ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟ್ ಆಟಗಾರರು ಮಾಡಿದ ಸಾಧನೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಗೌರವ ಸಲ್ಲಿಸಿತು. ಈ ವೇಳೆ ಹಲವು ಆಟಗಾರರ ಸಾಧನೆಗೆ ಪುರಸ್ಕಾರವನ್ನು ನೀಡಲಾಯಿತು. ಟೀಮ್ ಇಂಡಿಯಾ ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತು. ಭಾರತ ತಂಡದ ಭರವಸೆಯ ಆಟಗಾರ ಸಂಜು ಸ್ಯಾಮ್ಸನ್ ಈ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದರು. ಪರಿಣಾಮ ಅವರಿಗೆ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಲಭಿಸಿತು. ಭಾನುವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಸಹ ಸನ್ಮಾನಿಸಲಾಯಿತು.
ಸಂಜು ಸ್ಯಾಮ್ಸನ್ ಈ ವೇಳೆ ಮಾತನಾಡಿ, ಭಾರತದಲ್ಲಿ ಪ್ರತಿಭಾವಂತ ಆಟಗಾರರಿಗೆ ಕೊರತೆ ಇಲ್ಲ. ಮುಂಬರುವ ದಿನಗಳಲ್ಲಿ ಭಾರತ ಇಂತಹ ಸಾಧನೆಯನ್ನು ಪುನರಾವರ್ತಿಸಬಹುದು ಎಂದು ತಿಳಿಸಿದ್ದಾರೆ.
ಭಾರತದಲ್ಲಿರುವ ಆಟಗಾರರನ್ನು ಗಮನಿಸಿದರೆ, ಭಾರತವು ಮುಂದಿನ ದಿನಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಹೆಚ್ಚು ಯಶಸ್ಸು ಸಾಧಿಸಲಿದೆ ಎಂದು ಹೇಳಿದ್ದಾರೆ.

ಭಾರತ ಕಳೆದ ಎರಡು ವರ್ಷಗಳಲ್ಲಿ ಒಟ್ಟು 6 ಐಸಿಸಿ ವಿಶ್ವಕಪ್ ಗೆದ್ದು ಸಾಧನೆ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ತಂಡವು ಐಸಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್, ಐಸಿಸಿ ಅಂಡರ್ 19 ಪುರುಷರ ಏಕದಿನ ವಿಶ್ವಕಪ್, ಐಸಿಸಿ ಮಹಿಳಾ ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಐಸಿಸಿ ಪುರುಷರ ಟಿ20 ವಿಶ್ವಕಪ್ನಂತಹ ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದೆ.

ಟೀಮ್ ಇಂಡಿಯಾದ ಪರ ಆರಂಭಿಕ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆಯುವಲ್ಲಿ ವಿಫಲರಾಗಿದ್ದ ಸಂಜು ಸ್ಯಾಮ್ಸನ್ ಅವರಿಗೆ ಮಹತ್ವದ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ನೀಡಲಾಯಿತು. ಇವರು ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 80ರ ಸರಾಸರಿಯಲ್ಲಿ 321 ರನ್ ಸಿಡಿಸಿದ್ದಾರೆ. ಈ ವೇಳೆ ಇವರು ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದಾರೆ. ಕೋಲ್ಕತ್ತಾದಲ್ಲಿ ನಡೆದಿದ್ದ ಸೂಪರ್ 8 ಹಂತದ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಅಜೇಯ 97, ಮುಂಬೈನಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 89, ಅಹಮದಾಬಾದ್ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ 89 ರನ್ ಸಿಡಿಸಿದ್ದ ಸಂಜು ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಹ ನೀಡಲಾಗಿದೆ.

ಸಂಜು ಸ್ಯಾಮ್ಸನ್ ಅವರ ಆಟದ ಬಗ್ಗೆ ಮಾಜಿ ಕೋಚ್ ರಾಹುಲ್ ದ್ರಾವಿಡ್ ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 2024ರಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದಾಗಲೂ ಸಂಜು ತಂಡದ ಭಾಗವಾಗಿದ್ದರು. ಆದರೆ ಆ ಟೂರ್ನಿಯಲ್ಲಿ ಅವರಿಗೆ ಆಡಲು ಒಂದೇ ಒಂದು ಪಂದ್ಯ ಸಿಕ್ಕಿರಲಿಲ್ಲ. ಇನ್ನು ಈ ವಿಶ್ವಕಪ್ ಆರಂಭಕ್ಕೂ ಮುನ್ನ ಸಂಜು ಸ್ಯಾಮ್ಸನ್ ಅವರ ಫಾರ್ಮ್ ಗಮನಿಸಿದರೆ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಆಗಿತ್ತು.

ಆದರೆ ಇವರು ಸೂಪರ್ 8 ಹಂತದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಆಡಲು ಅವಕಾಶ ಸಿಕ್ಕಾಗ ಸೊಗಸಾಗಿ ಬ್ಯಾಟ್ ಮಾಡಿದರು. ಇವರು ನಾಕೌಟ್ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿದ್ದಾರೆ. ಸಂಜು ಆಟದ ಬಗ್ಗೆ ದ್ರಾವಿಡ್ ಅವರಿಗೆ ಕೇಳಿದಾಗ, ತುಂಬಾ ಕಠಿಣ ಪರಿಶ್ರಮದ ನಂತರ ಸಂಜು ಯಶಸ್ವಿಯಾಗುವುದನ್ನು ನೋಡುವುದು ಸಂತೋಷವಾಗಿದೆ. ಕಠಿಣ ಪರಿಶ್ರಮ ಯಾವಾಗಲೂ ಫಲ ನೀಡುತ್ತದೆ ಎಂದು ಹೇಳಿದ್ದಾರೆ. ರಾಹುಲ್ ದ್ರಾವಿಡ್ ಆರಂಭದ ದಿನಗಳಿಂದಲೂ ಸಂಜು ಅವರ ಬ್ಯಾಟಿಂಗ್ ಸುಧಾರಣೆಗೆ ಸಲಹೆ ನೀಡುತ್ತಲೇ ಇದ್ದಾರೆ.