
ಇಂಗ್ಲೆಂಡ್ನಲ್ಲಿ ಕೌಂಟಿ ಚಾಂಪಿಯನ್ಶಿಪ್ ಅಂತಿಮ ಘಟ್ಟದಲ್ಲಿದೆ. ಭಾರತದ ಆಟಗಾರ ಚೇತೇಶ್ವರ್ ಪೂಜಾರ ಸೇರಿದಂತೆ ಕೆಲ ಆಟಗಾರರು ಈ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇದೀಗ ಮತ್ತೋರ್ವ ಭಾರತೀಯ ಕ್ರಿಕೆಟಿಗ ಈ ಬಾರಿಯ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಆಡಲು ಸಜ್ಜಾಗಿದ್ದಾರೆ. ಕೌಂಟಿ ಚಾಂಪಿಯನ್ಶಿಪ್ ಋತುವಿನ ಕೊನೆಯ ಮೂರು ಪಂದ್ಯಗಳಿಗೆ ವಾರ್ವಿಕ್ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ಗೆ ಸಹಿ ಹಾಕಿದ್ದಾರೆ ಜಯಂತ್ ಯಾದವ್.
ಜಯಂತ್ ಯಾದವ್ ಭಾರತ ತಂಡದ ಸಹ ಆಟಗಾರ ಮೊಹಮ್ಮದ್ ಸಿರಾಜ್ ಅವರನ್ನು ಮುಂದಿನ ವಾರ ಎಡ್ಜ್ಬಾಸ್ಟನ್ನಲ್ಲಿರುವ ಕ್ಲಬ್ನಲ್ಲಿ ಸೇರಿಕೊಳ್ಳಲಿದ್ದಾರೆ. ಸೋಮರ್ಸೆಟ್ ವಿರುದ್ಧದ ಪಂದ್ಯದಲ್ಲಿ ಜಯಂತ್ ಯಾದವ್ ಕಣಕ್ಕಿಳಿಯುವ ಸಾಧ್ಯತೆಯಿದ್ದು ಸೆಪ್ಟೆಂಬರ್ 12ರಂದು ಪಂದ್ಯ ನಡೆಯಲಿದೆ.
ವಾರ್ವಿಕ್ಷೈರ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶವನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಜಯಂತ್ ಯಾದವ್ ಹೇಳಿದ್ದು ಇಂಗ್ಲಿಷ್ ಕೌಂಟಿ ಚಾಂಪಿಯನ್ಶಿಪ್ನಲ್ಲಿನ ಈ ಮೂರು ಪಂದ್ಯಗಳು ತಮ್ಮ ಆಟವನ್ನು ಸುಧಾರಿಸುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದಾರೆ. ಎಡ್ಜ್ಬಾಸ್ಟನ್ನ ಬಗ್ಗೆ ಉತ್ತಮ ವಿಷಯಗಳನ್ನು ಕೇಳಿದ್ದೇನೆ ಮತ್ತು ಅದನ್ನು ತವರಾಗಿ ವಾರ್ವಿಕ್ಶೈರ್ ಹೊಂದಿರುವುದು ನನ್ನ ಅದೃಷ್ಟ ಎಂದಿದ್ದಾರೆ ಜಯಂತ್ ಯಾದವ್.
"ಇದು ನನ್ನ ಮೊದಲ ಕೌಂಟಿ ಚಾಂಪಿಯನ್ಶಿಪ್ ಅನುಭವವಾಗಿದೆ. ಅಂತಿಮ ಮೂರು ಪಂದ್ಯಗಳಿಗೆ ತಂಡದೊಂದಿಗೆ ಸೇರಲು ನಾನು ಬಹಳಾ ಉತ್ಸುಕನಾಗಿದ್ದೇನೆ" ಎಂದು ಯಾದವ್ ವಾರ್ವಿಕ್ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ನ ಅಧಿಕೃತ ವೆಬ್ಸೈಟ್ನಲ್ಲಿ ಹೇಳಿರುವುದನ್ನು ಉಲ್ಲೇಖಿಸಲಾಗಿದೆ.
"ವಾರ್ವಿಕ್ಷೈರ್ಗೆ ಸೇರಲು ಬಯಸುತ್ತೀರಾ ಎಂದು ನನ್ನನ್ನು ಕೇಳಿದಾಗ ಅದು ನನಗೆ ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ. ಈ ವರ್ಷದ ಆರಂಭದಲ್ಲಿ ನನ್ನ ಆರನೇ ಟೆಸ್ಟ್ ಪಂದ್ಯವನ್ನು ಆಡಿದ ನಂತರ, ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳಿಗಾಗಿ ನನ್ನ ಆಟವನ್ನು ಸುಧಾರಿಸಲು ಈ ಮೂರು ಪಂದ್ಯಗಳು ಸಹಾಯ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ" ಎಂದು ಜಯಂತ್ ಯಾದವ್ ಹೇಳಿದ್ದಾರೆ. "ನಾನು ಎಡ್ಜ್ಬಾಸ್ಟನ್ನಲ್ಲಿ ಎಂದಿಗೂ ಆಡಿಲ್ಲ, ಆದರೆ ನಾನು ಉತ್ತಮ ವಿಷಯಗಳನ್ನು ಕೇಳಿದ್ದೇನೆ. ಈಗ ಹೋಮ್ಗ್ರೌಂಡ್ ಆಗಿ ಅಲ್ಲಿ ಆಡುವುದು ನನ್ನ ಪಾಲಿನ ಅದೃಷ್ಟ" ಎಂದು ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.