ಗುರುವಾರ, ನವೆಂಬರ್ 2ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಎದುರಾಳಿ ಶ್ರೀಲಂಕಾ ವಿರುದ್ಧ ಅಕ್ಷರಶಃ ಸವಾರಿ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ಗಳನ್ನು ಕಲೆಹಾಕಿತು.

ನಂತರ 358 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಐತಿಹಾಸಿಕ ಪತನ ಕಂಡಿತು. ಮೊದಲ ಎಸೆತದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಹೋದ ಲಂಕನ್ನರು ನಂತರ ಚೇತರಿಸಿಕೊಳ್ಳಲೇ ಇಲ್ಲ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ಪ್ರದರ್ಶನ ನೀಡಿದರು.
ಇನ್ನು ಜಸ್ಪ್ರೀತ್ ಬುಮ್ರಾ ಅವರು ಏಕದಿನ ವಿಶ್ವಕಪ್ ಪಂದ್ಯದ ವೇಳೆ ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ಭಾರತೀಯ ತಂಡದ ಬೌಲರ್ ಎನಿಸಿಕೊಂಡರು.
2023ರ ಏಕದಿನ ವಿಶ್ವಕಪ್ನ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಥುಮ್ ನಿಸ್ಸಾಂಕಾ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಜಸ್ಪ್ರೀತ್ ಬುಮ್ರಾ ಪರಿಪೂರ್ಣ ಮೊದಲ ಎಸೆತವನ್ನು ಎಸೆದರು. ಇದು 48 ವರ್ಷಗಳಲ್ಲಿ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಭಾರತ ಪರ ಜಸ್ಪ್ರೀತ್ ಬುಮ್ರಾ ಈ ಐತಿಹಾಸಿಕ ಸಾಧನೆ ನಿರ್ಮಿಸಿದರು.

ಬುಮ್ರಾ ಎಸೆತವು ಬ್ಯಾಟರ್ ಪಾಥುಮ್ ನಿಸ್ಸಾಂಕಾ ಅವರ ಪ್ಯಾಡ್ಗಳ ಮೇಲೆ ಬಡಿಯಿತು. ಅಂಪೈರ್ ಅದನ್ನು ಔಟ್ ಎಂದು ತೀರ್ಪು ನೀಡಿದರು. ಆದರೆ ಶ್ರೀಲಂಕಾ ರಿವ್ಯೂ ತೆಗೆದುಕೊಂಡಿತು ಮತ್ತು ಆ ಎಸೆತವು ಲೆಗ್ ಸ್ಟಂಪ್ನಲ್ಲಿ ಬೇಲ್ಗಳನ್ನು ಹಾರಿಸುತ್ತಿದೆ ಎಂಬ ಅಂಶವನ್ನು ದೃಢಪಡಿಸಿತು.
ಇನ್ನು ಏಕದಿನ ಕ್ರಿಕೆಟ್ ವಿಶ್ವಕಪ್ ವಿಚಾರಕ್ಕೆ ಬಂದರೆ ಭಾರತದ ಯಾವ ಬೌಲರ್ ಕೂಡ ಈ ಸಾಧನೆ ಮಾಡಿಲ್ಲ. ಇದೀಗ ಜಸ್ಪ್ರೀತ್ ಬುಮ್ರಾ ಈ ದಾಖಲೆಗೆ ತಮ್ಮ ಹೆಸರು ಬರೆದುಕೊಂಡರು.
ಇನ್ನು ಭಾರತ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ಗೆ ಸಂಬಂಧಿಸಿದಂತೆ, ವಿರಾಟ್ ಕೊಹ್ಲಿ ಮತ್ತೊಮ್ಮೆ 49ನೇ ಏಕದಿನ ಶತಕವನ್ನು ಸರಿಗಟ್ಟುವ ದಾಖಲೆಯನ್ನು ತಪ್ಪಿಸಿಕೊಂಡರು.
ಈ ಹಿಂದೆ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಸಚಿನ್ ತೆಂಡೂಲ್ಕರ್ ಅವರ 49ನೇ ಏಕದಿನ ಶತಕವನ್ನು ಸರಿಗಟ್ಟುವ ಅವಕಾಶವನ್ನು ಕೇವಲ 5 ರನ್ಗಳಿಂದ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಇಲ್ಲಿ 94 ಎಸೆತಗಳಲ್ಲಿ 88 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು.
ಇದಕ್ಕೂ ಮುನ್ನ ತಮ್ಮ ಉತ್ತರಾಧಿಕಾರಿ ಶುಭ್ಮನ್ ಗಿಲ್ ಅವರೊಂದಿಗೆ ಎರಡನೇ ವಿಕೆಟ್ಗೆ 189 ರನ್ಗಳ ಜೊತೆಯಾಟ ನೀಡಿದರು. ಶುಭ್ಮನ್ ಗಿಲ್ ಕೂಡ 92 ಎಸೆತಗಳಲ್ಲಿ 92 ರನ್ ಗಳಿಸಿ ಶತಕ ವಂಚಿತರಾದರು.
ನಂತರ ಕ್ರೀಸ್ಗೆ ಬಂದ ಶ್ರೇಯಸ್ ಅಯ್ಯರ್ 56 ಎಸೆತಗಳಲ್ಲಿ 82 ರನ್ ಬಾರಿಸುವ ಮೂಲಕ ಶ್ರೀಲಂಕಾದ ಸಾಧಾರಣ ಬೌಲಿಂಗ್ ದಾಳಿಯ ವಿರುದ್ಧ ಸಿಡಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಈಡನ್ ಗಾರ್ಡನ್ನಲ್ಲಿ ನಡೆಯಲಿರುವ ಪಂದ್ಯಕ್ಕೆ ಮೊದಲು ಫಾರ್ಮ್ ಮರಳಿ ಪಡೆದರು.
ಸಿಕ್ಸರ್ಗಳ ಸುರಿಮಳೆಯೊಂದಿಗೆ ಚುರುಕಾಗಿ ಬ್ಯಾಟಿಂಗ್ ಪ್ರಾರಂಭಿಸಿದ ಶ್ರೇಯಸ್ ಅಯ್ಯರ್ ಅವರ ಇನ್ನಿಂಗ್ಸ್ ಭಾರತ ತಂಡವನ್ನು 350ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಶ್ರೀಲಂಕಾ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ದಿಲ್ಶನ್ ಮಧುಶಂಕ 10 ಓವರ್ಗಳಲ್ಲಿ 80 ರನ್ ನೀಡಿ 5 ವಿಕೆಟ್ ಕಬಳಿಸಿದರು. ಮೂವರು ಭಾರತೀಯ ಬ್ಯಾಟರ್ಗಳು ಶತಕವಂಚಿತರಾಗುವಂತೆ ನೋಡಿಕೊಂಡರು.