For Quick Alerts
ALLOW NOTIFICATIONS  
For Daily Alerts
 

ಭಾರತ vs ವೆಸ್ಟ್ ಇಂಡೀಸ್: ಚೆನ್ನಾಗಿ ‌ಆಡಿದ್ರೂ ಅವಕಾಶ ಸಿಗದೇ ಕಡೆಗಣಿಸಲ್ಪಟ್ಟ ಭಾರತದ 5 ಆಟಗಾರರು

India Vs West Indies: 5 deserved players who didnt pick in Indias squad

ಸದ್ಯ ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಹರಿಣಗಳ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಭಾಗವಹಿಸಿದ ಟೀಮ್ ಇಂಡಿಯಾ ಎರಡೂ ಸರಣಿಗಳಲ್ಲಿಯೂ ಕೂಡ ಹೀನಾಯವಾಗಿ ಸೋಲುವುದರ ಮೂಲಕ ಮುಖಭಂಗಕ್ಕೊಳಗಾಗಿದೆ. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಸೋತಿರುವ ಟೀಮ್ ಇಂಡಿಯಾ ದೊಡ್ಡ ಮಟ್ಟದ ಟೀಕೆಗಳನ್ನು ಎದುರಿಸುತ್ತಿದ್ದು, ಇದೀಗ ಮುಂಬರುವ ಫೆಬ್ರವರಿ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿಯೇ ಸೆಣಸಾಟ ನಡೆಸಲಿದೆ.

ಹೌದು, ವೆಸ್ಟ್ ಇಂಡೀಸ್ ಭಾರತ ಪ್ರವಾಸವನ್ನು ಕೈಗೊಳ್ಳುತ್ತಿದ್ದು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಹಾಗೂ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸಲಿದೆ. ಫೆಬ್ರವರಿ 6ರಂದು ಇತ್ತಂಡಗಳ ನಡುವೆ ನಡೆಯಲಿರುವ ಪ್ರಥಮ ಏಕದಿನ ಪಂದ್ಯದ ಮೂಲಕ ಸೆಣಸಾಟ ಆರಂಭವಾಗಲಿದ್ದು, ಫೆಬ್ರವರಿ 20ರಂದು ನಡೆಯಲಿರುವ ಇತ್ತಂಡಗಳ ನಡುವಿನ ಅಂತಿಮ ಟಿ ಟ್ವೆಂಟಿ ಪಂದ್ಯದ ಮೂಲಕ ವೆಸ್ಟ್ ಇಂಡೀಸ್ ಟೀಮ್ ಇಂಡಿಯಾ ಪ್ರವಾಸವನ್ನು ಮುಗಿಸಲಿದೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ರೋಹಿತ್ ಶರ್ಮಾ ಅವರೇ ವಹಿಸಿಕೊಳ್ಳಲಿದ್ದು, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಇದೀಗ ಫಿಟ್ ಆಗಿದ್ದಾರೆ.

ಇನ್ನು ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ ಟ್ವೆಂಟಿ ಸರಣಿಗಳಿಗೆ ಟೀಮ್ ಇಂಡಿಯಾವನ್ನು ಜನವರಿ 26ರಂದು ಪ್ರಕಟಿಸಿದೆ. ಹೀಗೆ ಬಿಸಿಸಿಐ ಪ್ರಕಟಿಸಿರುವ ತಂಡಗಳಲ್ಲಿ ಕೆಲ ಪ್ರತಿಭಾವಂತ ಆಟಗಾರರಿಗೆ ಆಡುವ ಅವಕಾಶವನ್ನು ನೀಡಿಲ್ಲ ಎಂದು ನೆಟ್ಟಿಗರು ಹಾಗೂ ಕ್ರೀಡಾಭಿಮಾನಿಗಳು ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೌದು, ಉತ್ತಮ ಪ್ರದರ್ಶನವನ್ನು ನೀಡಿದ್ದರೂ ಸಹ ಈ ಕೆಳಕಂಡ ಐವರು ಆಟಗಾರರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಲ್ಲಿ ಬಿಸಿಸಿಐ ಅವಕಾಶವನ್ನು ನೀಡಿಲ್ಲ ಎಂಬ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿವೆ.

