
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ 16 ರನ್ಗಳಿಂದ ಸೋಲನುಭವಿಸಿದೆ. ಎರಡನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಶ್ರೀಲಂಕಾ ಸರಣಿಯನ್ನು 1-1 ರಲ್ಲಿ ಸಮಬಲವಾಗಿಸಿಕೊಂಡಿದೆ, ಸರಣಿಯ ನಿರ್ಣಾಯಕ ಪಂದ್ಯ ರಾಜ್ಕೋಟ್ನಲ್ಲಿ ಜನವರಿ 7 ರಂದು ನಡೆಯಲಿದೆ.
ಎರಡನೇ ಪಂದ್ಯದಲ್ಲಿ ಭಾರತದ ಬೌಲಿಂಗ್ ಸಾಕಷ್ಟು ಕಳಪೆಯಾಗಿತ್ತು. ಅದರಲ್ಲೂ ಭಾರತದ ವೇಗಿಗಳು ಹೆಚ್ಚಿನ ರನ್ ಬಿಟ್ಟುಕೊಟ್ಟರು, ಮಾತ್ರವಲ್ಲದೆ ಒಟ್ಟು 7 ನೋಬಾಲ್ ಎಸೆದರು. ಅರ್ಷದೀಪ್ ಸಿಂಗ್ ಒಬ್ಬರೇ 5 ನೋ ಬಾಲ್ ಎಸೆಯುವ ಮೂಲಕ ಟಿ20 ಪಂದ್ಯದಲ್ಲಿ ಹೆಚ್ಚು ನೋಬಾಲ್ ಎಸೆದ ಆಟಗಾರ ಎನ್ನುವ ಕೆಟ್ಟ ದಾಖಲೆ ನಿರ್ಮಿಸಿದರು.
ಮಾಜಿ ಕ್ರಿಕೆಟಿಗ ಸಬಾ ಕರೀಂ ಅರ್ಷದೀಪ್ ಸಿಂಗ್ರ ನೋ ಬಾಲ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ತಂಡದ ಸೋಲಿಗೆ ಈ ನೋಬಾಲ್ಗಳೇ ಪ್ರಮುಖ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕೊನೆಯ ಮೂರು ಓವರ್ಗಳಲ್ಲಿ ಭಾರತೀಯ ಬೌಲರ್ ಗಳು ಹೆಚ್ಚು ರನ್ ಬಿಟ್ಟುಕೊಟ್ಟರು, ಇದರಿಂದ ಶ್ರೀಲಂಕಾ 200ಕ್ಕಿಂತ ಹೆಚ್ಚು ರನ್ ಗಳಿಸಿತು ಎಂದು ಅವರು ಹೇಳಿದರು.

ಬೌಲಿಂಗ್ ಉತ್ತಮವಾಗಿರಬೇಕಿತ್ತು
ಅಂತಿಮ ಓವರ್ ಗಳಲ್ಲಿ ಭಾರತೀಯ ಬೌಲರ್ ಗಳು ಹೆಚ್ಚಿನ ರನ್ ಬಿಟ್ಟುಕೊಟ್ಟರು. ಅತಿ ಹೆಚ್ಚು ನೋ ಬಾಲ್ ಮಾಡಿದ್ದನ್ನು ಯಾರೂ ಒಪ್ಪಲಾಗದು. ಟಿ20 ಪಂದ್ಯಗಳಲ್ಲಿ ನೋ ಬಾಲ್ ಮಾಡುವುದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ವಿಶೇಷವಾಗಿ ಫ್ರೀ ಹಿಟ್ಗಳು ಭಾರತದ ಸೋಲಿಗೆ ಕಾರಣವಾದವು ಎಂದು ಅವರು ಹೇಳಿದರು.
ಅರ್ಷದೀಪ್ 20-25 ರನ್ಗಳನ್ನು ಹೆಚ್ಚುವರಿಯಾಗಿ ಬಿಟ್ಟುಕೊಟ್ಟರು. ಆ ಹೆಚ್ಚುವರಿ ರನ್ ಬಿಟ್ಟುಕೊಡದಿದ್ದರೆ, ಭಾರತಕ್ಕೆ ಗೆಲ್ಲುವ ಅವಕಾಶ ಇತ್ತು ಎಂದು ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ.
ಒಂದು ತಿಂಗಳ ವಿಶ್ರಾಂತಿ ಪಡೆದ ನಂತರ ಆತ ಬೌಲಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾನೆ. ಆತ ಸಾಮಾನ್ಯವಾಗಿ ನೋ ಬಾಲ್ ಎಸೆಯುವುದಿಲ್ಲ, ತಕ್ಷಣವೇ ಆತ ತನ್ನ ತಪ್ಪು ತಿದ್ದಿಕೊಳ್ಳಲು ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಭಾರತದ ಹೋರಾಟಕ್ಕೆ ಶ್ಲಾಘನೆ
ಪಂದ್ಯ ಸೋತರು ಭಾರತದ ಹೋರಾಟದ ಮನೋಭಾವಕ್ಕೆ ಸಬಾ ಕರೀಮ್ ಶ್ಲಾಘನೆ ವ್ಯಕ್ತಪಡಿಸಿದರು. ಆರಂಭಿಕ ಆಟಗಾರರು ಬೇಗನೇ ಔಟಾದ ನಂತರ, ಪಾಂಡ್ಯ, ಹೂಡಾ ಔಟಾದರು. ಆದರೂ ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ಶಿವಂ ಮಾವಿ ಅತ್ಯುತ್ತಮ ಇನ್ನಿಂಗ್ಸ್ ಆಡಿದರು.
ಕೊನೆ ಓವರ್ ವರೆಗೂ ಪಂದ್ಯವನ್ನು ತೆಗೆದುಕೊಂಡು ಹೋಗಿದ್ದು ಸಾಧನೆ. ಈ ಹೋರಾಟದ ಮನೋಭಾವ ಬಹಳ ಮುಖ್ಯ, ಒಬ್ಬರು ವಿಫಲವಾದಾಗ ಮತ್ತೊಬ್ಬರು ರನ್ ಗಳಿಸಬೇಕು ಎಂದು ಸಬಾ ಕರೀಮ್ ಹೇಳಿದರು.