
ವಿಶ್ವಕಪ್ಗೆ ಸಿದ್ಧವಾಗಲು ಈ ಪ್ರಯೋಗ ಮಾಡ್ತಿದ್ದೇವೆ
"ವಿಶ್ವಕಪ್ನಲ್ಲಿ ಸವಾಲು ಎದುರಿಸಲು ತಂಡ ಸಿದ್ದವಾಗಬೇಕಿದೆ. ವಿಶ್ವಕಪ್ನಲ್ಲಿ ಆಡುವಾಗ ತಂಡದ ಎಲ್ಲಾ ರೀತಿಯಿಂದಲೂ ಸಮತೋಲನ ಹೊಂದಿರಬೇಕು, ಹಾರ್ದಿಕ್ ಪಾಂಡ್ಯ ವಾಪಸ್ ಬಂದಿರುವುದರಿಂದ ನಾವು ಮೂವರು ವೇಗದ ಬೌಲರ್ಗಳೊಂದಿಗೆ ಆಡಿದ್ದೇವೆ" ಎಂದು ಹೇಳಿದರು.
"ಮೂವರು ಫಾಸ್ಟ್ ಬೌಲರ್, ಇಬ್ಬರು ಸ್ಪಿನ್ನರ್ಗಳೊಂದಿಗೆ ಆಡಿದಾಗ ಏನಾಗಬಹುದು ಎಂದು ತಿಳಿದುಕೊಳ್ಳುವುದು ಒಳ್ಳೆಯದು, ಈ ಸೋಲುಗಳು ನಮಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತವೆ" ಎಂದು ರೋಹಿತ್ ಶರ್ಮಾ ಹೇಳಿದರು.

ವಿಶ್ವಕಪ್ ತಂಡ ಬಹುತೇಕ ಅಂತಿಮ
ನಾವು ಇತ್ತೀಚೆಗೆ ಆಡಿದ ಮೂರು ನಾಲ್ಕು ಸರಣಿಯಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಿದ್ದೇವೆ. ವಿಶ್ವಕಪ್ಗಾಗಿ ತಂಡವನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಇನ್ನೂ ಕೆಲವೊಂದು ವಿಚಾರಗಳನ್ನು ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ರೋಹಿತ್ ಶರ್ಮಾ ಹೇಳಿದರು.
ನಾವು ಇನ್ನೂ ಎರಡು ಸರಣಿಗಳನ್ನು ಆಡಬೇಕಾಗಿದೆ ನಂತರ ವಿಶ್ವಕಪ್ಗೆ ಹೋಗುತ್ತೇವೆ. ನಮ್ಮ ತಂಡವನ್ನು ಪ್ರಕಟಿಸುವವರೆಗೆ ನಾವು ಕೆಲವು ಆಟಗಾರರನ್ನು ಪರೀಕ್ಷಿಸಬಹುದು ಎಂದು ಹೇಳಿದ್ದಾರೆ.

ಹೂಡಾಗೆ ಬೌಲಿಂಗ್ ನೀಡದ ನಿರ್ಧಾರ ಸಮರ್ಥನೆ
ದಿನೇಶ್ ಕಾರ್ತಿಕ್ ಬದಲಾಗಿ ದೀಪಕ್ ಹೂಡಾರನ್ನು ಆಯ್ಕೆ ಮಾಡಿದ್ದರ ಬಗ್ಗೆ, ದೀಪಕ್ ಹೂಡಾಗೆ ಯಾಕೆ ಬೌಲಿಂಗ್ ನೀಡಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ರೋಹಿತ್ ಶರ್ಮಾ, "ಹೌದು, ನಮಗೆ ಆರನೇ ಬೌಲಿಂಗ್ ಆಯ್ಕೆ ಇದೆ, ಆದರೆ ನಾವು ಐದು ಆಯ್ಕೆಗಳೊಂದಿಗೆ ಪ್ರಯತ್ನಿಸಲು ಬಯಸಿದ್ದೇವೆ ಮತ್ತು ಏನಾಗುತ್ತದೆ ಮತ್ತು ಏನಾಗುವುದಿಲ್ಲ ಎಂಬುದನ್ನು ನೋಡಲು ನಾವು ಬಯಸಿದ್ದೇವೆ" ಎಂದು ಸಮರ್ಥನೆ ನೀಡಿದರು.
"ಹೂಡಾ ಇದ್ದರು, ಆದರೆ ಶ್ರೀಲಂಕಾದ ಇಬ್ಬರು ಆರಂಭಿಕ ಬಲಗೈ ಆಟಗಾರರು ಸೆಟ್ ಆಗಿದ್ದರು, ನಮ್ಮ ಆಕ್ರಮಣಕಾರಿ ಸ್ಪಿನ್ನರ್ಗಳಾದ ಅಶ್ವಿನ್ ಮತ್ತು ಚಾಹಲ್ ಮೂಲಕ ನಾವು ವಿಕೆಟ್ಗಳನ್ನು ತೆಗೆಯಲು ನೋಡುತ್ತಿದ್ದ ಕಾರಣ ದೀಪಕ್ ಹೂಡಾಗೆ ಬೌಲಿಂಗ್ ನೀಡಲಿಲ್ಲ" ಎಂದು ಹೇಳಿದರು. ಆರಂಭದಲ್ಲೇ ವಿಕೆಟ್ ಪಡೆದಿದ್ದರೆ ನಂತರ ದೀಪಕ್ ಹೂಡಾ ಅವರಿಂದ ಬೌಲಿಂಗ್ ಮಾಡಿಸುವ ಆಲೋಚನೆ ಇತ್ತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಏಷ್ಯಾಕಪ್ ತಂಡವೇ ವಿಶ್ವಕಪ್ಗೆ?
ನಾಯಕ ರೋಹಿತ್ ಶರ್ಮಾ ಹೇಳಿಕೆಯ ಪ್ರಕಾರ ಏಷ್ಯಾಕಪ್ನಲ್ಲಿ ಆಡುತ್ತಿರುವ ತಂಡವೇ ವಿಶ್ವಕಪ್ನಲ್ಲಿ ಆಡುವ ಸಾಧ್ಯತೆ ಇದೆ. ಆದರೆ ಬೌಲಿಂಗ್ ವಿಭಾಗದಲ್ಲಿ ಮಾತ್ರ ಕೆಲವು ಬದಲಾವಣೆಗಳನ್ನು ಕಾಣಬಹುದಾಗಿದೆ. ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಗಾಯದಿಂದ ವಾಪಸ್ ಆದರೆ ಭಾರತದ ಬೌಲಿಂಗ್ ವಿಭಾಗ ಸುಧಾರಿಸಲಿದೆ.
ಆದರೆ, ಏಷ್ಯಾಕಪ್ಗಾಗಿ ಹಿರಿಯ ಅನುಭವಿ ಆಟಗಾರ ಮೊಹಮ್ಮದ್ ಶಮಿ ಕೈಬಿಟ್ಟಿರುವುದರ ಬಗ್ಗೆಯೂ ಭಾರಿ ಟೀಕೆ ವ್ಯಕ್ತವಾಗಿದ್ದು, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.


Click it and Unblock the Notifications