Asia Cup 2023 Final: ಭಾರತ ತಂಡದಲ್ಲಿ ಭಾರೀ ಬದಲಾವಣೆ; ಉಭಯ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಭಾನುವಾರ, ಸೆಪ್ಟೆಂಬರ್ 17ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ 2023ರ ಏಷ್ಯಾ ಕಪ್ ಪಂದ್ಯಾವಳಿಯ ಹೊಸ ಏಷ್ಯನ್ ಚಾಂಪಿಯನ್ ಯಾರು ಎಂಬುದನ್ನು ನಿರ್ಧರಿಸುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.
ಸೂಪರ್ 4ನಲ್ಲಿ ಶ್ರೀಲಂಕಾ ತಂಡವನ್ನು 41 ರನ್ಗಳಿಂದ ಸೋಲಿಸಿದ ಬಳಿಕ ಭಾರತ ತಂಡ ಫೈನಲ್ನಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡಿತ್ತು. ಈ ಮೂಲಕ ಶ್ರೀಲಂಕಾದ ಸತತ 13 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತ್ತು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರ ಮೊದಲ ವಿಕೆಟ್ಗೆ 80 ರನ್ಗಳ ಜೊತೆಯಾಟ ಮತ್ತು ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೆಜಾ ಪಡೆದ ನಿರ್ಣಾಯಕ ವಿಕೆಟ್ಗಳು ಈ ಗೆಲುವಿಗೆ ಕಾರಣವಾಗಿತ್ತು.

ಶ್ರೀಲಂಕಾ ಆ ಪಂದ್ಯದಲ್ಲಿ ತಮ್ಮ ಸ್ಟಾರ್ ಆಟಗಾರನನ್ನು ಕಂಡುಕೊಂಡಿತು. ದುನಿತ್ ವೆಲ್ಲಲಾಗೆ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾ ತಂಡಕ್ಕೆ ಗೆಲುವಿನ ಭರವಸೆಯನ್ನು ನೀಡಿದ್ದರು.
ಇನ್ನು ಶ್ರೀಲಂಕಾ ತನ್ನ ಅಂತಿಮ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಎರಡು ವಿಕೆಟ್ಗಳ ರೋಚಕ ಗೆಲುವಿನೊಂದಿಗೆ ಫೈನಲ್ಗೆ ಬರುತ್ತಿದ್ದರೆ, ಭಾರತ ತಂಡವು ಶುಕ್ರವಾರ ಬಾಂಗ್ಲಾದೇಶ ವಿರುದ್ಧ 6 ರನ್ಗಳ ಹೀನಾಯ ಸೋಲು ಅನುಭವಿಸಿತು.
ಭಾರತವು 8ನೇ ಏಷ್ಯಾ ಕಪ್ ಟ್ರೋಫಿಯನ್ನು ಎದುರು ನೋಡುತ್ತಿದ್ದ, ಶ್ರೀಲಂಕಾ ತಮ್ಮ 7ನೇ ಟ್ರೋಫಯನ್ನು ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಪರಸ್ಪರ ಎದುರಾಳಿಗಳು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಗುರಿಯನ್ನು ಹೊಂದಿವೆ.
ಹೀಗಾಗಿ ಪಂದ್ಯವು ರೋಚಕತೆಯಿಂದ ಕೊನೆಗೊಳ್ಳುವ ಭರವಸೆ ನೀಡುತ್ತದೆ. ಎರಡೂ ತಂಡಗಳಲ್ಲಿ ಕೆಲವು ಪ್ರಮುಖ ಗಾಯದ ಸಮಸ್ಯೆಗಳಿದ್ದು, ಆಡುವ 11ರ ಬಳಗವನ್ನು ಹೇಗೆ ಆಯ್ಕೆ ಮಾಡುತ್ತವೆ ಎಂಬ ಕುತೂಹಲ ಇದೆ.
ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಂತಹ ಸ್ಟಾರ್ ಆಟಗಾರರಿಗೆ ಬಾಂಗ್ಲಾದೇಶದ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಫೈನಲ್ ಹಣಾಹಣಿಗೆ ಮರಳಲಿದ್ದಾರೆ.
ಭಾರತದ ಆರಂಭಿಕ ಜೋಡಿಯಾದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದರೆ, ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕ ಮತ್ತು ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಾಗಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಶ್ರೀಲಂಕಾಕ್ಕೆ ತೆರಳಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ.
ವಾಷಿಂಗ್ಟನ್ ಸುಂದರ್ ಅವರನ್ನು ಭಾರತದ ಆಡುವ 11ರ ಬಳಗಕ್ಕೆ ಆಯ್ಕೆ ಮಾಡಲಾಗುತ್ತದೆಯೇ ಅಥವಾ ಶಾರ್ದೂಲ್ ಠಾಕೂರ್ ಅವರೊಂದಿಗೆ ಹೋಗಲು ನಿರ್ಧರಿಸುತ್ತದೆಯೇ ಎಂದು ಕಾದು ನೋಡಬೇಕಿದೆ.
ಇನ್ನು ಶ್ರೀಲಂಕಾ ತಂಡಕ್ಕೆ ಸಂಬಂಧಿಸಿದಂತೆ, ಅವರು ಅನುಭವಿಸಿದ ದೊಡ್ಡ ಆಘಾತವೆಂದರೆ ಫೈನಲ್ ಪಂದ್ಯಕ್ಕೂ ಮುನ್ನ ಸ್ಟಾರ್ ಸ್ಪಿನ್ನರ್ ಮಹೇಶ್ ತೀಕ್ಷಣ ಅವರನ್ನು ಕಳೆದುಕೊಂಡಿರುವುದು. ಅವರ ಬದಲಾಗಿ ಸಹನ್ ಅರಾಚ್ಚಿಗೆ ಆಯ್ಕೆ ಮಾಡಲಾಗಿದೆ.
ಹೊಸ ಏಷ್ಯನ್ ಚಾಂಪಿಯನ್ಸ್ ಕಿರೀಟವನ್ನು ಅಲಂಕರಿಸುವ ಫೈನಲ್ ಪಂದ್ಯಕ್ಕೆ ದುಸಾನ್ ಹೇಮಂತ ಅವರನ್ನು ಆಡಿಸಬಹುದೆಂದು ನಿರೀಕ್ಷಿಸಲಾಗಿದೆ.
ಭಾರತ ಮತ್ತು ಶ್ರೀಲಂಕಾ ತಂಡಗಳ ಸಂಭಾವ್ಯ ಆಡುವ 11ರ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್/ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಶ್ರೀಲಂಕಾ: ಪಾಥುಮ್ ನಿಸ್ಸಾಂಕ, ಕುಸಾಲ್ ಪೆರೆರಾ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮತೀಶ ಪತಿರಾಣ, ಕಸುನ್ ರಜಿತ, ದುಸನ್ ಹೇಮಂತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications