ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅಜೇಯ ಅಭಿಯಾನ ಮುಂದುವರಿದಿದೆ. ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಸತತ 6ನೇ ಗೆಲುವು ಸಾಧಿಸಿದೆ. ಟೀಮ್ ಇಂಡಿಯಾಗೆ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಎದುರಾಳಿಯಾಗಿರಲಿದ್ದು ಈ ಪಂದ್ಯಕ್ಕೆ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಮ್ಬ್ಯಾಕ್ ಮಾಡುವ ಸಾಧ್ಯತೆಯಿದೆ.
ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಅದಾದ ಬಳಿಕ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಸಂಪೂರ್ಣವಾಗಿ ಅಲಭ್ತವಾಗಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಹಾರ್ದಿಕ್ ಅಲಭ್ಯವಿರಲಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿತ್ತು. ಆದರೆ ಈಗ ದೊರೆತಿರುವ ಮಾಹಿತಿಯ ಪ್ರಕಾರ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಹಾರ್ದಿಕ್ ಟೀಮ್ ಇಂಡಿಯಾ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ತಂಡಗಳು ನವೆಂಬರ್ 2ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಕಳೆದ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಭಾರತ ತಂಡದ ಜೊತೆಗೆ ಪ್ರಯಾಣಿಸಿರಲಿಲ್ಲ. ಬೆಂಗಳೂರಿನ ಎನ್ಸಿಎನಲ್ಲಿದ್ದ ಹಾರ್ದಿಕ್ ರಿಹ್ಯಾಪ್ನಲ್ಲಿ ಭಾಗಿಯಾಗಿದ್ದರು.
ಲಂಕಾ ವಿರುದ್ಧ ಆಡುವ ಬಗ್ಗೆ ಖಚಿತತೆಯಿಲ್ಲ
ಎನ್ಸಿಎನಲ್ಲಿರುವ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡವನ್ನು ಸೇರಿಕೊಂಡರೂ ಲಂಕಾ ವಿರುದ್ಧದ ಪಂದ್ಯಕ್ಕೆ ಆಡಲು ಲಭ್ತವಿರಲಿದ್ದಾರಾ ಎನ್ನುವುದು ಮಾತ್ರ ಖಚಿತವಾಗಿಲ್ಲ. ಈ ಬಗ್ಗೆ ಮೂಲಗಳ ಮಾಹಿತಿಯನ್ನು ಆಧರಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. "ಪಾಂಡ್ಯ ಸದ್ಯ ಎನ್ಸಿಎನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ಅವರು ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸದ್ಯಕ್ಕೆ ಅವರು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆಯೇ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅವರು ತಂಡಕ್ಕೆ ಸೇರಿಕೊಳ್ಳಲು ಸಜ್ಜಾಗಿದ್ದಾರೆ" ಎಂದಿದ್ದಾರೆ.
ಹಾರ್ದಿಕ್ ಸೇರ್ಪಡೆಗೆ ಟೀಮ್ ಇಂಡಿಯಾ ಆತುರ?
ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾಗೆ ಮರಳುತ್ತಿರುವುದು ನಿಸ್ಸಂಶಯವಾಗಿ ಸಂತಸದ ಸುದ್ದಿ. ಸತತ ಆರು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾಗೆ ಹಾರ್ದಿಕ್ ಕಮ್ಬ್ಯಾಕ್ ತಂಡದಲ್ಲಿ ಮತ್ತಷ್ಟು ಸಮತೋಲವನ್ನುಂಟು ಮಾಡಲಿದೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ವೇಳೆ ಗಾಯಕ್ಕೆ ತುತ್ತಾದ ಅವರು ಬಳಿಕ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡಗ ವಿರುದ್ಧದ ಪಂದ್ಯದಿಂದ ಹೊರಗುಳಿಯಬೇಕಾಯಿತು. ಹೀಗಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಬೇಕಾಯಿತು. ಬ್ಯಾಟಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ ಆಡುವ ಬಳಗಕ್ಕೆ ಸೇರಿಕೊಂಡರೆ ಬೌಲಿಂಗ್ನಲ್ಲಿ ಶಾರ್ದೂಲ್ ಠಾಕೂರ್ ಹೊರಗುಳಿದು ಶಮಿ ಸೇರಿಕೊಂಡಿದ್ದು ಅಮೋಘ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ.