
ಸಿಡ್ನಿ, ಜನವರಿ 11: ಕಾಫೀ ವಿತ್ ಕರಣ್ ಟಿವಿ ಟಾಕ್ ಶೋನಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ನೀಡಿರುವ ಹೇಳಿಕೆ ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ. ಅವರ ಉದ್ಧಟತನಕ್ಕೆ ತಂಡ ಜವಾಬ್ದಾರಿಯಲ್ಲ. ಇಬ್ಬರ ಹೇಳಿಕೆಗೆ ತಂಡದ ಬೆಂಬಲವೂ ಇಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖಡಕ್ ಆಗಿ ಹೇಳಿದ್ದಾರೆ.
ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೊಹರ್ ನಡೆಸಿಕೊಡುವ ಕಾಫೀ ವಿತ್ ಕರಣ್ ಜನಪ್ರಿಯ ಟಾಕ್ ಶೋನಲ್ಲಿ ಪಾಲ್ಗೊಂಡಿದ್ದ ಪಂಡ್ಯ, ಮಹಿಳೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಲಗಾಮೆ ಇಲ್ಲದೆ ಮಾತಾಡಿದ್ದರು. ಇದು ಕ್ರೀಡಾಭಿಮಾನಿಗಳಲ್ಲದೆ ಬಿಸಿಸಿಐಯ ಸಿಡುಕಿಗೂ ಕಾರಣವಾಗಿತ್ತು.
ಹೇಳಿಕೆ ವಿವಾದ ಜೋರಾದ ಬಳಿಕ ಹಾರ್ದಿಕ್ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಟ್ವೀಟ್ ಮಾಡಿದರಾದರೂ ಬಿಸಿಸಿಯನ್ನು ಅದು ತಣ್ಣಗಾಗಿಸಿರಲಿಲ್ಲ. ಪರಿಣಾಮವಾಗಿ ಹಾರ್ದಿಕ್ ಮತ್ತು ರಾಹುಲ್ ಇಬ್ಬರನ್ನೂ ಎರಡು ಏಕದಿನ ಪಂದ್ಯಗಳಿಂದ ನಿಷೇಧ ಹೇರುವ ನಿರ್ಧಾರಕ್ಕೆ ಬಿಸಿಸಿಐ ಬಂದಿದೆ.
ಈಗ ಕೊಹ್ಲಿ ಕೂಡ ಪ್ರತಿಕ್ರಿಯಿಸಿ ಆಟಗಾರರ ಮನೋಭಾವದ ಬಗ್ಗೆ ಕಿಡಿಕಾರಿದ್ದಾರೆ. 'ಇಂಥ ಹೇಳಿಕೆ ಕೊಟ್ಟರೆ ಎಂಥ ಆಟಗಾರನಿಗೂ ಅದರಿಂದ ಹೊಡೆತ ಬಿದ್ದೇ ಬೀಳುತ್ತೆ. ಇಂಥ ಹೇಳಿಕೆ ನೀಡುವ ಮೊದಲು ಆಟಗಾರರು ಕೊಂಚ ಯೋಚಿಸಬೇಕು' ಎಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಶುಕ್ರವಾರ (ಜನವರಿ 11) ಕೊಹ್ಲಿ ಹೇಳಿದರು.