ಇಂಗ್ಲೆಂಡ್ ಪ್ರವಾಸದಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ತಂಡದ ಗೆಲುವಿನಲ್ಲಿ ಮಿಂಚಿದ್ದ ವೇಗದ ಬೌಲರ್ ಆಕಾಶ್ ದೀಪ್, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಬರ್ಮಿಂಗ್ಹ್ಯಾಮ್ನಲ್ಲಿ 10 ವಿಕೆಟ್ ಪಡೆದು ಸಾಧನೆ ಮಾಡಿದ್ದ ಆಕಾಶ್ ದೀಪ್, ತಮ್ಮ ಬಿಗುವಿನ ದಾಳಿಯಿಂದ ಇಂಗ್ಲೆಂಡ್ ಬ್ಯಾಟರ್ಗಳಿಗೆ ಕಾಟ ನೀಡಿದ್ದರು. ಭಾರತಕ್ಕೆ ಬಂದ ಮೇಲೆ ಇವರು ತಮ್ಮ ಇಂಗ್ಲೆಂಡ್ ಪ್ರವಾಸದ ಅನುಭವ ಬಿಚ್ಚಿಟ್ಟಿದ್ದಾರೆ. ಅಲ್ಲದೆ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶುಭಮನ್ ಗಿಲ್ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.
ಟೀಮ್ ಇಂಡಿಯಾದ ಕೋಚ್ ಗೌತಮ್ ಗಂಭೀರ್ ಅವರ ಬಗ್ಗೆ ವೇಗಿ ಮಾತನಾಡುತ್ತಾ, "ನಿನ್ನ ಬಗ್ಗೆ ನಿನಗೆ ಹೆಚ್ಚಾಗಿ ತಿಳಿದಿಲ್ಲ. ನಾನು ನಿನಗೆ ಪದೇ ಪದೇ ಇದನ್ನೇ ಹೇಳುತ್ತಿದ್ದೇ. ನೀನು ಮಾಡಬಲ್ಲೇ ಎಂದು. ನೀನು ಯಾವಾಗಲೂ ಇದೇ ಸಮರ್ಪಣೆಯಿಂದ ಆಡಬೇಕು ಎಂದು ಕೋಚ್ ಹೇಳಿದ್ದರು ಎಂದು ಆಕಾಶ್ ದೀಪ್ ನೆನಪಿಸಿಕೊಂಡಿದ್ದಾರೆ. ಇನ್ನು ಮುಂದುವರೆದು ಮಾತನಾಡಿರುವ ಆಕಾಶ್, ಗೌತಮ್ ಭಾಯ್ ಒಬ್ಬ ಒಳ್ಳೆಯ ಕೋಚ್. ಅವರು ಯಾವಾಗಲೂ ಆಟಗಾರರಿಗೆ ಪ್ರೇರಣೆ ನೀಡುತ್ತಿರುತ್ತಾರೆ. ಅವರಿಗೆ ನನ್ನ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಗ್ಗೆ ನನಗಿಂತ ಹೆಚ್ಚಿನ ವಿಶ್ವಾಸವಿದೆ ಎಂದು ಆಕಾಶ್ ತಿಳಿಸಿದ್ದಾರೆ.

ಇನ್ನು ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಆಕಾಶ್ ದೀಪ್, ಈಗ ಶುಭಮನ್ ಗಿಲ್ ಮುಂದಾಳತ್ವದಲ್ಲಿ ಆಡುತ್ತಿದ್ದಾರೆ. ಈ ಬಗ್ಗೆ ಸಹ ಇವರಿಗೆ ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು "ಗಿಲ್ ಒಬ್ಬ ಉತ್ತಮ ನಾಯಕ. ಐಪಿಎಲ್ ವೇದಿಕೆಯಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಗಿಲ್, ಹೊಸ ನಾಯಕ ಎಂದು ಅನಿಸಲೇ ಇಲ್ಲ. ನಾನು ಗಿಲ್ ಮುಂದಾಳತ್ವದಲ್ಲೇ ದುಲೀಪ್ ಟ್ರೋಫಿಯನ್ನು ಆಡಿದ್ದೆ. ಅವರು ಒಬ್ಬ ಶಾಂತ್ ಸ್ವಭಾವದ ಆಟಗಾರ. ಗಿಲ್ ಬಳಿ ಹಲವು ಪ್ಲ್ಯಾನ್ಗಳು ಇದ್ದೇ ಇರುತ್ತವೆ. ಇದರಿಂದ ಮೈದಾನದಲ್ಲಿ ತಂಡವನ್ನು ಮುನ್ನಡೆಸಲು ಸಹಾಯವಾಗುತ್ತದೆ ಎಂದು ಶುಭಮನ್ ಗಿಲ್ ತಿಳಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ ನಾವು ಆಡಿದ ಮೊದಲ ನಾಲ್ಕು ಟೆಸ್ಟ್ ಪಂದ್ಯಗಳು ಇಂಗ್ಲೆಂಡ್ ಪಿಚ್ ಇದ್ದ ಹಾಗೆ ಇರಲಿಲ್ಲ. ಈ ಪಿಚ್ಗಳಲ್ಲಿ ಚೆಂಡು ಸ್ವಿಂಗ್ ಹಾಗೂ ಸೀಮ್ನಿಂದ ಯಾವುದೇ ಉಪಯೋಗ ನೀಡುತ್ತಿರಲಿಲ್ಲ. ಹೀಗಾಗಿ ನಾವು ಭಾರತದಲ್ಲಿ ಹಾಕಿದ ಹಾಗೆ ಬೌಲಿಂಗ್ ನಡೆಸಬೇಕಿತ್ತು ಎಂದು ತಿಳಿಸಿದ್ದಾರೆ. ಇನ್ನು ಮುಂದೆ ಮಾತನಾಡಿರುವ ವೇಗಿ ಆಕಾಶ್ ದೀಪ್ ಅಭ್ಯಾಸ ಪಂದ್ಯಗಳು ನನಗೆ ಬಹಳ ಮುಖ್ಯ. ಮೈದಾನದಲ್ಲಿ ನಾವು ಫಿಟ್ನೆಸ್ ಬಗ್ಗೆ ಹೆಚ್ಚಿನ ಒತ್ತನ್ನು ನೀಡುತ್ತೇವೆ. ಆದರೆ ಕೆಲವೊಮ್ಮೆ ಬೌಂಡರಿಗಳನ್ನು ತಡೆಯುವ ವೇಳೆ ಗಾಯಗಳು ಆಗುವುದು ಸಹಜ ಎಂದಿದ್ದಾರೆ.