ಬೆಂಗಳೂರು, ಜೂ.26: ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ಹಾಗೂ ಭಾರತದ ತಂಡದ ನಾಯಕ ಎಂದರೆ ಎಲ್ಲರೂ ಗೌರವದಿಂದ ಕಾಣುತ್ತಾರೆ. ಎಂಎಸ್ ಧೋನಿ ಕೂಡಾ ಆನ್ ಫೀಲ್ಡ್ ನಲ್ಲಿ 'ಜಂಟಲ್ ಮ್ಯಾನ್', ಮುಂಬರುವ ನಾಯಕರಿಗೆ ಮಾದರಿಯಾಗಿದ್ದಾರೆ.
ಅದರೆ, 'ಜಂಟಲ್ ಮ್ಯಾನ್ ಗೇಮ್' ನಲ್ಲಿ ಕೋತಿಯಾಟ ಆಡುವ ನಾಯಕ ನಮಗೆ ಬೇಕಿಲ್ಲ ಎಂದು 1983ರ ವಿಶ್ವಕಪ್ ವಿಜೇತ ತಂಡದ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. [ಡ್ರೆಸಿಂಗ್ ರೂಮ್ ಕಲಹ, ಧೋನಿಗೆ ಹೆಚ್ಚಿದ ಮಾನಸಿಕ ಒತ್ತಡ]
ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ಏನೇ ವೈಮನಸ್ಯ ಇದ್ದರೂ ಆನ್ ಫೀಲ್ಡ್ ಮುಖ ಸಿಂಡರಿಸುವುದು, ಪ್ರೇಕ್ಷಕರ ಮುಂದೆ ನಗೆಪಾಟಲಾಗುವುದು, ಡ್ರೆಸಿಂಗ್ ರೂಮಿನ ರಹಸ್ಯಗಳು ಹೊರ ಹಾಕುವುದು ಇದೆಲ್ಲ ಸಭ್ಯತೆಯ ಲಕ್ಷಣವಲ್ಲ.
ಟೆಸ್ಟ್ ಕ್ಯಾಪ್ಟನ್ ಆಗಿ ಕೊಹ್ಲಿ : ವಿರಾಟ್ ಕೊಹ್ಲಿ ಇನ್ನೂ ಪಳಗಬೇಕಿದೆ. ಈಗಲೇ 'ಆಗ್ರೇಸಿವ್ ಕ್ಯಾಪ್ಟನ್' ಎಂದು ಕೊಹ್ಲಿಯನ್ನು ನಾನು ಕರೆಯಲಾರೆ. ಆತ ಉತ್ತಮ ಆಟಗಾರ ಎಂದಿದ್ದಾರೆ. [ಅಂದು ಕಪಿಲ್ ಸಿಡಿಯದಿದ್ದರೆ ವಿಶ್ವಕಪ್ ದಕ್ಕುತ್ತಿರಲಿಲ್ಲ]
ಕ್ರಿಕೆಟ್ ಮೈದಾನದಲ್ಲಿ ಮನರಂಜನೆ ಬೇಕು ಎಂದು ಕುಣಿದು ಕುಪ್ಪಳಿಸುವುದು ಇತರೆ ಆಟಗಾರರನ್ನು ಮೂದಲಿಸುವುದು ಎಲ್ಲವೂ ಕ್ರಿಕೆಟ್ ಆಟಕ್ಕೆ ಕಳಂಕ ತರುತ್ತದೆ. ಇಂಥ ಆಚರಣೆ ಫುಟ್ಬಾಲ್ ಆಟಕ್ಕೆ ಸರಿ, ಕ್ರಿಕೆಟ್ ಗೆ ಒಳ್ಳೆಯದಲ್ಲ ಎಂದರು.
ಭಾರತಕ್ಕೆ ಎಲ್ಲಾ ರೀತಿಯಲ್ಲೂ ಗೌರವಯುತವಾದ ನಾಯಕರಾಗಿ ಇದ್ದವರೆಂದರೆ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ಎಂದರು. ಪಟೌಡಿ ನಂತರ ನಾನು ಧೋನಿ ನಾಯಕತ್ವ ನನಗೆ ಇಷ್ಟವಾಗಿದೆ ಎಂದು ಹೇಳಿದರು.
ವಿಶ್ವಕಪ್ ದಿನಾಚರಣೆ: ಭಾರತದ ಪರ 88 ಟೆಸ್ಟ್ ಹಾಗೂ 49ಏಕದಿನ ಪಂದ್ಯಗಳನ್ನಾಡಿರುವ ಕಿರ್ಮಾನಿ ಅವರು ವಿಶ್ವಕಪ್ ದಿನಾಚರಣೆ ಬೇಕು ಎಂದು ಆಗ್ರಹಿಸಿದ್ದಾರೆ. ವಿಶ್ವಕಪ್ 1983ರ ಅಂತಿಮ ಪಂದ್ಯದಲ್ಲಿ 14ರನ್ ಹಾಗೂ 1 ಕ್ಯಾಚ್ ಪಡೆದಿದ್ದರು.
ಜೂ.25ರಂದು ಕಪಿಲ್ ದೇವ್ ಅವರ 'ಡೆವಿಲ್' ಗಳು ಬಲಿಷ್ಠ ವೆಸ್ ಇಂಡೀಸ್ ತಂಡವನ್ನು 43 ರನ್ ಗಳಿಂದ ಮಣಿಸಿ ಲಾರ್ಡ್ಸ್ ಅಂಗಳದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿದ್ದರು. ಈ ಸವಿನೆನಪು ಶಾಶ್ವತವಾಗಿ ಉಳಿಯಬೇಕಾದರೆ 'ವಿಶ್ವಕಪ್ ದಿನಾಚರಣೆ' ಬೇಕು ಎಂದಿದ್ದಾರೆ.