
ನವದೆಹಲಿ: ಭಾರತದ ದಂತಕತೆಗಳಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ ಸರ್ಕಾರ್ ಅವರಂಥ ಅನೇಕರಿಗೆ ಕೋಚಿಂಗ್ ನೀಡಿದ್ದ, ಮಾರ್ಗದರ್ಶಕರಾಗಿದ್ದ ವಸೂ ಪರಂಜಪೆ ಸೋಮವಾರ (ಆಗಸ್ಟ್ 30) ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮುಂಬೈ ತಂಡದ ಮಾಜಿ ಆಟಗಾರರಾಗಿ ಬಳಿಕ ಭಾರತೀಯ ಕ್ರಿಕೆಟ್ನ ಪ್ರಮುಖ ಕೋಚ್ ಆಗಿದ್ದ ವಸೂ ಪರಂಜಪೆ ಮುಂಬೈ ಮತ್ತು ಬರೋಡಾ ತಂಡ ಪ್ರತಿನಿಧಿಸಿ 29 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 785 ರನ್ ಗಳಿಸಿದ್ದರು. ಆದರೆ ತಾನು ಆಡಿದ್ದಕ್ಕಿಂತಲೂ ಅನೇಕ ದಂತಕತೆಗಳಿಗೆ ಒಂದು ಸ್ವರೂಪ ನೀಡಿದ ವಿಚಾರದಲ್ಲಿ ಪರಂಜಪೆ ಇನ್ನೂ ಮೇಲಕ್ಕೆ ನಿಲ್ಲುತ್ತಾರೆ.
ವಸೂ ಪರಂಜಪೆ ಅವರು ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ಸರ್ಕಾರ್, ಸಂಜಯ್ ಮಂಜ್ರೇಕರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ರೋಹಿತ್ ಶರ್ಮಾ ಸೇರಿದಂತೆ ಅನೇಕ ಕ್ರಿಕೆಟಿಗರ ವೃತ್ತಿ ಬದುಕು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
"ವಸೂ ಪರಾಂಜಪೆ ಅವರ ನಿಧನಕ್ಕೆ ನಿಜಕ್ಕೂ ದುಃಖವಾಗಿದೆ. ನಿಜವಾದ ಧನಾತ್ಮಕ ವೈಬ್ ಹೊಂದಿರುವ ಕ್ರಿಕೆಟ್ ವಿಚಾರದಲ್ಲಿ ಅವರೊಂದು ಒಂದು ಸಂಸ್ಥೆಯಾಗಿದ್ದರು. ಅಷ್ಟರ ಮಟ್ಟಿಗೆ ಅವರು ದೈತ್ಯ ಜ್ಞಾನಿಯಾಗಿದ್ದರು," ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ. ಕ್ರಿಕೆಟ್ ರಂಗದ ಅನೇಕರು ವಸೂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.