ಕಟಕ್, ಡಿಸೆಂಬರ್ 20: ಶ್ರೀಲಂಕಾ ತಂಡದ ವಿರುದ್ಧ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಸರಣಿ ಗೆದ್ದುಕೊಂಡಿರುವ ಭಾರತ ತಂಡ ಈಗ ಟಿ20ಐ ಸರಣಿ ಮೇಲೆ ಕಣ್ಣಿಟ್ಟಿದೆ. ಶ್ರೀಲಂಕಾಕ್ಕೆ ಗೆಲ್ಲಲು 181ರನ್ ಟಾರ್ಗೆಟ್ ನೀಡಲಾಗಿತ್ತು, ಆದರೆ, 16 ಓವರ್ ಗಳಲ್ಲಿ 87 ಸ್ಕೋರಿಗೆ ಆಲೌಟ್ ಆಗಿ ಸುಲಭವಾಗಿ ಶರಣಾಗಿದೆ. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಟಿ20ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ.
181ರನ್ ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ ಆರಂಭದಿಂದಲೇ ಅಳುಕಿನಿಂದ ಬ್ಯಾಟಿಂಗ್ ಮಾಡಿತು. ಲೆಗ್ ಸ್ಪಿನ್ನರ್ ಯಜುವೆಂದ್ರ ಚಾಹಲ್ 4, ಹಾರ್ದಿಕ್ ಪಾಂಡ್ಯ 3 ಹಾಗೂ ಕುಲದೀಪ್ ಯಾದವ್ 2 ವಿಕೆಟ್ ಗಳಿಸಿದರು.
ಇಲ್ಲಿನ ಬಾರಬತಿ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ರೋಹಿತ್ ಪಡೆ ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭಿಕ ಆಟಗಾರ ಕೆಎಲ್ ರಾಹುಲ್ ಅವರು ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿದರು.
ರೋಹಿತ್ ಶರ್ಮ 13 ಎಸೆತಗಳಲ್ಲಿ 17ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ ಅವರು 48 ಎಸೆತಗಳಲ್ಲಿ 61 (7 ಬೌಂಡರಿ, 1 ಸಿಕ್ಸರ್) ರನ್ ಗಳಿಸಿ ಥಿಸೆರಾ ಪೆರೆರಾಗೆ ಬೋಲ್ಡ್ ಆದರು. ಶ್ರೇಯಸ್ ಅಯ್ಯರ್ ಅವರು 20 ಎಸೆತಗಳಲ್ಲಿ 24ರನ್ ಗಳಿಸಿದರು. ಧೋನಿ ಅಜೇಯ 39 (22 ಎಸೆತ, 1 ಸಿಕ್ಸರ್), ಮನೀಶ್ ಪಾಂಡೆ 32 ರನ್ (18 ಎಸೆತ, 2 ಬೌಂಡರಿ, 2 ಸಿಕ್ಸರ್) ಗಳಿಸಿ 20 ಓವರ್ ಗಳಲ್ಲಿ 180/3 ಸ್ಕೋರ್ ಮಾಡಿದೆ.
ಭಾರತ ತಂಡದಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್ ಹಾಗೂ ಮನೀಷ್ ಪಾಂಡೆ ಸ್ಥಾನ ಪಡೆದುಕೊಂಡಿದ್ದು, ಆರಂಭಿಕ ಬ್ಯಾಟ್ಸ್ಮನ್ ಆಗಿ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿದರು.
