2024ರ ಐಸಿಸಿ ಟಿ20 ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡವು ನವದೆಹಲಿಯ ಪ್ರಧಾನಮಂತ್ರಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.
ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ 7, ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಆಗಮಿಸಿತು. ಈ ವೇಳೆ ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಇತರ ಆಟಗಾರರು ಸ್ಟೈಲ್ ಆಗಿ ತಲುಪಿದರು.

ಪ್ರಧಾನಿ ನರೇಂದ್ರ ಮೋದಿಯಿಂದ ಹ್ಯಾಂಡ್ಶೇಕ್ ಮತ್ತು ಅಪ್ಪುಗೆಯೊಂದಿಗೆ ಅದ್ಧೂರಿ ಸ್ವಾಗತ ಪಡೆದ ಟೀಮ್ ಇಂಡಿಯಾ ಆಟಗಾರರು ಮಾತುಕತೆ ನಡೆಸಿದರು. ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಂಡರು. ನಂತರ ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಸನ್ಮಾನಿಸಿ ಅಭಿನಂದಿಸಿದರು.
ಇದೇ ವೇಳೆ ಕೋಚ್ ಸ್ಥಾನದಿಂದ ಕೆಳಗಿಳಿಯುತ್ತಿರುವ ರಾಹುಲ್ ದ್ರಾವಿಡ್, ಇನ್ನು ಟಿ20 ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ವಿಶೇಷ ಮಾತುಕತೆ ನಡೆಸಿ, ಮುಂದಿನ ಜೀವನಕ್ಕೆ ಶುಭಹಾರೈಸಿದರು.

ಬಾರ್ಬಡೋಸ್ನಲ್ಲಿನ ಟಿ20 ವಿಶ್ವಕಪ್ ಗೆಲುವು ಮುಂದಿನ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರೇರಣೆಯನ್ನು ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಇನ್ನಷ್ಟು ಪ್ರಶಸ್ತಿ ಗೆಲ್ಲಲು ಭಾರತ ತಂಡವನ್ನು ಒತ್ತಾಯಿಸಿದರು.
ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಕ್ರಿಕೆಟ್ ತಂಡದ ಆಟಗಾರರು ವಿಶ್ವಕಪ್ ಅಭಿಯಾನವನ್ನು ಮೆಲುಕು ಹಾಕುತ್ತಾ ನಗುವನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ.
ಪ್ರಧಾನಿ ಬಲಗಡೆ ನಾಯಕ ರೋಹಿತ್ ಶರ್ಮಾ, ಉಪನಾಯಕ ಹಾರ್ದಿಕ್ ಪಾಂಡ್ಯ ಮತ್ತು ಇನ್ನುಳಿದ ಕುಳಿತಿದ್ದರೆ, ಎಡಗಡೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಮತ್ತು ಉಳಿದ ಆಟಗಾರರು ಕುಳಿತು ಮಾತನಾಡುತ್ತಿದ್ದರು.
ಪ್ರಧಾನಿ ಮೋದಿ ಅವರು ಆಟಗಾರರ ಸಾಧನೆಗಳನ್ನು ಆನಂದಿಸುತ್ತಿರುವಾಗ ನಗುತ್ತಿದ್ದರು. ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಸಭೆಯಲ್ಲಿ ಮಾತನಾಡಿದರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಧ್ಯಕ್ಷ ರೋಜರ್ ಬಿನ್ನಿ ಕೂಡ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಉಪಹಾರ ಸಭೆಯಲ್ಲಿ ಭಾಗವಹಿಸಿದ್ದರು.
ಭಾರತ ತಂಡವು ಪ್ರಧಾನಿ ನಿವಾಸದಿಂದ ಹೊರಟು ನವದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ. ಅಲ್ಲಿಂದ ಅವರು ತೆರೆದ ಬಸ್ ಮೆರವಣಿಗೆಗಾಗಿ ಮುಂಬೈಗೆ ತೆರಳಲಿದ್ದಾರೆ.
ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲು ಹೊರಟಾಗ ಜೆರ್ಸಿ ಮೇಲೆ "ಚಾಂಪಿಯನ್ಸ್' ಎಂದು ಬರೆದಿರುವ ಭಾರತ ತಂಡದ ಜೆರ್ಸಿಯನ್ನು ಧರಿಸಿದ್ದರು.
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ಶನಿವಾರ, ಜೂನ್ 29ರಂದು ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳಿಂದ ಸೋಲಿಸಿ ಭಾರತ ತಂಡ ಎರಡನೇ ಟಿ20 ವಿಶ್ವಕಪ್ ಕಿರೀಟವನ್ನು ಗೆದ್ದುಕೊಂಡಿತ್ತು.
ಆ ಬಳಿಕ ಭಾರತ ತಂಡದ ಆಟಗಾರರು ಮತ್ತು ತಂಡದ ಸಹಾಯಕ ಸಿಬ್ಬಂದಿಯು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉಪಹಾರ ಸೇವಿಸಿದರು. ಪ್ರಧಾನಿ ನಿವಾಸ ಭೇಟಿಯ ನಂತರ ಟೀಮ್ ಇಂಡಿಯಾ ಆಟಗಾರರು ಐಟಿಸಿ ಮೌರ್ಯ ಹೋಟೆಲ್ಗೆ ಮರಳಲಿದ್ದು, ಅಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದು ಮುಂಬೈನತ್ತ ಪ್ರಯಾಣ ಬೆಳೆಸಲಿದ್ದಾರೆ.
ಇದಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡವು ಗುರುವಾರ ಬೆಳಗ್ಗೆ 6:05ರ ಸುಮಾರಿಗೆ ನವದೆಹಲಿಗೆ ಬಂದಿಳಿಯಿತು. ಬಾರ್ಬಡೋಸ್ನಿಂದ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ತವರಿಗೆ ಹಿಂದಿರುಗಿದ ಬಳಿಕ ನೇರವಾಗಿ ದೆಹಲಿಯ ಐಟಿಸಿ ಮೌರ್ಯ ಹೋಟೆಲ್ಗೆ ತೆರಳಿತು. ಈ ವೇಳೆ ವಿಮಾನ ನಿಲ್ದಾಣ ಮತ್ತು ತಂಡವು ಸಾಗುವ ಮಾರ್ಗದುದ್ದಕ್ಕೂ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು.