
ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ನಂತರ ಇದೀಗ ಟೆಸ್ಟ್ ಮಾದರಿಯ ಪಂದ್ಯಕ್ಕೆ ತಂಡಗಳು ಸಜ್ಜಾಗಿದೆ. ಮೊಹಾಲಿಯಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಗೆ 100ನೇ ಪಂದ್ಯ ಎಂಬುದು ಗಮನಾರ್ಹ ಸಂಗತಿ. ಈ ವಿಶೇಷ ಮೈಲುಗಲ್ಲಿನ ಪಂದ್ಯದಲ್ಲಿ ಕಣಕ್ಕಿಳಿಯಲು ವಿರಾಟ್ ಕೊಹ್ಲಿ ಸರ್ವಸನ್ನಧವಾಗಿದ್ದು ಮೊಹಾಲಿಯಲ್ಲಿ ತಂಡದ ಆಟಗಾರರೊಂದಿಗೆ ಅಭ್ಯಾಸವನ್ನು ಕೂಡ ನಡೆಸಿದ್ದಾರೆ.
ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಆರ್ ಅಶ್ವಿನ್ ಸೇರಿದಂತೆ ಭಾರತೀಯ ತಂಡದ ಕೆಲ ಆಟಗಾರರು ಮೊಹಾಲಿಯ ಐಎಸ್ ಬಿಂದ್ರಾ ಪಿಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಸಿದ್ಧತೆಯನ್ನು ಮಾಡಿದ್ದಾರೆ. ಶ್ರೀಲಂಕಾ ವಿರುದ್ಧ ಮಾರ್ಚ್ 4ರಿಂದ ಈ ಪಂದ್ಯ ಆರಂಭವಾಗಲಿದೆ.
ಟೀಮ್ ಇಂಡಿಯಾದ ಸದಸ್ಯರಾದ ಜಸ್ಪ್ರೀತ್ ಬೂಮ್ರಾ, ಶುಬ್ಮನ್ ಗಿಲ್, ಹನುಮ ವಿಹಾರಿ, ಕೆಸ್ ಭರತ್, ಉಮೇಶ್ ಯಾದವ್, ಕುಲ್ದೀಪ್ ಯಾದವ್ ಹಾಗೂ ಮಯಾಂಕ್ ಅಗರ್ವಾಲ್ ಚಂಡೀಗಢಕ್ಕೆ ಬಂದಿಳಿದಿದ್ದು ಮಂಗಳವಾರ ತಂಡದೊಂದಿಗೆ ಅಭ್ಯಾಸ ನಡೆಸಿದ್ದಾರೆ.
ಕೊಹ್ಲಿ ತಮ್ಮ 100 ನೇ ಟೆಸ್ಟ್ಗೆ ಸಕಲರೀತಿಯಲ್ಲೂ ಸಜ್ಜಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅನುಭವಿ ಆರ್ ಅಶ್ವಿನ್ ಜೊತೆಗೆ ನೆಟ್ಸ್ನಲ್ಲಿ ಕಠಿಣ ಸೆಶನ್ ಅನ್ನು ನಡೆಸುತ್ತಿರುವುದು ಕಂಡುಬಂದಿದೆ. ಸ್ಟಾರ್ ಬ್ಯಾಟರ್ನ ಮೈಲಿಗಲ್ಲು ಪಂದ್ಯದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಆದರೆ ಪಿಸಿಎ ಸ್ಟೇಡಿಯಂನಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡದ ಕಾರಣ ಕ್ರಿಕೆಟ್ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ವಿರಾಟ್ ಕೊಹ್ಲಿಯ ನೂರನೇ ಟೆಸ್ಟ್ ಪಂದ್ಯ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಗವಾಸ್ಕರ್ ಬಿಸಿಸಿಐ ನಿರ್ಧಾರಕ್ಕೆ ಬೇಸರವನ್ನು ವ್ಯಕ್ತಪಡಿಸುತ್ತಲೇ ಈ ರೀತಿಯ ನಿರ್ಧಾರ ಅಗತ್ಯವಾಗಿತ್ತು ಎಂಬ ಮಾತನ್ನು ಕೂಡ ಹೇಳಿಕೊಂಡಿದ್ದಾರೆ. ಈ ನಿರ್ಧಾರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಗತ್ಯದ ನಿರ್ಧಾರವೂ ಆಗಿದೆ ಎಂದು ಗವಾಸ್ಕರ್ ಹೇಳಿದ್ದಾರೆ. ಸ್ಪೋರ್ಟ್ಸ್ ಟುಡೇಗೆ ನೀಡಿದ ಪ್ರತಿಕ್ರಿಯೆ ಸಂದರ್ಭದಲ್ಲಿ ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಭಾರತ ಹಾಗೂ ಶ್ರೀಲಂಕಾ ತಮಡಗಳು ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದ್ದು ಕಳೆದ ಭಾನುವಾರ ಈ ಸರಣಿಯ ಅಂತಿಮ ಪಂದ್ಯ ಮುಕ್ತಾಯವಾಗಿದೆ. ಈ ಟಿ20 ಸರಣಿಯನ್ನು ಭಾರತ 3-0 ಅಂತರದಿಂದ ವಶಕ್ಕೆ ಪಡೆದಿದೆ. ಇದೀಗ ಎರಡೂ ತಮಡಗಳು ಕೂಡ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯಲಿದ್ದು ಈ ಪಂದ್ಯ ಮುಂದಿನ ಶುಕ್ರವಾರ ಮಾರ್ಚ್ 4ರಂದು ಆರಂಭವಾಗಲಿದೆ. ಟೆಸ್ಟ್ ಸರಣಿಯಲ್ಲಿ ಕೂಡ ಭಾರತ ತಂಡ ಫೇವರೀಟ್ ತಂಡವಾಗಿ ಕಣಕ್ಕಿಳಿಯುತ್ತಿದ್ದು ಆತಿಥೇಯ ತಂಡಕ್ಕೆ ಪ್ರವಾಸಿ ಲಂಕಾ ಯಾವ ರೀತಿಯ ಪ್ರತಿರೋಧವನ್ನು ಒಡ್ಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಭಾರತದ ಸಂಪೂರ್ಣಸಂಭಾವ್ಯ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಮಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಹನುಮ ವಿಹಾರಿ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ (ಫಿಟ್ನೆಸ್ ದೃಢಪಡಬೇಕಿದೆ) / ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್