ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಭಾನುವಾರ ಅಹಮದಾಬಾದ್ನಲ್ಲಿ ಟಿ20 ವಿಶ್ವಕಪ್ ಫೈನಲ್ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿ ಮೂರನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿತು. ಟೀಮ್ ಇಂಡಿಯಾ ಈ ಗೆಲುವು ದೇಶದಲ್ಲಿ ಸಂಭ್ರಮದ ವಾತಾವರಣಕ್ಕೆ ಮನೆ ಮಾಡಿತ್ತು. ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಸಹ ಈ ಗೆಲುವಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ.
ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯಗಳ ಸೋಲು ತಂಡವನ್ನು ಮುಜುಗರಕ್ಕೆ ಈಡುಮಾಡಿತ್ತು. ಟಿ20 ವಿಶ್ವಕಪ್ ಗೆದ್ದ ತಂಡ ಸಾಲು ಸಾಲು ಟೀಕೆಗಳಿಗೆ ಗುರಿಯಾಗಬೇಕಾಯಿತು. ಅಲ್ಲದೆ ತಂಡದ ಡ್ರೆಸ್ಸಿಂಗ್ ರೂಮ್ನಲ್ಲೂ ಎಲ್ಲವೂ ಸರಿಯಾಗಿ ಏನು ಇರಲಿಲ್ಲ. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇ ಏರಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ವಿಶ್ವಕಪ್ನಲ್ಲಿ ಭಾರತ 96 ರನ್ಗಳ ಜಯ ಸಾಧಿಸಿತು. ಈ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ಈ ಗೆಲುವಿನ ಶ್ರೇಯವನ್ನು ಇಬ್ಬರು ಮಾಜಿ ಆಟಗಾರರಿಗೆ ಅರ್ಪಿಸಿದ್ದಾರೆ.
ಟಿ20 ವಿಶ್ವಕಪ್ ಗೆಲುವನ್ನು ಭಾರತ ತಂಡದ ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ ಅವರಿಗೆ ಸಲ್ಲುತ್ತದೆ. ರಾಹುಲ್ ದ್ರಾವಿಡ್ ಅವರು ತಂಡವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದರು. ಇನ್ನು ಲಕ್ಷ್ಮಣ ಅವರ ಬೆವರ ಹನಿಯ ಪರಿಣಾಮವೇ ಟೀಮ್ ಇಂಡಿಯಾ ಇಂದು ದೊಡ್ಡ ಗೆಲುವು ದಾಖಲಿಸಲು ಸಾಧ್ಯವಾಗಿದೆ ಎಂದು ಗಂಭೀರ್ ತಿಳಿಸಿದ್ದಾರೆ.
ಅನೇಕ ಟೀಕೆಗಳನ್ನು ಎದುರಿಸಿಯೂ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ಅಜಿತ್ ಅಗರ್ಕರ್ ಹಾಗೂ ಜಯ್ ಭಾಯ್ ಅವರಿಗೆ ಧನ್ಯವಾದಗಳು. ಇವರು ತವರಿನಲ್ಲಿ ಟೆಸ್ಟ್ ಸರಣಿಯನ್ನು ಸೋತಾಗ ಕರೆ ಮಾಡಿ ಬೆಂಬಲವನ್ನು ಸೂಚಿಸಿದ್ದರು.
ತಂಡದ ಪ್ರದರ್ಶನ ಹಾಗೂ ಕೋಚ್ ಗೌತಮ್ ಜೊತೆಗಿನ ಸಂಬಂಧದ ಬಗ್ಗೆ ಸೂರ್ಯಕುಮಾರ್ ಯಾದವ್ ಸಹ ಮನ ಬಿಚ್ಚಿ ಮಾತನಾಡಿದ್ದಾರೆ. ನಾನು ಈ ಮೊದಲು ನಾಲ್ಕು ವರ್ಷ ಗೌತಮ್ ಭಾಯ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರಾಗಿದ್ದಾಗ ಆಡಿದ್ದೇನೆ. ನಾವು ಯಾವಾಗಲೂ ಗೆಲುವಿನ ಬಗ್ಗೆ ಮಾತುಕತೆ ನಡೆಸುತ್ತಿದ್ದೆವು. ನಮ್ಮ ಗುರಿ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ ಎಂದು ತಿಳಿಸಿದ್ದಾರೆ. ಇದು ಭಾರತದ ವೈಟ್-ಬಾಲ್ ಯುಗ ಎಂದು ನನಗನ್ನಿಸುವುದಿಲ್ಲ. ಒಂದು ವೇಳೆ ಇದು ನಮ್ಮದೇ ಯುಗವಾಗಿದ್ದರೆ, ತಂಡ ಮೂರು ಏಕದಿನ ಸರಣಿಗಳಲ್ಲಿ ನಾವು ಎರಡನ್ನು ಸೋಲುತ್ತಿರಲಿಲ್ಲ. ನಾನು ಯಾವಾಗಲೂ ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ ತಂಡಗಳನ್ನು ಆಯ್ಕೆ ಮಾಡಿದ್ದೇನೆ ಎಂದು ಸೂರ್ಯ ತಿಳಿಸಿದ್ದಾರೆ.