ವರಿನಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ವನಿತೆಯರ ತಂಡ ಪ್ರಕಟವಾಗಿದೆ. ಜನವರಿ 6 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡವನ್ನು ಪ್ರಕಟಿಸಿದೆ. ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆರಂಭಿಕ ಸ್ಟಾರ್ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ ಅವರು ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಹರ್ಮನ್ಪ್ರೀತ್ ಕೌರ್ ಅವರ ಅನುಪಸ್ಥಿತಿಯಲ್ಲಿ ಮುನ್ನಡೆಸಲಿದ್ದಾರೆ.
ಸ್ಮೃತಿ ಮಂಧಾನ ನಾಯಕಿಯಾದರೆ, ಸ್ಪಿನ್ ಬೌಲಿಂಗ್ ಆಲ್ ರೌಂಡರ್ ದೀಪ್ತಿ ಶರ್ಮಾ ಉಪನಾಯಕಿಯಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಚೊಚ್ಚಲ ಏಕದಿನ ಸರಣಿಯಲ್ಲಿ ಮಿಂಚಿದ ಪ್ರತೀಕಾ ರಾವಲ್ ಅವರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಐರ್ಲೆಂಡ್ ಮತ್ತು ಭಾರತ ನಡುವಿನ ಏಕದಿನ ಸರಣಿಯ ಪಂದ್ಯಗಳು ಜನವರಿ 10, 12 ಮತ್ತು 15 ರಂದು ನಡೆಯಲಿವೆ. ಎಲ್ಲಾ ಪಂದ್ಯಗಳನ್ನು ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಾರತ ಮತ್ತು ಐರ್ಲೆಂಡ್ ನಡುವೆ 1993 ರಿಂದ ಇದುವರೆಗೆ ಒಟ್ಟು 13 ಏಕದಿನ ಪಂದ್ಯಗಳನ್ನು ಆಡಲಾಗಿದೆ. ಭಾರತ 12 ಗೆದ್ದಿದ್ದರೆ, 2002ರಲ್ಲಿ ಒಂದು ಪಂದ್ಯವನ್ನು ಕೈಬಿಡಲಾಗಿತ್ತು. ಎಂಟು ವರ್ಷಗಳ ಹಿಂದೆ ಭಾರತ ತಂಡವು ಕೊನೆಯ ಬಾರಿಗೆ ಐರ್ಲೆಂಡ್ ತಂಡವನ್ನು ಎದುರಿಸಿತ್ತು. ದೀಪ್ತಿ ಮತ್ತು ಪುನಮ್ ರಾವುತ್ ದಾಖಲೆಯ ಆರಂಭಿಕ ಜೊತೆಯಾಟದ ನೆರೆವಿನಿಂದ ಐರ್ಲೆಂಡ್ ತಂಡವನ್ನು ಭಾರತ 249 ರನ್ಗಳ ಬೃಹತ್ ಅಂತರದಿಂದ ಸೋಲಿಸಿತು.
ಸ್ಮೃತಿ ಮಂಧಾನ ಬ್ಯಾಟಿಂಗ್ ಮಾಡುವುದರ ಜೊತೆಗೆ ಅದ್ಭುತವಾಗಿ ನಾಯಕತ್ವದಲ್ಲಿಯೂ ಹೆಸರು ಮಾಡಿದ್ದಾರೆ. ಇದುವರೆಗೆ ಮಂಧಾನ ಕೇವಲ ಒಂದು ಬಾರಿ ಏಕದಿನ ಪಂದ್ಯಗಳಲ್ಲಿ ಭಾರತ ತಂಡಕ್ಕೆ ನಾಯಕತ್ವ ವಹಿಸಿದ್ದಾರೆ. ಅಕ್ಟೋಬರ್ 2024 ರಲ್ಲಿ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಬಾರಿಗೆ ಮಂಧಾನ ನಾಯಕತ್ವದಲ್ಲಿ ಭಾರತ 59 ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು.
ಸ್ಮೃತಿ ಮಂಧಾನ (ನಾಯಕಿ), ದೀಪ್ತಿ ಶರ್ಮಾ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ಉಮಾ ಚೆಟ್ರಿ (ವಿಕೆಟ್ಕೀಪರ್), ರಿಚಾ ಘೋಷ್ (ವಿಕೆಟ್ಕೀಪರ್), ತೇಜಲ್ ಹಸಬ್ನಿಸ್, ರಾಘ್ವಿ ಬಿಸ್ಟ್, ಮಿನ್ನು ಮಣಿ, ಪ್ರಿಯಾ ಮಿಶ್ರಾ, ತನುಜಾ ಕನ್ವರ್, ಟೈಟಾಸ್ ಸಾಧು , ಸೈಮಾ ಠಾಕೋರ್, ಸಯಾಲಿ ಸತ್ಘರೆ.