ ಪಾಂಡ್ಯ 10ರನ್ ಗಳಿಸಿದ್ದು ಬಿಟ್ಟರೆ, ಮುಂತಾದವರು ಎರಡಂಕಿ ದಾಟಲಿಲ್ಲ. 38.2 ಓವರ್ ಗಳಲ್ಲಿ ಭಾರತ 112 ಸ್ಕೋರಿಗೆ ಸರ್ವ ಪತನ ಕಂಡಿತು. ಶ್ರೀಲಂಕಾ ಪರ ಸುರಂಗ ಲಕ್ಮಲ್ 13ರನ್ನಿತ್ತು 4 ವಿಕೆಟ್ ಗಳಿಸಿದರು.
ಟಾಸ್ ವರದಿ: ಭಾನುವಾರ(ಡಿಸೆಂಬರ್ 10) ಬೆಳಗ್ಗೆ ಶ್ರೀಲಂಕಾ ತಂಡದ ನಾಯಕ ಥಿಸಾರಾ ಪೆರೆರಾ ಅವರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು.

ತಂಡದ ಬಗ್ಗೆ: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮ ಅವರು ಏಕದಿನ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.ಯುವ ಆಟಗಾರ ಶ್ರೇಯಸ್ ಅಯ್ಯರ್ ಅವರು ತಮ್ಮ ಚೊಚ್ಚಲ ಪಂದ್ಯವನ್ನಾಡುತ್ತಿದ್ದಾರೆ. ಶ್ರೇಯಸ್ ಅವರಿಗೆ ಕ್ಯಾಪ್ ನೀಡಿ ಮಹೇಂದ್ರ ಸಿಂಗ್ ಧೋನಿ ಅವರು ತಂಡಕ್ಕೆ ಸ್ವಾಗತಿಸಿದರು.
ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಇದು ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಭಾರತ ಇಲ್ಲಿ ಮೂರು ಪಂದ್ಯ ಗೆದ್ದು, ಒಂದರಲ್ಲಿ ಸೋಲು ಕಂಡಿದೆ.

ಆಡುವ ಹನ್ನೊಂದು:
ಭಾರತ: ಶಿಖರ್ ಧವನ್, ರೋಹಿತ್ ಶರ್ಮ(ನಾಯಕ), ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಮನೀಶ್ ಪಾಂಡೆ, ಎಂಎಸ್ ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್ ಪ್ರೀತ್ ಬೂಮ್ರಾ.
ಶ್ರೀಲಂಕಾ: ಉಪುಲ್ ತರಂಗಾ, ದನುಷ್ಕಾ ಗುಣತಿಲಕ, ಲಹಿರು ತಿರಿಮನ್ನೆ, ಏಂಜೆಲೋ ಮ್ಯಾಥ್ಯೂಸ್, ಅಸೆಲಾ ಗುಣರತ್ನೆ, ನಿರೋಷನ್ ಡಿಕ್ ವೆಲ್ಲ(ವಿಕೆಟ್ ಕೀಪರ್), ಥಿಸರಾ ಪೆರೆರಾ(ನಾಯಕ), ಸಚಿತ್ ಪಥಿರಣಾ,ಸುರಂಗಾ ಲಕ್ಮಲ್, ಅಕಿಲ ಧನಂಜಯ, ನುವಾನ್ ಪ್ರದೀಪ್.(ಒನ್ಇಂಡಿಯಾ ಸುದ್ದಿ)