ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದು ಬೀಗಿದೆ. ಮಳೆ ನಡುವೆಯೂ ಕಾನ್ಪುರ ಟೆಸ್ಟ್ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡುವ ಮೂಲಕ ಡ್ರಾ ದಿಂದ ಪಾರಾಗಿದ್ದು ಮಾತ್ರವಲ್ಲದೆ 7 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಎದುರು ಭಾರತ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ರವಿಚಂದ್ರನ್ ಅಶ್ವಿನ್ ಅತ್ಯುತ್ತಮ ಪ್ರದರ್ಶನಕ್ಕಾಗಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನವಾದರೆ, ಜೈಸ್ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಭಾರತ 3 ವಿಕೆಟ್ಗಳನ್ನು ಕಳೆದುಕೊಂಡು ಬಾಂಗ್ಲಾದೇಶ ಟಾರ್ಗೆಟ್ ಮುಟ್ಟಿತ್ತು. ಟೀಮ್ ಇಂಡಿಯಾ ಪರ ಯಶಸ್ವಿ ಜೈಸಾಲ್ (51) ಅರ್ಧಶತಕ ಸಿಡಿಸಿ ಔಟಾದರು. ನಾಯಕ ರೋಹಿತ್ ಶರ್ಮಾ (8) ಮತ್ತು ಶುಭಮನ್ ಗಿಲ್ (6) ಬೇಗ ವಿಕೆಟ್ ಕಳೆದುಕೊಂಡರು. ಕೊನೆಯಲ್ಲಿ ವಿರಾಟ್ ಕೊಹ್ಲಿ (29) ಮತ್ತು ರಿಷಬ್ ಪಂತ್ (4) ವಿಕೆಟ್ ಉಳಿಸಿಕೊಂಡು ಭಾರತಕ್ಕೆ ಗೆಲುವು ತಂದು ಕೊಟ್ಟರು. ಬಾಂಗ್ಲಾದೇಶ ಪರ ಮೆಹಿದಿ ಹಸನ್ ಮಿರಾಜ್ 2 ಮತ್ತು ತೈಜುಲ್ ಇಸ್ಲಾಂ 1 ವಿಕೆಟ್ ಪಡೆದರು.
ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಎದುರು ಪ್ರತಿರೋಧ ತೋರಲಿಲ್ಲ. ಶಾದ್ಮನ್ ಇಸ್ಲಾಂ (50) ಅರ್ಧಶತಕ ಬಿಟ್ಟರೆ, ಉಳಿದ ಯಾವುದೇ ಬ್ಯಾಟರ್ಗಳು ತಂಡಕ್ಕೆ ಆಸರೆಯಾಗಲಿಲ್ಲ. ಕೊನೆಯ ದಿನದಾಟದಂದು ಬಾಂಗ್ಲಾದೇಶ ಕಾನ್ಪುರ ಟೆಸ್ಟ್ ಅನ್ನು ಡ್ರಾ ಮಾಡಿಕೊಳ್ಳಲು ಬಯಸಿತ್ತು. ಅದರಂತೆ ನಾಲ್ಲನೇ ದಿನದಾಟ ಅಂತ್ಯ ವಿಕೆಟ್ಗಳನ್ನು ಉಳಿಸಿಕೊಂಡಿತ್ತು.
ಆದರೆ, ಕೊನೆಯ ದಿನ ಟೀಮ್ ಇಂಡಿಯಾ ಬೌಲಿಂಗ್ ದಾಳಿಗೆ ಬಾಂಗ್ಲಾದೇಶದ ಬ್ಯಾಟರ್ಗಳು ತತ್ತರಿಸಿದರು. ಮಾಧ್ಯಮ ಕ್ರಮಾಂಕದಲ್ಲಿ ಅನುಭವಿ ಮುಶ್ಫಿಕರ್ ರಹೀಮ್ (37) ತಂಡದ ಸ್ಕೋರ್ ಹೆಚ್ಚಿಸಲು ಹೋರಾಟ ನಡೆಸಿ ಔಟಾದರು. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ಪರ ಅಶ್ವಿನ್, ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ 3 ವಿಕೆಟ್ ಉರುಳಿಸಿ ಸಂಭ್ರಮಿಸಿದರೆ, ಆಕಾಶ್ ದೀಪ್ 1 ವಿಕೆಟ್ ಪಡೆದರು.
ಕಾನ್ಪುರದಲ್ಲಿ ಆರಂಭವಾದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಕ್ಕೆ ಮಳೆ ಅಡ್ಡಿಯಾಗಿತ್ತು. ಪರಿಣಾಮ ಮೂರು ದಿನಗಳ ಕಾಲ ಆಟವನ್ನು ರದ್ದುಗೊಳಿಸಲಾಗಿತ್ತು. ಇದಾದ ನಂತರ ಸೋಂವಾರ ನಾಲ್ಕನೇ ದಿನದಂದು ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶವನ್ನು 233 ರನ್ಗಳಿಗೆ ಆಲೌಟ್ ಮಾಡಿತ್ತು. ಬಾಂಗ್ಲಾ ಪರ ಮೊಮಿನುಲ್ ಹಕ್ (107) ಅಜೇಯ ಶತಕ ಹೊಡೆದಿದ್ದರು.
ಇತ್ತ ಟೀಮ್ ಇಂಡಿಯಾ ತನ್ನ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ ಕಳೆದುಕೊಂಡು 285 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದರೊಂದಿಗೆ ಟೀಮ್ ಇಂಡಿಯಾ 52 ರನ್ಗಳ ಮುನ್ನಡೆ ಸಾಧಿಸಿತ್ತು. ಭಾರತ ಪರ ಯಶಸ್ವಿ ಜೈಸ್ವಾಲ್ (72), ಕೆಎಲ್ ರಾಹುಲ್ (63), ವಿರಾಟ್ ಕೊಹ್ಲಿ (47), ಶುಭಮನ್ ಗಿಲ್ (39) ಮತ್ತು ರೋಹಿತ್ ಶರ್ಮಾ (23) ಅಬ್ಬರಿಸಿದ್ದರು.