
ನವದೆಹಲಿ, ಜೂನ್ 3: ಇಂಗ್ಲೆಂಡ್ನಲ್ಲಿ 2017ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಅನ್ನಿಸುವ ಆಸೆ ಗರಿಗೆದರಿಸಿತ್ತು. ಅದೂ ಬದ್ಧ ಎದುರಾಳಿ ತಂಡ ಪಾಕಿಸ್ತಾನ ವಿರುದ್ಧ ಭಾರತ ಅಂದು ಫೈನಲ್ ಪಂದ್ಯಕ್ಕಾಗಿ ಮೈದಾನಕ್ಕಿಳಿದಿತ್ತು. ಆದರೆ ಆ ಪಂದ್ಯದಲ್ಲಿ ಭಾರತ ಬರೋಬ್ಬರಿ 180 ರನ್ಗಳಿಂದ ಸೋತಿತು. ಅಲ್ಲಿಗೆ ಕತೆ ಫಿನಿಷ್!
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಭಾರತದ ರಸ್ತೆಗಳಲ್ಲಿ ಟೈರಿಗೆ ಬೆಂಕಿ ಹತ್ತಿಕೊಂಡಿತು. ಸಿಟಿಗಳಲ್ಲಿದ್ದ ಅನೇಕ ಮನೆಗಳ ಕಿಟಕಿ ಗಾಜುಗಳು ಪುಡಿಯಾದವು. ಸಾಲದ್ದಕ್ಕೆ ಒಂದಿಷ್ಟು ಮಂದಿಯ ಮನೆಯ ಟಿವಿಗಳೂ ಸಿಟ್ಟಿಗೆ ಅಹುತಿಯಾದವು. ಇಷ್ಟೆಲ್ಲ ಆದಮೇಲೂ ಪಂದ್ಯದ ಫಲಿತಾಂಶ ಬದಲಾಯಿತೆ? ಹ್ಞುಂ ಹ್ಞುಂ!
ಟೀಮ್ ಇಂಡಿಯಾ ಸೋತಾಗ ಭಾರತದ ಕ್ರಿಕೆಟ್ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಅದೇ ಮೊದಲೇನಲ್ಲ; 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪಂದ್ಯವೊಂದನ್ನು ಸೋತಾಗಲೂ ಕ್ರಿಕೆಟಿಗರ ಮನೆಗಳಿಗೆ ಹಾನಿಯಾಗಿತ್ತು. ಕೋಪದಲ್ಲಿ ಮೂಗು ಕುಯ್ದುಕೊಳ್ಳುವ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ವಿಂಡೀಸ್ ಕ್ರಿಕೆಟ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಕಿವಿಮಾತು ಹೇಳಿದ್ದಾರೆ.
ದೇಸಿ ತಂಡ ಸೋತಾಗ ರೊಚ್ಚಿಗೇಳೋ ಭಾರತದ ಅಭಿಮಾನಿಗಳನ್ನುದ್ದೇಶಿಸಿ ಇಂಡಿಯಾ ಟುಡೇ ಜೊತೆ ಮಾತನಾಡುತ್ತ 67ರ ಹರೆಯದ ಸರ್ ವಿವ್ ರಿಚರ್ಡ್ಸ್, 'ತಂಡ ಸೋತಾಗ ಭಾರತದ ಕ್ರಿಕೆಟ್ ಅಭಿಮಾನಿಗಳು ಸಿಟ್ಟು ಪ್ರದರ್ಶಿಸೋದು ನಿಜಕ್ಕೂ ಕ್ಷುಲ್ಲಕ ಸಂಗತಿ' ಎಂದಿದ್ದಾರೆ.
'ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ತಾಳ್ಮೆ ಕಡಿಮೆ. ತಂಡದ ಸೋಲಿನಂತ ಸಣ್ಣ ಸಂಗತಿಗಳಿಗೂ ರೊಚ್ಚಿಗೇಳುತ್ತಾರೆ. ನಿಮ್ಮ ತಂಡದ ಆಟಗಾರರು ಅಲ್ಲಿಗೆ ಸೋಲೋದಕ್ಕಾಗಿ ಹೋಗೋಲ್ಲ. ಅವರಲ್ಲಿ ಹೋಗೋದೇ ಗೆಲ್ಲೋದಕ್ಕೆ. ಇವತ್ತು ನೀವು ಹೀರೋ ಆಗಲಾರಿರಿ. ಹಾಗಂತ ನಾಳೆ ನೀವು ಝೀರೋ ಕೂಡ ಆಗಿರಲಾರಿರಿ' ಎಂದು ರಿಚರ್ಡ್ಸ್ ಕಿವಿ ಮಾತು ಹೇಳಿದ್ದಾರೆ.
ಮುಖ್ಯವಾಗಿ 2019ರ ವಿಶ್ವಕಪ್ ಟೀರ್ನಿಯನ್ನು ಗಮನದಲ್ಲಿಟ್ಟುಕೊಂಡು ರಿಚರ್ಡ್ಸ್ ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ತಿಳಿ ಹೇಳಿದ್ದಾರೆ. ವಿಶ್ವಕಪ್ ಪಂದ್ಯಗಳ ವೇಳೆ ತಾಳ್ಮೆ ಕಾಪಾಡಿಕೊಳ್ಳುವಂತೆ ಅವರು ವಿನಂತಿಸಿಕೊಂಡಿದ್ದಾರೆ. ವಿಶ್ವಕಪ್ನಲ್ಲಿ ಜೂನ್ 5ರಂದು ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸ್ಪರ್ಧೆ ಆರಂಭಿಸಲಿದೆ. ಜೂನ್ 16ರಂದು ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.