1. ಶಾರುಖ್ ಖಾನ್

1. ಶಾರುಖ್ ಖಾನ್

ಸದ್ಯ ಟೀಮ್ ಇಂಡಿಯಾಗೆ ಬೇಕಾಗಿರುವ ಫಿನಿಷರ್ ಸ್ಥಾನವನ್ನು ತುಂಬಬಲ್ಲಂತಹ ಅರ್ಹತೆ ಇರುವ ಶಾರುಖ್ ಖಾನ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಆಯ್ಕೆ ಮಾಡದೇ ಇರುವುದು ಅಚ್ಚರಿಯನ್ನು ಮೂಡಿಸಿದೆ. ತಮಿಳುನಾಡಿನ ಈ ಆಟಗಾರ ಈ ವರ್ಷದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿ ಮಿಂಚಿದ್ದಾರೆ. ಸೈಯದ್ ಮುಶ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಅಂತಿಮ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ ತಮಿಳುನಾಡು ಮೂರನೇ ಬಾರಿ ಟ್ರೋಫಿ ಎತ್ತಿ ಹಿಡಿಯುವಂತೆ ಮಾಡಿದ ಶಾರುಖ್ ಖಾನ್ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂಬ ದೊಡ್ಡ ಸುದ್ದಿ ಇತ್ತು. ಆದರೆ ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಮಿಂಚಿದ ಈ ಪ್ರತಿಭೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಆಡುವ ಅವಕಾಶವನ್ನು ಬಿಸಿಸಿಐ ನೀಡದೇ ಇರುವುದು ಸದ್ಯ ಕ್ರೀಡಾಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ.

2. ರಿಷಿ ಧವನ್

2. ರಿಷಿ ಧವನ್

2016ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಿಷಿ ಧವನ್ ಆ ಪಂದ್ಯದಲ್ಲಿ ಕೇವಲ ಒಂದೇ ಒಂದು ವಿಕೆಟ್ ಪಡೆದು ನೀರಸ ಪ್ರದರ್ಶನ ನೀಡಿದ್ದರು. ಹಾಗೂ ಉತ್ತಮ ಪ್ರದರ್ಶನ ನೀಡದ ಕಾರಣ ರಿಷಿ ಧವನ್ ಅವರನ್ನು ತಂಡದಿಂದ ಕೈಬಿಡಲಾಯಿತು. ಇನ್ನು ಅದೇ ವರ್ಷ ಜಿಂಬಾಬ್ವೆ ವಿರುದ್ಧದ ಟಿ ಟ್ವೆಂಟಿ ಪಂದ್ಯದಲ್ಲಿ ಭಾಗವಹಿಸಿದ್ದ ರಿಷಿ ಧವನ್ 4 ಓವರ್ ಬೌಲಿಂಗ್ ಮಾಡಿ 42 ರನ್ ನೀಡಿ ಕೇವಲ ಒಂದೇ ಒಂದು ವಿಕೆಟ್ ಪಡೆದು ಮಂಕಾಗಿದ್ದರು. ಹೀಗೆ ಅಂತರರಾಷ್ಟ್ರೀಯ ಅವಕಾಶ ಸಿಕ್ಕಾಗ ಕಳಪೆ ಪ್ರದರ್ಶನ ನೀಡಿದ್ದ ರಿಷಿ ಧವನ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಹಾಗೂ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಕೂಡ ದ್ವಿತೀಯ ಸ್ಥಾನವನ್ನು ಪಡೆದು ಮಿಂಚಿದ್ದಾರೆ. ಹೌದು, ರಿಷಿ ಧವನ್ ಈ ವಿಜಯ್ ಹಜಾರೆ ಟ್ರೋಫಿಯಲ್ಲಿ 458 ರನ್ ಗಳಿಸುವುದರ ಜೊತೆಗೆ 17 ವಿಕೆಟ್ ಪಡೆದು ಮಿಂಚಿದ್ದರು. ಹೀಗೆ ದೇಸಿ ಟೂರ್ನಿಗಳಲ್ಲಿ ಮಿಂಚಿದ್ದ ರಿಷಿ ಧವನ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿಗಳಿದ್ದವು. ಆದರೆ ಬಿಸಿಸಿಐ ಮಾತ್ರ ರಿಷಿ ಧವನ್ ಅವರಿಗೆ ಮಣೆ ಹಾಕುವ ಕೆಲಸಕ್ಕೆ ಕೈಹಾಕಲಿಲ್ಲ.

3. ರಾಹುಲ್ ಚಹರ್

3. ರಾಹುಲ್ ಚಹರ್

2019ರಲ್ಲಿ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಹುಲ್ ಚಹರ್ ಕಳೆದ ವರ್ಷ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ಕೂಡಾ ಸ್ಥಾನ ಪಡೆದುಕೊಂಡಿದ್ದರು. ಹೀಗೆ ಶ್ರೀಲಂಕಾ ವಿರುದ್ಧದ ಒಂದೇ ಒಂದು ಏಕದಿನ ಪಂದ್ಯದಲ್ಲಿ ಕಣಕ್ಕಿಳಿದು 3 ವಿಕೆಟ್ ಪಡೆದು ಮಿಂಚಿದ್ದ ರಾಹುಲ್ ಚಹರ್ ನಂತರ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅನುಭವಿ ಯುಜುವೇಂದ್ರ ಚಹಲ್ ಬದಲು ಸ್ಥಾನವನ್ನು ಪಡೆದುಕೊಂಡಿದ್ದರು. ಹಾಗೂ ಈ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕೇವಲ ಒಂದೇ ಒಂದು ಪಂದ್ಯವನ್ನಾಡಿದ ರಾಹುಲ್ ಚಹರ್ ಯಾವುದೇ ವಿಕೆಟ್ ಪಡೆಯದೇ ಹೆಚ್ಚು ರನ್ ನೀಡಿದರು. ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಯಾವುದೇ ಸರಣಿಗೆ ಆಯ್ಕೆಯಾಗದ ರಾಹುಲ್ ಚಹರ್ ಇದುವರೆಗೂ ಆಡಿರುವ 6 ಪಂದ್ಯಗಳ ಪೈಕಿ 7 ವಿಕೆಟ್ ಪಡೆದಿದ್ದಾರೆ. ಹೀಗೆ ತಂಡದಲ್ಲಿ ಕಳೆದ ಸರಣಿಗಳಲ್ಲಿ ಸ್ಥಾನ ಸಿಗದೇ ಇದ್ದ ರಾಹುಲ್ ಚಹಾರ್ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆಯ್ಕೆಗಾರರು ಕುಲ್ ದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು ರಾಹುಲ್ ಚಹರ್ ಅವರಿಗೆ ಸ್ಥಾನ ನೀಡಲು ಮುಂದಾಗಲಿಲ್ಲ.

4. ವೆಂಕಟೇಶ್ ಅಯ್ಯರ್ ( ಏಕದಿನ )

4. ವೆಂಕಟೇಶ್ ಅಯ್ಯರ್ ( ಏಕದಿನ )

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಮಿಂಚಿದ ವೆಂಕಟೇಶ್ ಅಯ್ಯರ್ ಏಕಾಏಕಿ ಎಲ್ಲರ ಗಮನವನ್ನು ಸೆಳೆದರು. ಹೀಗೆ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ ವೆಂಕಟೇಶ್ ಅಯ್ಯರ್ ವೇಗವಾಗಿ ಅಂತರ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಅವಕಾಶವನ್ನು ಕೂಡ ಪಡೆದುಕೊಂಡರು. ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ ಮೂಲಕ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವೆಂಕಟೇಶ್ ಅಯ್ಯರ್ ಇತ್ತೀಚಿಗಷ್ಟೆ ದಕ್ಷಿಣ ಆಫ್ರಿಕಾ ವಿರುದ್ಧದ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಕೂಡ ಭಾಗವಹಿಸಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ 2 ಏಕದಿನ ಪಂದ್ಯಗಳ ಪೈಕಿ ಕೇವಲ 24 ರನ್ ಗಳಿಸಿದ ವೆಂಕಟೇಶ್ ಅಯ್ಯರ್ ಇದೀಗ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೌದು, ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಭಾಗವಹಿಸಲಿರುವ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ವೆಂಕಟೇಶ್ ಅಯ್ಯರ್ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡೇ ಎರಡು ಏಕದಿನ ಪಂದ್ಯಗಳ ಕಳಪೆ ಪ್ರದರ್ಶನದಿಂದಾಗಿ ಇದೀಗ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಥಾನ ನೀಡದೆ ಇರುವುದರ ಕುರಿತು ಕೆಲ ಕ್ರಿಕೆಟ್ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

5. ಅಕ್ಷರ್ ಪಟೇಲ್

5. ಅಕ್ಷರ್ ಪಟೇಲ್

ಭಾರತದ ಪ್ರಮುಖ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಏಕದಿನ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಹೀಗೆ 4 ವರ್ಷಗಳ ಕಾಲ ಭಾರತ ಏಕದಿನ ತಂಡದ ಸದಸ್ಯನಾಗಿದ್ದ ಅಕ್ಷರ್ ಪಟೇಲ್ 38 ಪಂದ್ಯಗಳನ್ನಾಡಿ 45 ವಿಕೆಟ್ ಪಡೆದಿದ್ದರು ಹಾಗೂ 138 ರನ್‌ಗಳನ್ನೂ ಸಹ ಕಲೆ ಹಾಕಿದ್ದರು. ಆದರೆ 2017ರಲ್ಲಿ ಆತನಿಗಿಂತ ಉತ್ತಮ ಪ್ರದರ್ಶನ ನೀಡುತ್ತಿದ್ದ ರವೀಂದ್ರ ಜಡೇಜಾಗೆ ಮಣೆ ಹಾಕಿದ ಬಿಸಿಸಿಐ ಅಕ್ಷರ್ ಪಟೇಲ್ ಅವರನ್ನು ಭಾರತ ಏಕದಿನ ತಂಡದಿಂದ ಹೊರಗಿಟ್ಟಿತು. ಹೀಗೆ ತಂಡದಿಂದ ಹೊರಬಿದ್ದ ಅಕ್ಷರ್ ಪಟೇಲ್ ಇತ್ತೀಚೆಗಿನ ದಿನಗಳಲ್ಲಿ ತಮ್ಮ ಬೌಲಿಂಗ್ ಗುಣಮಟ್ಟವನ್ನು ಹೆಚ್ಚಿಸಿಕೊಂಡಿದ್ದು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಯಲ್ಲಿ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಅದರಲ್ಲಿಯೂ ರವೀಂದ್ರ ಜಡೇಜಾ ಗಾಯದ ಸಮಸ್ಯೆಗೊಳಗಾದ ಕಾರಣ ಅಕ್ಷರ್ ಪಟೇಲ್ ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ಸಿಗುವುದು ಖಚಿತ ಎಂದು ಊಹಿಸಲಾಗಿತ್ತು. ಆದರೆ ಅಕ್ಷರ್ ಪಟೇಲ್ ಕೇವಲ ಟಿ ಟ್ವೆಂಟಿ ತಂಡಕ್ಕೆ ಆಯ್ಕೆಯಾಗಿದ್ದು ಏಕದಿನ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

Story first published: Saturday, January 29, 2022, 11:32 [IST]
Other articles published on Jan 29, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+