ಶ್ರೀಶಾಂತ್ ಒಬ್ಬರು ಟೀಮ್ ಇಂಡಿಯಾದಲ್ಲಿ ಇದ್ದಿದ್ರೆ ಕೊಹ್ಲಿ ನಾಯಕನಾಗಿ 3 ಬಾರಿ ವಿಶ್ವಕಪ್ ಗೆಲ್ಲುತ್ತಿದ್ದರಂತೆ!

ಶ್ರೀಶಾಂತ್, ಈ ಹೆಸರನ್ನು ಕೇಳಿದ ತಕ್ಷಣ ಎಲ್ಲರ ನೆನಪಿಗೆ ಬರುವುದು 2007ರ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟೀಂ ಇಂಡಿಯಾ ನೀಡಿದ್ದ 158 ರನ್ಗಳ ಗುರಿಯನ್ನು ಬೆನ್ನತ್ತಲು ಯತ್ನಿಸಿತ್ತು. ಪಂದ್ಯದ ಅಂತಿಮ ಓವರ್ನಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು 12 ರನ್ಗಳ ಅಗತ್ಯವಿತ್ತು ಹಾಗೂ ಕೈನಲ್ಲಿ ಕೇವಲ ಒಂದೇ ಒಂದು ವಿಕೆಟ್ ಉಳಿದಿತ್ತು ಮತ್ತು ಪಾಕಿಸ್ತಾನದ ಸ್ಪೋಟಕ ಆಟಗಾರ ಮಿಸ್ಬಾ ಉಲ್ ಹಕ್ ಸ್ಟ್ರೈಕ್ ಕಾಯ್ದುಕೊಂಡಿದ್ದರು. ಈ ಓವರ್ನ ಪ್ರಥಮ ಎಸೆತದಲ್ಲಿ ಯಾವುದೇ ರನ್ ಗಳಿಸದ ಮಿಸ್ಬಾ ಉಲ್ ಹಕ್ ಎರಡನೇ ಎಸೆತಕ್ಕೆ ಭರ್ಜರಿ ಸಿಕ್ಸರ್ ಬಾರಿಸಿದ್ದರು. ಪರಿಣಾಮವಾಗಿ 4 ಎಸೆತಗಳಿಗೆ 6 ರನ್ ಬಾರಿಸಬೇಕಿತ್ತು. ಜೋಗಿಂದರ್ ಶರ್ಮಾ ಎಸೆದ ಮೂರನೇ ಎಸೆತಕ್ಕೆ ಮಿಸ್ಬಾ ಉಲ್ ಹಕ್ ಸಿಕ್ಸರ್ ಬಾರಿಸಲು ಯತ್ನಿಸಿದ್ದರು. ಆದರೆ ಮಿಸ್ಬಾ ಉಲ್ ಹಕ್ ಬಾರಿಸಿದ್ದ ಸ್ಕೂಪ್ ಶಾಟ್ ವಿಫಲವಾಗಿತ್ತು, ಶ್ರೀಶಾಂತ್ ಚೆಂಡನ್ನು ಹಿಡಿದಿದ್ದರು ಮತ್ತು 5 ರನ್ಗಳಿಂದ ಪಂದ್ಯವನ್ನು ಗೆದ್ದ ಟೀಮ್ ಇಂಡಿಯಾ ಚೊಚ್ಚಲ ಟಿ ಟ್ವೆಂಟಿ ವಿಶ್ವಕಪ್ ಆವೃತ್ತಿಯಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಹೀಗೆ ಅಂದು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದರ ಹಿಂದಿನ ಕಾರಣಗಳಲ್ಲಿ ಶ್ರೀಶಾಂತ್ ಕೂಡ ಒಬ್ಬರು ಎಂದರೆ ತಪ್ಪಾಗಲಾರದು. ಬಹುಶಃ ಅಂದು ಶ್ರೀಶಾಂತ್ ಕ್ಯಾಚ್ ಕೈಚೆಲ್ಲಿದ್ದರೆ ಆ ಪಂದ್ಯ ಟೀಮ್ ಇಂಡಿಯಾ ಕೈ ತಪ್ಪುತ್ತಿತ್ತೇನೋ. ಹೀಗಾಗಿಯೇ ಶ್ರೀಶಾಂತ್ ಎಂದ ಕೂಡಲೇ ಪ್ರತಿಯೊಬ್ಬರಿಗೂ ವಿಶೇಷವಾಗಿ ಆ ಕ್ಯಾಚ್ ನೆನಪಿಗೆ ಬರುತ್ತದೆ.
ಆ ಟೂರ್ನಿಯಲ್ಲಿ ಬೌಲಿಂಗ್ ಮಾಡಿಯೂ ಮಿಂಚಿದ್ದ ಶ್ರೀಶಾಂತ್ ನಂತರ ನಡೆದ ಕೆಲ ಸರಣಿಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದರ ಮೂಲಕ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. 2011ರಲ್ಲಿ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಕೂಡ ಶ್ರೀಶಾಂತ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು ಮತ್ತು ಶ್ರೀಲಂಕಾ ವಿರುದ್ಧ ನಡೆದಿದ್ದ ಫೈನಲ್ ಪಂದ್ಯದಲ್ಲಿಯೂ ಕೂಡ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಫಿಕ್ಸಿಂಗ್ ಆರೋಪವನ್ನು ಎದುರಿಸಿದ ಶ್ರೀಶಾಂತ್ ಕ್ರಿಕೆಟ್ನಿಂದ ದೂರ ಸರಿದರು. ಸದ್ಯ ಇದೀಗ ಟೀಮ್ ಇಂಡಿಯಾ ಮತ್ತು ವಿಶ್ವಕಪ್ ಕುರಿತಾಗಿ ಮಾತನಾಡಿರುವ ಶ್ರೀಶಾಂತ್ ತಾವು ಇದ್ದಿದ್ದರೆ ತಂಡ 3 ಬಾರಿ ವಿಶ್ವಕಪ್ ಟೂರ್ನಿಗಳನ್ನು ಗೆಲ್ಲುತ್ತಿತ್ತು ಎಂಬ ಹೇಳಿಕೆಯನ್ನು ನೀಡಿದ್ದಾರೆ.

