ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ಭಾರತದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರತಿ ವರ್ಷಕ್ಕಿಂತ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿದೆ. ಭಾರತ ಬ್ರಿಟಿಷರ ಕಪಿ ಮುಷ್ಠಿಯಿಂದ ಬಿಡಿಸಿಕೊಂಡು 75 ವರ್ಷಗಳೇ ಕಳೆದು ಹೋಗಿದ್ದು, ದೇಶದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ. ಹಲವು ಮಹನಿಯರ ತ್ಯಾಗದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ ನಂತರದ ಭಾರತದಲ್ಲಿ ಹೆಚ್ಚು ಬದಲಾವಣೆಗಳು ಕಂಡು ಬಂದಿವೆ. ಇದರಲ್ಲಿ ಎಲ್ಲರ ಗಮನ ಸೆಳೆದಿದ್ದು ಕ್ರೀಡೆ. ಕ್ರಿಕೆಟ್ ದೃಷ್ಟಿಯಿಂದ ನೋಡಿದರೆ, ಈ ದಿನ ಹೆಚ್ಚು ಪಂದ್ಯಗಳು ನಡೆದಿಲ್ಲ. ಆದರೆ ಇಬ್ಬರು ಭಾರತೀಯ ಕ್ರಿಕೆಟಿಗರು ಈ ದಿನ ಹುಟ್ಟಿದ್ದಾರೆ.
ಈ ಇಬ್ಬರೂ ಸ್ಟಾರ್ ಕ್ರಿಕೆಟಿಗರ ಜನ್ಮದಿನಗಳನ್ನು ಭಾರತದ ಕ್ರೀಡಾ ಪ್ರೇಮಿಗಳು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳುವುದು ಕರ್ನಾಟಕದ ಕುವರ, ಭಾರತದ ಮಾಜಿ ಆಲ್ರೌಂಡರ್ ವಿಜಯ್ ಭಾರದ್ವಾಜ್ ಮತ್ತು ಮಾಜಿ ಮಹಿಳಾ ಕ್ರಿಕೆಟರ್ ಹೇಮಲತಾ ಕಲಾ. ಈ ಇಬ್ಬರೂ ಸ್ಟಾರ್ ಆಟಗಾರರು ಸ್ವಾತಂತ್ರ್ಯ ದಿನದಂದು ಜನಿಸಿದ್ದಾರೆ.

ವಿಜಯ್ ಭಾರದ್ವಾಜ್ 1975ರಲ್ಲಿ ಜನಿಸಿದ್ದು, ಚಿಕ್ಕಂದಿನಿಂದಲೇ ಕ್ರಿಕೆಟ್ ಮೇಲೆ ಅಪಾರ ಪ್ರೀತಿ. ಬ್ಯಾಟರ್ ಕಮ್ ಸ್ಪಿನ್ ಬೌಲರ್ ಆಗಿದ್ದ ಈ ಆಟಗಾರನ ಕ್ಷಮತೆ ಮೊದಲ ಸರಣಿಯಲ್ಲೇ ಬಹಿರಂಗವಾಗಿತ್ತು. ವಿಜಯ್ 1999 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನೈರೋಬಿಯಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಭಾರತವಲ್ಲದೆ ಕೀನ್ಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಆಡುತ್ತಿದ್ದವು. ಆ ಸರಣಿಯಲ್ಲಿ ವಿಜಯ್ ಅದ್ಭುತವಾಗಿ ಬೌಲಿಂಗ್ ಮಾಡಿ ಒಟ್ಟು 10 ವಿಕೆಟ್ ಪಡೆದು 89 ರನ್ ಗಳಿಸಿದ್ದರು.
