ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ವೇಳೆ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ್ದಾರೆ.
ಇದೀಗ ಇನ್ನೂ ಕೆಲವು ದಾಖಲೆಗಳನ್ನು ಮುರಿಯಲು, ಕೆಲವು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲು ಮತ್ತು ಶತಕಗಳ ಪಟ್ಟಿಗೆ ಮತ್ತಷ್ಟು ಸೇರಿಸಲು ಟಿ20 ವಿಶ್ವ ಚಾಂಪಿಯನ್ನ ಮೇಲೆ ಎಲ್ಲರ ಕಣ್ಣುಗಳು ಇರಲಿವೆ.

ಭಾರತ ಕ್ರಿಕೆಟ್ ತಂಡದ ಶ್ರೀಲಂಕಾ ಪ್ರವಾಸವು ಜುಲೈ 27ರಂದು ಪ್ರಾರಂಭವಾಗಲಿದೆ. ಪ್ರವಾಸವು ಮೂರು ಪಂದ್ಯಗಳ ಟಿ20 ಸರಣಿಯೊಂದಿಗೆ ಪ್ರಾರಂಭವಾಗಲಿದ್ದು, ನಂತರ ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 2ರಂದು ಪ್ರಾರಂಭವಾಗಲಿದೆ.
ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣವು ಟಿ20 ಸರಣಿಯನ್ನು ಆಯೋಜಿಸಿದರೆ, ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣವು 50-ಓವರ್ಗಳ ಸರಣಿಯನ್ನು ಆಯೋಜಿಸಲಿದೆ. ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಆಗಸ್ಟ್ 2, ಆಗಸ್ಟ್ 4 ಮತ್ತು ಆಗಸ್ಟ್ 7ರಂದು ನಡೆಯಲಿವೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ತಮ್ಮ 14,000 ಏಕದಿನ ರನ್ಗಳನ್ನು ತಲುಪಲು ಕೇವಲ 152 ರನ್ಗಳ ಅವಶ್ಯಕತೆ ಇದ್ದು, ವಿರಾಟ್ ಅವರ ಬ್ಯಾಟ್ನಿಂದ ಇನ್ನಷ್ಟು ರನ್ಗಳನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ವಿರಾಟ್ ಕೊಹ್ಲಿ ಈವರೆಗೆ ಆಡಿದ 292 ಏಕದಿನ ಪಂದ್ಯಗಳಲ್ಲಿ 58.67ರ ಸರಾಸರಿ ಮತ್ತು 93ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ 13,848 ರನ್ಗಳನ್ನು ಗಳಿಸಿದ್ದಾರೆ. ಇದರಲ್ಲಿ 50 ಶತಕಗಳು ಮತ್ತು 72 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 183 ರನ್ ಆಗಿದೆ.
ವಿರಾಟ್ ಕೊಹ್ಲಿ 14,000 ಏಕದಿನ ರನ್ ಪೂರೈಸಲು ಸಾಧ್ಯವಾದರೆ, ಭಾರತದ ಲೆಜೆಂಡ್ ಸಚಿನ್ ತೆಂಡೂಲ್ಕರ್ (18,426 ರನ್) ಮತ್ತು ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ (14,234 ರನ್) ನಂತರ ಈ ಮೈಲಿಗಲ್ಲು ತಲುಪಿದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಮತ್ತೊಂದೆಡೆ, ವಿರಾಟ್ ಕೊಹ್ಲಿ ಒಟ್ಟಾರೆ 27,000 ಅಂತಾರಾಷ್ಟ್ರೀಯ ರನ್ಗಳತ್ತ ಸಾಗುತ್ತಿದ್ದಾರೆ. 530 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 80 ಶತಕ ಹಾಗೂ 140 ಅರ್ಧಶತಕಗಳೊಂದಿಗೆ 53.55ರ ಸರಾಸರಿಯಲ್ಲಿ 26,884 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ ಟೆಸ್ಟ್ನಲ್ಲಿ ಅಜೇಯ 254 ರನ್ ಆಗಿದೆ. ಇನ್ನು ಕೇವಲ 116 ರನ್ಗಳು ಈ ಮೈಲಿಗಲ್ಲು ತಲುಪಲು ನೆರವಾಗಲಿದೆ.
ಭಾರತದ ಸಚಿನ್ ತೆಂಡೂಲ್ಕರ್ (34,357 ರನ್), ಶ್ರೀಲಂಕಾದ ಕುಮಾರ ಸಂಗಕ್ಕಾರ (28,016 ರನ್) ಮತ್ತು ಆಸ್ಟ್ರೇಲಿಯಾದ ದಂತಕಥೆ ರಿಕಿ ಪಾಂಟಿಂಗ್ (27,483 ರನ್) ನಂತರ, ವಿರಾಟ್ ಕೊಹ್ಲಿ 27,000 ಅಂತಾರಾಷ್ಟ್ರೀಯ ರನ್ಗಳನ್ನು ತಲುಪಿದ ನಾಲ್ಕನೇ ಆಟಗಾರನಾಗಲಿದ್ದಾರೆ.
ಉಭಯ ತಂಡಗಳು ಹೊಸ ಮುಖ್ಯ ಕೋಚ್ಗಳೊಂದಿಗೆ ಮೈದಾನಕ್ಕೆ ಇಳಿಯುತ್ತಿವೆ. ಶ್ರೀಲಂಕಾ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಲೆಜೆಂಡರಿ ಆಲ್ರೌಂಡರ್ ಸನತ್ ಜಯಸೂರ್ಯ ಅವರನ್ನು ನೇಮಕ ಮಾಡಲಾಗಿದೆ.
ಇನ್ನು ಟಿ20 ವಿಶ್ವಕಪ್ ವಿಜೇತ ಕೋಚ್ ರಾಹುಲ್ ದ್ರಾವಿಡ್ ತಮ್ಮ ಹುದ್ದೆ ತ್ಯಜಿಸಿದ ನಂತರ, ಭಾರತದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಇದು ಮೊದಲ ನಿಯೋಜನೆಯಾಗಿದೆ.
ದ್ವಿಪಕ್ಷೀಯ ವೈಟ್-ಬಾಲ್ ಸರಣಿಗಾಗಿ ಭಾರತದ ಕೊನೆಯ ಶ್ರೀಲಂಕಾ ಪ್ರವಾಸವು ಜುಲೈ 2021ರಲ್ಲಿ ಮರಳಿತು. ಶಿಖರ್ ಧವನ್ ನಾಯಕತ್ವದ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು. ಭಾರತ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡರೆ, ಅದೇ ಅಂತರದಲ್ಲಿ ಶ್ರೀಲಂಕಾ ಟಿ20 ಸರಣಿಯನ್ನು ಗೆದ್ದುಕೊಂಡಿತ್ತು.