ಭಾರತ vs ಶ್ರೀಲಂಕಾ: ಶಾಲಾ ತಂಡವನ್ನು ಕಾಲೇಜು ತಂಡ ಎದುರಿಸಿದಂತಿತ್ತು: ರಮೀಜ್ ರಾಜಾ

ಕೊಲಂಬೋ, ಜುಲೈ 19: ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾ ಅದ್ಭುತ ಆಟವನ್ನು ಪ್ರದರ್ಶಿಸಿ ಗೆಲುವು ಸಾಧಿಸಿತು. ಈ ಪಂದ್ಯದ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಮೀಜ್ ರಾಜಾ ಪ್ರತಿಕ್ರಿಯಿಸಿದ್ದಾರೆ. ಈ ಪಂದ್ಯ ಕಾಲೇಜ್ ತಂಡ ಮತ್ತು ಶಾಲಾ ತಂಡದ ನಡುವೆ ನಡೆದ ಪಂದ್ಯದಂತಿತ್ತು ಎಂದಿದ್ದಾರೆ.
ಪ್ರಮುಖ ಆಟಗಾರರಿಲ್ಲದ ಟೀಮ್ ಇಂಡಿಯಾ ತಂಡ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಸರಣಿಯಲ್ಲಿ ಭಾರತ 1-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ತಂಡದ ಪ್ರದರ್ಶನದ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಟೀಕಿಸಿದ್ದಾರೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದ ಬಳಿಕ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ರಾಜಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ತಂಡಕ್ಕೆ ಸವಾಲಿನ ಸಮಯ
"ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಶಾಲಾ ತಂಡವನ್ನು ವಿಶ್ವವಿದ್ಯಾಲಯ ತಂಡ ಎದುರಿಸಿದಂತಿತ್ತು. ಕೌಶಲ್ಯ, ಯೋಜನೆಗಳ ಪ್ರಯೋಗ, ಪ್ರತಿಭೆ ಮತ್ತು ಆಟವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದಲ್ಲಿ ದೊಡ್ಡ ಅಂತರಗಳನ್ನು ಕಾಣಬಹುದಾಗಿದೆ. ತವರಿನಲ್ಲಿ ಆಡುತ್ತಿರುವುದರಿಂದ ಶ್ರೀಲಂಕಾ ತಂಡಕ್ಕೆ ಇದು ಅತ್ಯಂತ ಸವಾಲಿನ ಸ್ಥಿತಿಯಾಗಿದೆ. ಭಾರತದ ವಿರುದ್ಧದ ಪಂದ್ಯಕ್ಕಾಗಿ ಅವರು ಫ್ಲ್ಯಾಟ್ ಪಿಚ್ಅನ್ನು ಸಿದ್ಧಪಡಿಸಿದ್ದರು. ಹಾಗಿದ್ದರೂ ಸಾಧಾರಣ ಮೊತ್ತವನ್ನಷ್ಟೇ ಕಲೆಹಾಕಲು ಸಾಧ್ಯವಾಯಿತು" ಎಂದಿದ್ದಾರೆ ರಮೀಜ್ ರಾಜಾ.

ಕೆಳ ಕ್ರಮಾಂಕದ ಆಟಗಾರರಿಂದ ಉತ್ತಮ ಪ್ರದರ್ಶನ
ಇನ್ನು ಇದೇ ಸಂದರ್ಭದಲ್ಲಿ ರಮೀಜ್ ರಾಜಾ ಶ್ರೀಲಂಕಾ ತಂಡದ ಕೆಳ ಕ್ರಮಾಂಕದ ಆಟಗಾರರು ಉತ್ತಮ ಪ್ರದರ್ಶನ ನೀಡದಿದ್ದರೆ ಇದು ಕಡಿಮೆ ಮೊತ್ತದ ಪಂದ್ಯವಾಗಿರುತ್ತಿತ್ತು ಎಂದು ಹೇಳಿದ್ದಾರೆ. ಇದರ ಜೊತೆಗೆ ಶ್ರೀಲಂಕಾ ಬ್ಯಾಟ್ಸ್ಮನ್ಗಳು ಭಾರತೀಯ ಸ್ಪಿನ್ನರ್ಗಳ ವಿರುದ್ಧ ತಿಣುಕಾಡಿದ ರೀತಿಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾ ತಂಡ ಸ್ಪಿನ್ನರ್ಗಳ ವಿರುದ್ಧ ಯಾವಾಗಲೂ ಅತ್ಯುತ್ತಮ ಆಟವನ್ನು ಪ್ರದರ್ಶಿಸುತ್ತಾ ಬಂದಿದೆ ಎಂದಿದ್ದಾರೆ ರಮೀಜ್ ರಾಜಾ.

ಸ್ಪಿನ್ ವಿರುದ್ಧ ಆಡಿದ ರೀತಿಗೆ ರಾಜಾ ಅಚ್ಚರಿ
"ಸ್ಪಿನ್ನರ್ಗಳನ್ನು ಶ್ರೀಲಂಕಾ ಬ್ಯಾಟ್ಸ್ಮನ್ಗಳು ಎದುರಿಸಿದ ರೀತಿ ಅವರು ಯಾವತ್ತಿಗೂ ಸ್ಪಿನ್ ಬೌಲಿಂಗ್ ಎದುರಿಸಿಯೇ ಇಲ್ಲವೇನೋ ಎಂಬಂತಿತ್ತು. ಐತಿಹಾಸಿಕವಾಗಿ ಶ್ರೀಲಂಕಾ ದಾಂಡಿಗರು ಸ್ಪಿನ್ನರ್ಗಳ ವಿರುದ್ಧ ಅದ್ಭುತ ಪ್ರದರ್ಶನ ನಿಡುತ್ತಾ ಬಂದಿದ್ದಾರೆ. ಆದರೆ ಈಗಿನ ತಂಡ ಆ ಮಟ್ಟಕ್ಕೆ ಇನ್ನೂ ಕಾಣಿಸುತ್ತಿಲ್ಲ" ಎಂದಿದ್ದಾರೆ ರಮೀಜ್ ರಾಜಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications