
ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ಉತ್ತಮ ಮಟ್ಟದಲ್ಲಿತ್ತು. ಬೌಲಿಂಗ್ ವಿಭಾಗವೂ ಸುಧಾರಣೆ ಕಂಡಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಭಾರತದ ಫೀಲ್ಡಿಂಗ್ ಮಾತ್ರ ಸಾಕಷ್ಟು ಕಳಪೆಯಾಗಿತ್ತು. ಅತ್ಯುತ್ತಮ ಆಟಗಾರರು ಫೀಲ್ಡರ್ಗಳು ಕೂಡ ಆಸ್ಟ್ರೇಲಿಯಾ ಅಂಗಳದಲ್ಲಿ ಫೀಲ್ಡಿಂಗ್ ಮಾಡುವ ವೇಳೆಯಲ್ಲಿ ಎಡವಿದ್ದಾರೆ.
ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಫೀಲ್ಡರ್ ಎನಿಸಿಕೊಂಡ ಮೊಹಮ್ಮದ್ ಕೈಫ್ ಟೀಮ್ ಇಂಡಿಯಾದ ಕಳಪೆ ಫೀಲ್ಡಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟೀಮ್ ಇಂಡಿಯಾದ ಫೀಲ್ಡಿಂಗ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಮಹತ್ವದ ಟೂರ್ನಿಗಳಲ್ಲಿ ಈ ರೀತಿಯ ಫೀಲ್ಡಿಂಗ್ ಮಾಡಿದರೆ ಪಂದ್ಯವನ್ನೇ ಕಳೆದುಕೊಳ್ಳಬಹುದು ಎಂದಿದ್ದಾರೆ.
"ಅತಿಯಾದ ಡ್ರಾಪ್ ಕ್ಯಾಚ್ಗಳು ಹಾಗೂ ಮಿಸ್ ಫೀಲ್ಡ್ಗಳು ಆಟದ ಭಾಗವಾಗಬಾರದು. ಅವರು ಈಗ ಬಹಳವಾಗಿ ಈ ತಪ್ಪನ್ನು ಎಸಗುತ್ತಿದ್ದಾರೆ. ಮುಂಬರುವ ಅಕ್ಟೋಬರ್ ತಿಂಗಳಿನಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕಪ್ ಗೆಲ್ಲಬೇಕಿದೆ. ಆದರೆ ಈ ರೀತಿ ಕಳಪೆ ಫೀಲ್ಡಿಂಗ್ ಮಾಡಿದರೆ ನೀವು ಮಹತ್ವದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದೀರಿ" ಎಂದು ಸೋನಿ ಸಿಕ್ಸ್ ಚಾನೆಲ್ನಲ್ಲಿ ಮಾತನಾಡುತ್ತಾ ಮೊಹಮ್ಮದ್ ಕೈಫ್ ಪ್ರತಿಕ್ರಿಯಿಸಿದ್ದಾರೆ.
ಫೀಲ್ಡರ್ಗಳ ಕಡೆಯಿಂದ ಉತ್ತಮ ಸಾಥ್ ದೊರೆಯದೆ ಇದ್ದರೆ ಯುವ ಬೌಲರ್ಗಳ ಪಾಲಿಗೆ ಅದು ಕಠಿಣ ಸಂದರ್ಭವನ್ನು ಉಂಟುಮಾಡಲಿದೆ ಎಂದು ಕೈಫ್ ಹೇಳಿದ್ದಾರೆ. ಪಂದ್ಯದ ಸಂದರ್ಭದಲ್ಲಿ ಫೀಲ್ಡರ್ಗಳು ಕ್ಯಾಚ್ ಕೈಚೆಲ್ಲಿದರೆ ಅಭ್ಯಾಸದ ಸಂದರ್ಭದಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ ತಮ್ಮ ಆಟದ ದಿನಗಳನ್ನು ಈ ಸಂದರ್ಭದಲ್ಲು ಕೈಫ್ ನೆನಪಿಸಿಕೊಂಡರು.
ಈಗಿನ ಭಾರತ ತಂಡ ಯುವ ಬೌಲರ್ಗಳನ್ನು ಹೊಂದಿದೆ. ನೀವು ಕ್ಯಾಚ್ಗಳನ್ನು ಕೈಚೆಲ್ಲಿದರೆ ಆ ಬೌಲರ್ಗಳು ಏನೂ ಹೇಳದೆ ಆಟದಲ್ಲಿ ಇದೊಂದು ಭಾಗ ಎಂದು ಮತ್ತೆ ಬೌಲಿಂಗ್ ಮಾಡಲು ತೆರಳುತ್ತಾರೆ. ಆದರೆ ಕ್ಯಾಚ್ಗಳನ್ನು ಕೈಚೆಲ್ಲುವುದು ಆಟದ ಭಾಗವಲ್ಲ. ಅಗರ್ಕರ್, ಶ್ರೀನಾಥ್, ಝಹೀರ್ ಖಾನ್ ಅವರಂತಾ ಬೌಲರ್ಗಳು ಬೌಲಿಂಗ್ ಮಾಡುವ ವೇಳೆ ಕ್ಯಾಚ್ ಕೈಚೆಲ್ಲಿದರೆ ಅವರು ಫೀಲ್ಡರ್ಗಳತ್ತ ದುರುಗುಟ್ಟಿ ನೋಡುತ್ತಿದ್ದರು. ಆದ ಕಾರಣ ನಾವು ಅಭ್ಯಾಸದ ಸಂದರ್ಭದಲ್ಲಿ ಒಂದೆರಡು ಗಂಟೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೆವು ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.