ತವರಿನಲ್ಲಿ ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಯನ್ನಾಡಲು ಸಜ್ಜಾಗುತ್ತಿದೆ. ಭಾರತದಲ್ಲಿಯೇ ಈ ಬಾರಿಯ ವಿಶ್ವಕಪ್ ಟೂರ್ನಿ ಆಯೋಜನೆಯಾಗುತ್ತಿರುವ ಕಾರಣ ಬಹುತೇಕ ಅಭಿಮಾನಿಗಳು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಎಂದಿನಂತೆಯೇ ಭಾರತದ ಮೇಲೆ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅಲ್ಲದೆ ಭಾರತ ಈ ಬಾರಿಯ ವಿಶ್ವ ಗೆಲ್ಲುವ ನೆಚ್ಚಿನ ತಂಡವಾಗಿಯೂ ಗುರುತಿಸಿಕೊಂಡಿದೆ.
ಇನ್ನು ಟೀಮ್ ಇಂಡಿಯಾದ ಇತ್ತೀಚಿನ ಫಾರ್ಮ್ ಕೂಡ ಭಾರತ ಈ ಬಾರಿಯ ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶಣ ನೀಡುವ ಭರವಸೆ ಮೂಡಿಸಿದೆ. ಏಷ್ಯಾಕಪ್ನಲ್ಲಿ ಗೆಲುವು, ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವು, ಶ್ರೇಯಾಂಕದಲ್ಲಿ ನಂಬರ್ 1 ಪಟ್ಟ ಇದೆಲ್ಲವೂ ಭಾರತದ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಇನ್ನು ವಿಶ್ವಕಪ್ಗೆ ಆಯ್ಕೆ ಮಾಡಿರುವ ಭಾರತ ತಂಡ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿಕೊಂಡ ಬಳಿಕವೂ ಅದ್ಭುತವಾಗಿ ಕಾಣಿಸುತ್ತಿದೆ. ಸ್ಟಾರ್ ಆಲ್ರೌಂಡರ್ ಗಾಯದ ಕಾರಣದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದು ಸ್ಟಾರ್ ಆಟಗಾರ ಆರ್ ಅಶ್ವಿನ್ಗೆ ತಂಡದಲ್ಲಿ ಸ್ಥಾನ ದೊರೆತಿದೆ.

ಇನ್ನು 36ರ ಹರೆಯದ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಅವರು ಕೊನೆಯ ಕ್ಷಣದಲ್ಲಿ ತಂಡಕ್ಕೆ ಸೇರ್ಪಡೆಯಾಗಿರುವುದು ಬಹುತೇಕ ಭಾರತೀಯ ಅಭಿಮಾನಿಗಳಿಗೆ ಖುಷಿ ನೀಡಿದೆ. ಯಾಕೆಂದರೆ ಇದು ಭಾರತದ ಬೌಲಿಂಗ್ ವಿಭಾಗಕ್ಕೆ ಆಫ್-ಸ್ಪಿನ್ ಆಯ್ಕೆಯನ್ನು ನೀಡುತ್ತದೆ. ಅಲ್ಲದೆ ಭಾರತದ ನೆಲದಲ್ಲಿ ಅಶ್ವಿನ್ ಯಾವಾಗಲೂ ಪರಿಣಾಮಕಾರಿ ಎನಿಸಿಕೊಂಡಿದ್ದು ತಂಡಕ್ಕೆ ಹೆಚ್ಚಿನ ಬಲ ನೀಡುವುದರಲ್ಲಿ ಅನುಮಾನವಿಲ್ಲ.
ಇನ್ನು ಅಶ್ವಿನ್ ಕೂಡ ಭಾರತ ತಂಡದಲ್ಲಿ ಕೊನೆಯ ಕ್ಷಣದಲ್ಲಿ ತನಗೆ ಅವಕಾಶ ದೊರೆತಿರುವುದು ತನ್ನ ಅದೃಷ್ಟ ಎಂದೇ ಭಾವಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ಮಳೆಗೆ ಆಹುತಿಯಾದ ಕಾರಣ ಈ ಸಂದರ್ಭದಲ್ಲಿ ಮಾಜಿ ನಾಯಕಿ ಹಾಗೂ ಕಾಮೆಂಟೇಟರ್ ಅಂಜುಮ್ ಚೋಪ್ರಾ ಜೊತೆಗೆ ಮಾತನಾಡಿದ ಆರ್ ಅಶ್ವಿನ್ ತಮ್ಮ ನಿವೃತ್ತಿಯ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಆರ್ ಅಶ್ವಿನ್ ಇದು ತನ್ನ ಕೊನೆಯ ವಿಶ್ವಕಪ್ ಟೂರ್ನಿಯಾಗಿರಬಹುದು ಎಂದು ಹೇಳುವ ಮೂಲಕ ಆರ್ ಅಶ್ವಿನ್ ನಿವೃತ್ತಿಯ ಸುಳಿವು ನೀಡಿದ್ದಾರೆ. ಗಮನಾರ್ಹ ಅಂಶವೆಂದರೆ ಆರ್ ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂಲಕ ಸುದೀರ್ಘ ಕಾಲದ ಬಳಿಕ ತಂಡಕ್ಕೆ ಕಮ್ಬ್ಯಾಕ್ ಮಾಡಿ ಎರಡು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಅದಕ್ಕೂ ಮುನ್ನ ಅವರು ಆಡಿದ್ದ 2022ರ ಜನವರಿಯಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧದ ಸರಣಿಯಲ್ಲಿ. ಹೀಗಾಗಿ ಅವರು ಏಕದಿನ ವಿಶ್ವಕಪ್ನ ಯೋಜನೆಯಲ್ಲಿಯೇ ಇರಲಿಲ್ಲ.
ಇದೇ ಕಾರಣದಿಂದಾಗಿ ಅಂಜುಮ್ ಚೋಪ್ರಾ ಜೊತೆಗಿನ ಸಂವಾದಲ್ಲಿ ಆರ್ ಅಶ್ವಿನ್ ವಿಶ್ವಕಪ್ ತಂಡದಲ್ಲಿ ತನಗೆ ಸ್ಥಾನ ದೊರೆತಿರುವುದು ಅನಿರೀಕ್ಷಿತ ಎನ್ನುವ ಮಾತನ್ನು ಹೇಳಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಇಲ್ಲಿರುತ್ತೇನೆ ಎನ್ನುವ ಯೋಜನೆಯನ್ನು ಕೂಡ ಮಾಡಿರಲಿಲ್ಲ. ಇದು ನನ್ನ ಕೊನೆಯ ವಿಶ್ವಕಪ್ ಆಗಿರಬಹುದು. ಹಾಗಾಗಿ ನನ್ನಿಂದ ಸಾಧ್ಯವಾದಷ್ಟು ಈ ಟೂರ್ನಮೆಂಟನ್ನು ಆನಂದಿಸಲು ಪ್ರಯತ್ನಿಸುತ್ತೇನೆ" ಎಂದಿದ್ದಾರೆ.
ಗಮನಾರ್ಹ ಅಂಶವೆಂದರೆ ಆರ್ ಅಶ್ವಿನ್ 2011ರಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಭಾರತದಲ್ಲಿ ಆರ್ ಅಶ್ವಿನ್ ಅದ್ಭುತವಾದ ದಾಖಲೆಯನ್ನು ಹೊಂದಿದ್ದಾರೆ. ಆದರೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಅಶ್ವಿನ್ಗೆ ಹೇಳಿಕೊಳ್ಳುವಷ್ಟು ಸುಲಭವಿಲ್ಲ ಎನ್ನುವುದು ಕೂಡ ನಿಜ. ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ ಭಾರತದ ಮೊದಲ ಆದ್ಯತೆಯ ಸ್ಪಿನ್ನರ್ಗಳು ಆಗಿರಲಿದ್ದಾರೆ.