ವಿಜಯ್ ಕನ್ನಡಕ ಹಾಕಿಕೊಂಡು ಆಡುತ್ತಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕನ್ನಡಕ ಧರಿಸಿ ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಇವರನ್ನು ಭಾರತೀಯ ಕ್ರಿಕೆಟ್ ತಂಡದ ಫ್ಯೂಚರ್ ಸ್ಟಾರ್ ಆಟಗಾರ ಎಂದು ಬಿಂಬಿಸಲಾಗಿತ್ತು. ಆದರೆ ವಿಜಯ್ ತಮ್ಮ ವೃತ್ತಿಜೀವನದಲ್ಲಿ ಭಾರತಕ್ಕಾಗಿ ಕೇವಲ ಮೂರು ಟೆಸ್ಟ್ ಮತ್ತು 10 ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
ವಿಜಯ್ಗೆ ಸ್ಲಿಪ್ ಡಿಸ್ಕ್ನ ಸಮಸ್ಯೆ ಬಹುವಾಗಿ ಕಾಡಿತು. ಕನ್ನಡಕ ತೆಗೆಯಲು ಆಪರೇಷನ್ ಮಾಡುವಂತೆ ಯಾರೋ ಸಲಹೆ ನೀಡಿದರು. ಆಪರೇಷನ್ ನಂತರ ಅವರ ದೃಷ್ಟಿ ಕಡಿಮೆಯಾಯಿತು. ಇದರಿಂದಾಗಿ ವಿಜಯ್ ಭಾರದ್ವಾಜ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಕೂಡ ಬೇಗ ಮುಗಿದು ಹೋಗಿತ್ತು.

ಹೇಮಲತಾ ಕಲಾ ಅವರು 15 ಆಗಸ್ಟ್ 1975 ರಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಜನಿಸಿದರು. ಅವರು ಭಾರತೀಯ ಮಹಿಳಾ ಕ್ರಿಕೆಟ್ನ ಪ್ರಮುಖ ಆಟಗಾರರಲ್ಲಿ ಒಬ್ಬರು.
ಹೇಮಲತಾ ಅವರು 1999 ರಿಂದ 2008 ರವರೆಗೆ ಭಾರತೀಯ ಮಹಿಳಾ ತಂಡಕ್ಕಾಗಿ 7 ಟೆಸ್ಟ್, 78 ಏಕದಿನ ಮತ್ತು ಒಂದು ಟಿ20 ಪಂದ್ಯವನ್ನು ಆಡಿದ್ದಾರೆ. ಹೇಮಲತಾ ತಮ್ಮ ಟೆಸ್ಟ್ ವೃತ್ತಿಜೀವನವನ್ನು 50 ಕ್ಕೂ ಹೆಚ್ಚು ರನ್ಗಳ ಸರಾಸರಿಯೊಂದಿಗೆ ಕೊನೆಗೊಳಿಸಿದರು. ಆದರೆ, ಏಕದಿನ ಪಂದ್ಯದಲ್ಲಿ ಅದೃಷ್ಟ ಇವರ ಕೈ ಹಿಡಯಲಿಲ್ಲ. ಅವರು 78 ಏಕದಿನ ಪಂದ್ಯಗಳಲ್ಲಿ 20 ರ ಸರಾಸರಿಯಲ್ಲಿ 1023 ರನ್ ಗಳಿಸಿದರು. ಅವರು 2005 ರಲ್ಲಿ ಮಹಿಳಾ ವಿಶ್ವಕಪ್ನಲ್ಲಿ ಫೈನಲ್ ತಲುಪಿದ ಭಾರತ ತಂಡದ ಭಾಗವಾಗಿದ್ದರು. 2021 ರಲ್ಲಿ, ಅವರಿಗೆ ಬಿಸಿಸಿಐ ಹೊಸ ಜವಾಬ್ದಾರಿಯನ್ನು ನೀಡಿತು. ಅವರನ್ನು ಹಿರಿಯ ಮಹಿಳಾ ಚಾಲೆಂಜರ್ ಟ್ರೋಫಿಗಾಗಿ ಭಾರತೀಯ ಬಿ ತಂಡದ ತರಬೇತುದಾರರನ್ನಾಗಿ ಆಯ್ಕೆ ಮಾಡಲಾಯಿತು. ಈ ಮೂಲಕ ಎರಡನೇ ಇನಿಂಗ್ಸ್ ಆರಂಭಿಸಿದರು.