
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಸುಲಭ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಮೂವರು ಆಟಗಾರರು ಕೂಡ ಅಮೋಘ ಪ್ರದರ್ಶನ ನೀಡುವ ಮೂಲಕ ಆರಂಭದಿಂದಲೇ ಮೇಲುಗೈ ಸಾಧಿಸಲು ಕಾರಣವಾದರು. ಅದರಲ್ಲು ಯುವ ಆಟಗಾರ ಇಶಾನ್ ಕಿಶನ್ ಈ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡಿದ್ದು ಸ್ಪೋಟಕ 89 ರನ್ಗಳ ಪ್ರದರ್ಶನ ನೀಡಿದ್ದಾರೆ.
ಆದರೆ ಇಶಾನ್ ಕಿಶನ್ ಆರಂಭಿಕನಾಗಿ ಮೊದಲ ಆಯ್ಕೆಯಲ್ಲ ಎಂಬುದು ಸ್ಪಷ್ಟ. ತಂಡದ ಉಪನಾಯಕ ಕೆಎಲ್ ರಾಹುಲ್ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಇಶಾನ್ ಕಿಶನ್ ಆರಂಭಿಕನಾಗಿ ಆಡುವ ಅವಕಾಶವನನ್ಉ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪಂದ್ಯದ ಮುಕ್ತಾಯದ ಬಳಿಕ ಇಶಾನ್ ಕಿಶನ್ ಪ್ರತಿಕ್ರಿಯೆ ನಿಡಿದ್ದು ನಾನು ಯಾವ ಕ್ರಮಾಂಕದಲ್ಲಿ ಆಡಲು ಇಳಿಯುತ್ತೇನೆ ಎಂಬ ವಿಚಾರಕ್ಕಿಂತ ಸಿಕ್ಕ ಅವಕಾಶದಲ್ಲಿ ನಾನು ಉತ್ತಮವಾಗಿ ಪ್ರದರ್ಶನ ನೀಡಬೇಕು ಎಂಬುದು ನನ್ನ ಮೊದಲ ಆದ್ಯತೆ ಎಂದಿದ್ದಾರೆ.
"ನೀವು ಕ್ರಿಕೆಟ್ನ ಅತ್ಯುನ್ನತ ಮಟ್ಟದಲ್ಲಿ ಭಾರತದಂತಾ ತಂಡದ ಪರವಾಗಿ ಆಡುತ್ತಿರುವಾಗ ನಿಮಗೆ ಸಿಗುವ ಎಲ್ಲಾ ಅವಕಾಶವನ್ನು ಬಳಸಿಕೊಳ್ಳಲು ನೀವು ಸಿದ್ಧವಿರಬೇಕಾಗುತ್ತದೆ. ಯಾಕೆಂದರೆ ಇಲ್ಲಿ ಸಾಕಚಷ್ಟು ಆಟಗಾರರು ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ನೀವು ಯಾವುದೋ ಒಂದು ಕ್ರಮಾಂಕಕ್ಕೆ ಬೇಡಿಕೆಯಿಡಲು ಸಾಧ್ಯವಿಲ್ಲ" ಎಂದು ಇಶಾನ್ ಕಿಶನ್ ಅಭಿಪ್ರಾಯಪಟ್ಟಿದ್ದಾರೆ.
"ನಾವು ಎಲ್ಲದಕ್ಕೂ ಸಿದ್ಧವಾಗಿರಬೇಕು. ಅದಕ್ಕಾಗಿ ನೆಟ್ಸ್ನಲ್ಲಿ ಸಿದ್ಧತೆಯನ್ನು ನಡೆಸಿರುತ್ತೇವೆ. ಯಾವುದೇ ಒಂದು ಕ್ರಮಾಂಕದಲ್ಲಿ ನಮ್ಮ ಸೀನಿಯರ್ ಆಟಗಾರರು ಉತ್ತಮವಾದ ಪ್ರದರ್ಶನ ನಿಡುತ್ತಿರುವಾಗ ನಾವು ಅದನ್ನು ನೋಡಿ ಕಲಿಯುತ್ತಿರುತ್ತೇವೆ. ಆರಂಭಿಕನಾಗಿ ಕಣಕ್ಕಿಳಿದು ಆಡಬೇಕು ಎಂದಿದ್ದರೆ ಅದಕ್ಕಾಗಿ ನೀವು ಕಾಯಲೇಬೇಕಾಗುತ್ತದೆ. ಯಾವಾಗ ನಿಮಗೆ ಅವಕಾಶ ದೊರೆಯುತ್ತದೋ ಆ ಅವಕಾಶವನ್ನು ಅದ್ಭುತವಾಗಿ ಬಳಸಿಕೊಳ್ಳಬೇಕು" ಎಂದು ಇಶಾನ್ ಕಿಶನ್ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ರೋಹಿತ್ ಶರ್ಮಾ ಜೊತೆಗೆ ಆರಭಿಕನಾಗಿ ಕಣಕ್ಕಿಳಿದು ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್ಗೆ ನಾಯಕ ರೋಹಿತ್ ಶರ್ಮಾ ಜೊತೆಗೂಡಿ 111 ರನ್ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರೆ ನಂತರ ಶ್ರೇಯಸ್ ಐಯ್ಯರ್ ಜೊತೆಗೂ ಉತ್ತಮ ಜೊತೆಯಾಟದಲ್ಲಿ ಭಾಗಿಯಾದರು. ಈ ಪಂದ್ಯದಲ್ಲಿ 56 ಎಸೆತ ಎದುರಿಸಿದ ಇಶಾನ್ ಕಿಶನ್ ಭರ್ಜರಿ 89 ರನ್ ಗಳಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶ್ರೇಯಸ್ ಐಯ್ಯರ್ ನಿಧಾನಗತಿಯೊಂದಿಗೆ ಆರಂಭಿಸಿದರೂ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡ ಬಳಿಕ ರನ್ ವೇಗವನ್ನು ಹೆಚ್ಚಿಸಿದರು.