
ಸಭೆಗೂ ಮುನ್ನವೇ ರಾಜೀನಾಮೆ ನೀಡಿದ ಅಬೆಯ್ ಕುರುವಿಲ್ಲ
ಟೀಮ್ ಇಂಡಿಯಾ ಆಯ್ಕೆ ಸಮಿತಿಯಲ್ಲಿ ಪ್ರಮುಖರಾಗಿದ್ದ ಭಾರತದ ಮಾಜಿ ವೇಗಿ ಅಬೆಯ್ ಕುರುವಿಲ್ಲ ಭಾರತ ಟೆಸ್ಟ್ ತಂಡದ ಮುಂದಿನ ನಾಯಕ ಯಾರು ಎಂಬುದರ ಕುರಿತು ನಡೆಯಬೇಕಾಗಿದ್ದ ದೊಡ್ಡ ಸಭೆಗೂ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಹೌದು, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ಭಾರತ ಟೆಸ್ಟ್ ತಂಡದ ನೂತನ ನಾಯಕನನ್ನು ಆಯ್ಕೆ ಮಾಡುವ ಸಲುವಾಗಿ ಈ ಸಭೆ ನಡೆಯಬೇಕಿತ್ತು ಆದರೆ ಇದೀಗ ಅಬೆಯ್ ಕುರುವಿಲ್ಲ ರಾಜೀನಾಮೆ ಸಭೆ ವಿಳಂಬವಾಗುವಂತೆ ಮಾಡಿದೆ.

ಕುರುವಿಲ್ಲಾ ರಾಜೀನಾಮೆಗೆ ಕಾರಣವೇನು?
ಇನ್ನು ಇಂತಹ ನಿರ್ಣಾಯಕ ಹಂತದಲ್ಲಿ ಅಬೆಯ್ ಕುರುವಿಲ್ಲ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಉತ್ತರ ಅಬೆಯ್ ಕುರುವಿಲ್ಲ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ 5 ವರ್ಷಗಳನ್ನು ಪೂರೈಸಿರುವುದು. ಹೌದು ನಿಯಮದ ಪ್ರಕಾರ ಬಿಸಿಸಿಐನ ಆಯ್ಕೆ ಸಮಿತಿಯಲ್ಲಿ 5 ವರ್ಷಗಳ ಕಾಲ ಮಾತ್ರ ಕೆಲಸ ಮಾಡಬಹುದಾಗಿದ್ದು, ಈ ಅವಧಿ ಮುಗಿದ ನಂತರ ಯಾವುದೇ ಅಧಿಕಾರಿಯಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಕೆಳಗಿಳಿಯಲೇಬೇಕಾಗಿದೆ. ಹೀಗಾಗಿಯೇ ಅವಧಿ ಮುಗಿದ ಅಬೆಯ್ ಕುರುವಿಲ್ಲಾ ಇದೀಗ ರಾಜಿನಾಮೆ ಸಲ್ಲಿಸಿ ಕೆಳಗಿಳಿದಿದ್ದಾರೆ.

ನೂತನ ಆಯ್ಕೆಗಾರರನ್ನು ಆರಿಸಬೇಕಿದೆ ಬಿಸಿಸಿಐ
ಅಬೆಯ್ ಕುರುವಿಲ್ಲ ರಾಜೀನಾಮೆ ನೀಡಿದ ನಂತರ ಆ ಸ್ಥಾನಕ್ಕೆ ನೂತನ ಆಯ್ಕೆಗಾರನನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ಇದೀಗ ಬಿಸಿಸಿಐಗೆ ಎದುರಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಗೆ ತಂಡ ಪ್ರಕಟಿಸುವುದಕ್ಕೆ ಹಾಗೂ ನೂತನ ನಾಯಕನ ಆಯ್ಕೆ ಮಾಡುವುದಕ್ಕೆ ಕಡಿಮೆ ಸಮಯವಿದ್ದು, ಆದಷ್ಟು ಬೇಗ ನೂತನ ಆಯ್ಕೆಗಾರನನ್ನು ನೇಮಿಸಲೇಬೇಕಾಗಿದೆ.


Click it and Unblock the Notifications
