ಮೊಹಾಲಿ, ಡಿಸೆಂಬರ್ 13: ಪ್ರವಾಸಿ ಶ್ರೀಲಂಕಾ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರ (208) ಅಜೇಯ ಆಕರ್ಷಕ ದ್ವಿಶತಕದ ನೆರವಿನಿಂದ ಟೀಂ ಇಂಡಿಯಾ 141 ರನ್ ಗಳ ಗೆಲುವಿನ ನಗೆ ಬೀರಿದೆ.
ಮೊದಲು ಟಾಸ್ ಸೋತು ಬ್ಯಾಟ್ ಮಾಡಿದ ಭಾರತ, ರೋಹಿತ್ ಶರ್ಮಾ ಅವರ ಬೌಂಡರಿ ಸಿಕ್ಸರ್ ಚಿತ್ತಾರದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ ಲಂಕಾಗೆ 393 ರನ್ ಗಳ ಗೆಲುವಿನ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ ಸಿಂಹಳೀಯರು 50 ಓವರ್ ಗಳಲ್ಲಿ 249 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ 141 ರನ್ ಗಳಿಂದ ಜಯಗಳಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಮಾಡಿಕೊಂಡಿತು.

ನಾಯಕ ರೋಹಿತ್ ಶರ್ಮ ಅವರು ಅಜೇಯ ದ್ವಿಶತಕ ಹಾಗೂ ಶಿಖರ್ ಧವನ್ ಹಾಗೂ ಯುವ ಆಟಗಾರ ಶ್ರೇಯಸ್ ಅಯ್ಯರ್ ಅವರ ತಲಾ ಅರ್ಧಶತಕದ ನೆರವಿನಿಂದ ಭಾರತ 50 ಓವರ್ ಗಳಲ್ಲಿ 392/4 ಸ್ಕೋರ್ ಮಾಡಿದೆ.
ಭಾರತದ ಇನ್ನಿಂಗ್ಸ್ : ನಾಯಕ ರೋಹಿತ್ ಶರ್ಮ ಅವರು ಆರಂಭಿಕ ಆಟಗಾರರಾಗಿ ಕಣಕ್ಕಿಳಿದು 153 ಎಸೆತಗಳಲ್ಲಿ 208ರನ್ (13 ಬೌಂಡರಿ, 12 ಸಿಕ್ಸರ್) ಚೆಚ್ಚಿದರು.
ಶಿಖರ್ ಧವನ್ 67 ಎಸೆತಗಳಲ್ಲಿ 68 ರನ್ ಗಳಿಸಿ ಔಟಾದರು. ನಂತರ ಬಂದ ಯುವ ಆಟಗಾರ ಶ್ರೇಯಸ್ ಅಯ್ಯರ್ 70 ಎಸೆತಗಳಲ್ಲಿ 88ರನ್ (9 ಬೌಂಡರಿ,2 ಸಿಕ್ಸರ್ ) ಬಾರಿಸಿದರು.
ಶ್ರೀಲಂಕಾ ಪರ ನುವಾನ್ ಪ್ರದೀಪ್ 10 ಓವರ್ ಗಳಲ್ಲಿ 106ರನ್ ಚೆಚ್ಚಿಸಿಕೊಂಡರು. ರನ್ ಸುರಿಮಳೆ ಹರಿದ ಈ ಪಂದ್ಯದಲ್ಲಿ ಏಂಜೆಲೋ ಮ್ಯಾಥ್ಯೂಸ್ ಅವರು 4 ಓವರ್ ಗಳಲ್ಲಿ 1 ಮೇಡನ್ ಜತೆಗೆ 9 ರನ್ ಮಾತ್ರ ನೀಡಿ ಅಚ್ಚರಿ ಮೂಡಿಸಿದರು.
ಟೀಂ ಇಂಡಿಯಾ ಕಳೆದ ಪಂದ್ಯವಾಡಿದ ತಂಡವನ್ನೆ ಉಳಿಸಿಕೊಂಡಿದ್ದು, ವಾಷಿಂಗ್ಟನ್ ಸುಂದರ್ ಗೆ ಚೊಚ್ಚಲ ಪಂದ್ಯವಾಡುವ ಅವಕಾಶ ಸಿಕ್ಕಿದೆ.
ಅಜಿಂಕ್ಯ ರಹಾನೆ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ. ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಭಾರತ 0-1ರಿಂದ ಹಿನ್ನಡೆ ಅನುಭವಿಸಿದೆ.