ನಾನು ತಂಡದಲ್ಲಿದ್ದರೆ ಕೊಹ್ಲಿ 3 ಬಾರಿ ವಿಶ್ವಕಪ್ ಗೆಲ್ಲುತ್ತಿದ್ದರು
"ವಿರಾಟ್ ಕೊಹ್ಲಿ ನಾಯಕತ್ವದ ತಂಡದಲ್ಲಿ ನಾನೇನಾದರೂ ಇದ್ದಿದ್ದರೆ, ಟೀಮ್ ಇಂಡಿಯಾ 2015, 2019 ಮತ್ತು 2021ರಲ್ಲಿ ವಿಶ್ವಕಪ್ ಟ್ರೋಫಿಯನ್ನು ಗೆಲ್ಲುತ್ತಿತ್ತು" ಎಂದು ಹೇಳಿಕೆಯನ್ನು ನೀಡುವುದರ ಮೂಲಕ ಶ್ರೀಶಾಂತ್ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಒಳ್ಳೆಯ ಅಭ್ಯಾಸ ನಡೆಸಿದರೆ ಎಲ್ಲವೂ ಸುಲಭ
ಇನ್ನೂ ಮುಂದುವರಿದು ಮಾತನಾಡಿರುವ ಶ್ರೀಶಾಂತ್ ತಾನು ಒಳ್ಳೆಯ ಯಾರ್ಕರ್ ಮತ್ತು ಉತ್ತಮ ಆಟವನ್ನು ಆಡಲು ಬೇಕಾದ ಅಗತ್ಯ ಅಭ್ಯಾಸವನ್ನು ನಡೆಸಿದ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಗತ್ಯವಾದ ಒಳ್ಳೆಯ ಅಭ್ಯಾಸವನ್ನು ನಡೆಸಿದರೆ ಎಲ್ಲವೂ ಸುಲಭ ಎಂದು ಶ್ರೀಶಾಂತ್ ಹೇಳಿಕೆ ನೀಡಿದ್ದಾರೆ ಹಾಗೂ ಯಾರ್ಕರ್ ಎಸೆಯುವುದರ ಬಗ್ಗೆ ಜಸ್ ಪ್ರೀತ್ ಬೂಮ್ರಾ ಅವರಿಗೆ ಕೇಳಿದರೆ ಅವರೂ ಸಹ ಸುಲಭ ಎಂದು ಮರು ಉತ್ತರಿಸಲಿದ್ದಾರೆ ಏಕೆಂದರೆ ಅವರು ಒಳ್ಳೆಯ ಅಭ್ಯಾಸ ನಡೆಸಿದ್ದಾರೆ ಎಂದು ಶ್ರೀಶಾಂತ್ ಹೇಳಿಕೆ ನೀಡಿದ್ದಾರೆ.

ಶ್ರೀಶಾಂತ್ ಅಂಕಿ ಅಂಶ
ಶ್ರೀಶಾಂತ್ 27 ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನಾಡಿ 87 ವಿಕೆಟ್ ಕಬಳಿಸಿದ್ದಾರೆ, 53 ಏಕದಿನ ಪಂದ್ಯಗಳ ಪೈಕಿ 75 ವಿಕೆಟ್ ಪಡೆದಿದ್ದಾರೆ ಹಾಗೂ 10 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳ ಪೈಕಿ 7 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications