
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ಬೌಲಿಂಗ್ ವಿಭಾಗ ನೀರಸ ಪ್ರದರ್ಶನ ನೀಡಿದೆ. ಅಕ್ಷರ್ ಪಟೇಲ್ ಹಾಗೂ ಚಾಹಲ್ ಮಾತ್ರವೇ ರನ್ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಿದರು. ಯುವ ವೇಗಿ ಉಮ್ರಾನ್ ಮಲಿಕ್ ಮೂರು ವಿಕೆಟ್ ಪಡೆದು ಮಿಂಚಿದರಾದರೂ 4 ಓವರ್ಗಳಲ್ಲಿ ಬರೊಬ್ಬರಿ 48 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು.
ಇನ್ನು ಮೊದಲ ಪಂದ್ಯದಲ್ಲಿ ಗಾಯದಿಂದ ಹೊರಗುಳಿದಿದ್ದ ಅರ್ಶ್ದೀಪ್ ಸಿಂಗ್ ಈ ಪಂದ್ಯದಲ್ಲಿ ಭಾರೀ ನಿರಾಸೆ ಅನುಭವಿಸಿದ್ದಾರೆ. ಕೇವಲ 2 ಓವರ್ಗಳ ಬೌಲಿಂಗ್ ದಾಳಿ ನಡೆಸಿದ ಅರ್ಶ್ದೀಪ್ ಬರೊಬ್ಬರಿ 37 ರನ್ ಬಿಟ್ಟುಕೊಟ್ಟರು. 18.50 ಎಕಾನಮಿಯಲ್ಲಿ ಬೌಲಿಂಗ್ ನಡೆಸಿ ಅರ್ಶ್ದೀಪ್ ಹಿನ್ನಡೆ ಅನುಭವಿಸಿದರು. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ವೇಗಿ ಬೇಡದ ದಾಖಲೆಯೊಂದನ್ನು ಕೂಡ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ 2ನೇ ಪಂದ್ಯದಲ್ಲಿ ಅರ್ಶ್ದೀಪ್ ಸಿಂಗ್ ಕೆಟ್ಟ ಲಯದಲ್ಲಿರುವುದು ಸ್ಪಷ್ಟವಾಗಿತ್ತು. ನಾಯಕ ಹಾರ್ದಿಕ್ ಪಾಂಡ್ಯ ಜೊತೆಗೆ ಹಸ ಚೆಂಡು ಹಂಚಿಕೊಂಡ ಅರ್ಶ್ದೀಪ್ ಸಿಂಗ್ ಮೊದಲ ಓವರ್ನಲ್ಲಿಯೇ ಆಘಾತ ನೀಡಿದರು. ಈ ಓವರ್ನಲ್ಲಿ ಸತತ ಮೂರು ನೋ ಬಾಲ್ ಎಸೆದರು. ಈ ಓವರ್ನಲ್ಲಿ ಶ್ರೀಲಂಕಾ ತಂಡ 19 ರನ್ ಕಲೆಹಾಕಿತ್ತು. ಈ ಓವರ್ನ ಬಳಿಕ ಶ್ರೀಲಂಕಾದ ರನ್ ಗತಿ ಹೆಚ್ಚಾಗುತ್ತಲೇ ಸಾಗಿತು.
ಬಳಿಕ 19ನೇ ಓವರ್ನಲ್ಲಿ ಮತ್ತೊಮ್ಮೆ ಬೌಲಿಂಗ್ ದಾಳಿಗಿಳಿದ ಅರ್ಶ್ದೀಪ್ ಈ ಓವರ್ನಲ್ಲಿಯೂ ಯಶಸ್ಸು ಸಾಧಿಸಲು ವಿಫಲವಾದರು. ಈ ಓವರ್ನಲ್ಲಿಯೂ ಎರಡು ನೋ ಬಾಲ್ ಎಸೆದು ಭಾರತ ತಂಡಕ್ಕೆ ಆಘಾತ ನೀಡಿದರು. ಈ ಮೂಲಕ ಈ ಪಂದ್ಯದಲ್ಲಿ ಒಟ್ಟು ಐದು ನೋಬಾಲ್ ಎಸೆದ ಅರ್ಶ್ದೀಪ್ ಸಿಂಗ್ ಟಿ20 ಸರಣಿಯಲ್ಲಿ ಭಾರತೀಯ ಆಟಗಾರರ ಪೈಕಿ ಅತೀ ಹೆಚ್ಚು ನೋ ಬಾಲ್ ಎಸೆದ ಆಟಗಾರ ಎನಿಸಿಕೊಂಡಿದ್ದಾರೆ.
ಅರ್ಶ್ದೀಪ್ ಸಿಂಗ್ ಸರಣಿಯ ಮೊದಲ ಪಂದ್ಯದಲ್ಲಿ ಗಾಯದ ಕಾರಣದಿಂದಾಗಿ ಹೊರಗುಳಿದಿದ್ದರು. ಚೇತರಿಸಿಕೊಂಡು ಎರಡನೇ ಪಂದ್ಯದಲಿ ಹರ್ಷಲ್ ಪಟೇಲ್ ಬದಲಿಗೆ ಕಣಕ್ಕಿಳಿದಿದ್ದಾರೆ.
ಭಾರತ ಆಡುವ ಬಳಗ: ಇಶಾನ್ ಕಿಶನ್(ವಿಕೆಟ್ ಕೀಪರ್), ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ರಾಹುಲ್ ತ್ರಿಪಾಠಿ, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ಅಕ್ಸರ್ ಪಟೇಲ್, ಅರ್ಷ್ದೀಪ್ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್
ಬೆಂಚ್: ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಮುಖೇಶ್ ಕುಮಾರ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ
ಬೆಂಚ್: ಲಹಿರು ಕುಮಾರ, ಅವಿಷ್ಕ ಫೆರ್ನಾಂಡೋ, ಅಶೇನ್ ಬಂಡಾರ, ಪ್ರಮೋದ್ ಮದುಶನ್, ದುನಿತ್ ವೆಳ್ಳಾಲಗೆ, ನುವಾನ್ ತುಷಾರ, ಸದೀರ ಸಮರವಿಕ್ರಮ