
ಲಂಕಾ ವಿರುದ್ಧದ ಸರಣಿಯ ಬಳಿಕ ದ್ರಾವಿಡ್ ಪ್ರತಿಕ್ರಿಯೆ
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ಅಂತ್ಯವಾಗಿದೆ. ಯುವ ಆಟಗಾರರಿಂದಲೇ ಕೂಡಿದ್ದ ಭಾರತ ತಂಡ ಲಂಕಾ ಸರಣಿಯನ್ನು ಬಹುತೇಕ ಯಶಸ್ವಿಯಾಗಿ ಮುಗಿಸಿದೆ. ಟಿ20 ಸರಣಿಯನ್ನು ಭಾರತ ಕಳೆದುಕೊಂಡಿದ್ದರೂ ಭಾರತ ತಂಡದ ಬಹುತೇಕ ಸದಸ್ಯರು ಅಂತಿಮ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಕಾರಣ ಭಾರತ ತಂಡ ನೀಡಿದ ಹೋರಾಟ ಅತ್ಯಂತ ಪ್ರಶಂಸನೀಯವಾಗಿದೆ. ಈ ಟಿ20 ಸರಣಿಯ ಅಂತ್ಯದ ಬಳಿಕ ರಾಹುಲ್ ದ್ರಾವಿಡ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಖಾಯಂ ಕೋಚ್ ಸ್ಥಾನದ ಬಗ್ಗೆ ದ್ರಾವಿಡ್ ಹೇಳಿದ್ದೇನು?
ಟೀಮ್ ಇಂಡಿಯಾದ ಖಾಯಂ ಕೋಚ್ ಹುದ್ದೆಯ ಶ್ರೀಲಂಕಾ ವಿರುದ್ಧದ ಸರಣಿಯ ಬಳಿಕ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ರಾಹುಲ್ ದ್ರಾವಿಡ್ "ಈ ಹುದ್ದೆಯನ್ನು ನಾನು ತುಂಬಾ ಚೆನ್ನಾಗಿ ಅನುಭವಿಸಿದ್ದೇನೆ. ಆದರೆ ಅದನ್ನು ಹೊರತಾಗಿ ನನ್ನ ತಲೆಯಲ್ಲಿ ಬೇರೆ ಯಾವುದೇ ವಿಚಾರಗಳು ಈವರೆಗೂ ಇಲ್ಲ" ಎಂದಿದ್ದಾರೆ.

ನನ್ನ ಕೆಲಸದಲ್ಲಿ ತೃಪ್ತಿಯಿದೆ
ಇನ್ನು ಮುಂದುವರಿದು ಮಾತನಾಡಿದ ರಾಹುಲ್ ದ್ರಾವಿಡ್ "ನಿಮ್ಮ ಬಳಿ ಅತ್ಯಂತ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಈಗ ಏನು ಮಾಡುತ್ತಿದ್ದೀನೋ ಅದರಲ್ಲಿ ನಾನು ಸಂತೋಷದಿಂದಿದ್ದೇನೆ. ನನ್ನ ಪ್ರಕಾರ ನಾನು ಈ ಪ್ರವಾಸದ ಹೊರತಾಗಿ ಬೇರೆ ಯಾವುದೇ ಆಲೋಚನೆಯನ್ನು ಹೊಂದಿಲ್ಲ ಮತ್ತು ಇತರರಿಗೂ ಆಲೋಚನೆಯನ್ನು ನೀಡಿಲ್ಲ" ಎಂದಿದ್ದಾರೆ ರಾಹುಲ್ ದ್ರಾವಿಡ್. ಈ ಮೂಲಕ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಹುದ್ದೆಗೆ ಏರಲಿದ್ದಾರೆ ಎಂಬ ಚರ್ಚೆಯ ವಿಷಯದಲ್ಲಿ ತನಗೆ ಯಾವುದೇ ಆಸಕ್ತಿಯಿಲ್ಲ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ ದಿಗ್ಗಜ ಕ್ರಿಕೆಟಿಗ.

ಮೊದಲ ಬಾರಿಗೆ ಸೀನಿಯರ್ ತಂಡದ ಕೋಚ್
ರಾಹುಲ್ ದ್ರಾವಿಡ್ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಸೀನಿಯರ್ ತಂಡದ ಕೋಚ್ ಆಗಿ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಈ ಸರಣಿಯಲ್ಲಿ ಭಾರತ ಆರು ಸೀಮಿತ ಓವರ್ಗಳ ಪಂದ್ಯವನ್ನು ಆಡಿತ್ತು. ದ್ರಾವಿಡ್ ಮಾರ್ಗದರ್ಶನದಲ್ಲಿ ಶಿಖರ್ ಧವನ್ ನಾಯಕತ್ವದ ಭಾರತ ತಂಡ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮೊದಲಿಗೆ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು. ಅದಾದ ಬಳಿಕ ಟಿ20 ಸರಣಿಯಲ್ಲಿ 1-2 ಅಂತರದಿಂದ ಸೋಲು ಕಂಡಿದೆ. ಇದಕ್ಕೂ ಮುನ್ನ ರಾಹುಲ್ ದ್ರಾವಿಡ್ ಅಂಡರ್ 19 ತಂಡ ಹಾಗೂ ಭಾರತ ಎ ತಂಡಕ್ಕೆ ಕೋಚ್ ಆಗಿ ಜವಾಬ್ಧಾರಿ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪ್ರಸಕ್ತ ದ್ರಾವಿಡ್ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯ ಮುಖ್ಯಸ್ಥರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.


Click it and Unblock the Notifications
